ಕಲಬುರಗಿ: ಮನೆಯ ಬಾಗಿಲಿನ ಸೆಂಟ್ರಲ್ ಲಾಕ್ ಮುರಿದು ಅಲ್ಮರಾದಲ್ಲಿ ಇಟ್ಟಿದ್ದ 4,01,000 ರು.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ಇಲ್ಲಿನ ಅಯೋಧ್ಯ ನಗರದಲ್ಲಿ ನಡೆದಿದೆ. ಹಣಮಂತ ಭಜಂತ್ರಿ ಎಂಬುವವರ ಮನೆಯಲ್ಲಿ ಕಳವಾಗಿದ್ದು, ಅವರು ಪತ್ನಿಯೊಂದಿಗೆ ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಕ್ಕೆ ಹೋದ ವೇಳೆ ಕಳ್ಳತನ ನಡೆದಿದೆ ಎಂದು ತಿಳಿದು ಬಂದಿದೆ. ಮನೆಯ ಅಲಮಾರಾದಲ್ಲಿಟ್ಟಿದ್ದ 1.50 ಲಕ್ಷ ರು. ಮೌಲ್ಯದ 30 ಗ್ರಾಂ. ಬಂಗಾರದ 3 ಸುತ್ತುಂಗುರ, 1.50 ಲಕ್ಷ ರು. ಮೌಲ್ಯದ 30 ಗ್ರಾಂ. ಬಂಗಾರದ ಎರಡು ಎಳೆಯ ತಾಳಿ ಸರ, 6000 ರು. ಮೌಲ್ಯದ 100 ಗ್ರಾಂ. ಬೆಳ್ಳಿ ಕಾಲು ಚೈನ್ ಮತ್ತು ಮಕ್ಕಳ ಕಾಲಿನ ಕಡಗ ಸೇರಿ ಒಟ್ಟು 60 ಗ್ರಾಂ. ಬಂಗಾರ, 100 ಗ್ರಾಂ. ಬೆಳ್ಳಿ, ಮತ್ತು 95 ಸಾವಿರ ರು. ನಗದು ಸೇರಿದಂತೆ ಒಟ್ಟು 4.1 ಲಕ್ಷ ರು. ಮೌಲ್ಯದ ನಗನಾಣ್ಯವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಈ ಸಂಬಂಧ ಹಣಮಂತ ಅವರ ಸಹೋದರ ರಾಜಕುಮಾರ ಭಜಂತ್ರಿ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.