ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಕೊಳ್ಳೇಗಾಲ ತಾಲೂಕಿನ ಇಬ್ಬರು ಯುವ ಪ್ರೇಮಿಗಳು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಮುಖಂಡರ ನೇತೃತ್ವದಲ್ಲಿ ವಿವಾಹವಾದರು.
ಕೊಳ್ಳೇಗಾಲ: ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ತಾಲೂಕಿನ ಇಬ್ಬರು ಯುವ ಪ್ರೇಮಿಗಳು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ವಾದ ಮುಖಂಡರ ನೇತೃತ್ವದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕೊತ್ತನೂರು ಗ್ರಾಮದ ಕೀರ್ತಿ ಮತ್ತು ಇಕ್ಕಡಹಳ್ಳಿ ಗ್ರಾಮದ ಕುಮಾರಿ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಯುವತಿ ಕುಮಾರಿ ಮನೆ ಬಿಟ್ಟು ತನ್ನ ಪ್ರಿಯಕರನ ಜೊತೆಗೆ ತೆರಳಿದ್ದಳು. ಇತ್ತ ಕುಮಾರಿ ಪೋಷಕರು ನಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಕೊಳ್ಳೇಗಾಲ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಠಾಣೆಯಲ್ಲಿ ದೂರು ದಾಖಲಾಗಿರುವ ಪ್ರೇಮಿಗಳು ಕಡೆಗೆ ಅಂಬೇಡ್ಕರ್ವಾದ ದಸಂಸ ರಾಜ್ಯ ಸಂಘಟನೆ ಸಂಚಾಲಕ ದೊಡ್ಡಿಂದುವಾಡಿ ಕೆ.ಸಿದ್ದರಾಜು ಅವರಿಗೆ ತಾವು ಪರಸ್ಪರ ಪ್ರೀತಿಸುತ್ತಿದ್ದು ವಿವಾಹಕ್ಕೆ ನೀವು ನಮಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ಹಿನ್ನೆಲೆಯಲ್ಲಿ ದೊಡ್ಡಿಂದುವಾಡಿ ಸಿದ್ದರಾಜು ಮತ್ತು ತಾಲೂಕು ಸಂಚಾಲಕ ಕೊತ್ರನೂರು ಚಿಕ್ಕ ದೊಡ್ಡಯ್ಯ ಅವರು ಎರಡೂ ಕಡೆಯ ಪೋಷಕರನ್ನು ಭೇಟಿ ಮಾಡಿ ಇಬ್ಬರು ಪ್ರೇಮಿಗಳನ್ನು ಬೇರ್ಪಡಿಸಬಾರದು ಎಂದು ಮನವರಿಕೆ ಮಾಡಿ ವಿವಾಹ ಮಾಡಿ ಕೊಡಲು ಒಪ್ಪಿಸಿದರು. ನಂತರ ಎರಡೂ ಮನೆಯ ಪೋಷಕರು ಗ್ರಾಮದ ಮುಖಂಡರು ರೈತ ಸಂಘದ ಮುಖಂಡರು ಠಾಣೆಗೆ ತೆರಳಿ ಇಬ್ಬರೂ ವಯಸ್ಕರಾಗಿದ್ದು ಪರಸ್ಪರ ಮದುವೆಗೆ ಒಪ್ಪಿದ್ದಾರೆ ಎಂದು ಪೋಲೀಸರಿಗೆ ತಿಳಿಸಿದರು. ಪೋಲಿಸರು ಇಬ್ಬರಿಂದಲೂ ಹೇಳಿಕೆ ಪಡೆದ ನಂತರ ಹೊರಗಡೆ ಪರಸ್ಪರ ಹಾರ ಬದಲಾಯಿಸಿಕೊಂಡು ಸಿಹಿ ಹಂಚಿ ಪ್ರೇಮಿಗಳು ಸಂಭ್ರಮಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.