ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಜಾಕ್‌ ಪತ್ತೆ

KannadaprabhaNewsNetwork |  
Published : Aug 14, 2024, 12:55 AM IST
ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಈಶ್ವರ ಮಲ್ಪೆ.  | Kannada Prabha

ಸಾರಾಂಶ

ಮುಳುಗುತಜ್ಞ ಈಶ್ವರ ಮಲ್ಪೆ ಶಿರೂರು ಗುಡ್ಡ ಕುಸಿತದ ಸ್ಥಳಕ್ಕಾಗಮಿಸಿ, ಶಾಸಕ ಸತೀಶ ಸೈಲ್ ಅವರ ಸೂಚನೆಯಂತೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕೇರಳದ ಅರ್ಜುನ ಚಲಾಯಿಸುತ್ತಿದ್ದ ಭಾರತ ಬೆಂಜ್ ಲಾರಿಯ ಜಾಕ್ ದೊರೆತಿದ್ದು, ಇದನ್ನು ಸ್ಥಳದಲ್ಲಿದ್ದ ಲಾರಿ ಮಾಲೀಕ ಖಚಿತಪಡಿಸಿದ್ದಾರೆ.

ಅಂಕೋಲಾ: ತಾಲೂಕಿನ ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ಗಂಗಾವಳಿ ನದಿಯಲ್ಲಿ ಕಣ್ಮರೆಯಾದವರ ಪತ್ತೆಗಾಗಿ ಮಂಗಳವಾರ ಮತ್ತೆ ಕಾರ್ಯಾಚರಣೆ ಆರಂಭವಾಗಿದ್ದು, ಘಟನೆ ನಡೆದು ೨೮ ದಿನಗಳ ಬಳಿಕ ನದಿಯಲ್ಲಿ ಕೇರಳದ ಅರ್ಜುನ ಲಾರಿಯ ಜಾಕ್ ಪತ್ತೆಯಾಗಿದೆ.ಕಾರ್ಯಾಚರಣೆಗೆ ಭಾರಿ ಮಳೆ ಮತ್ತು ಗಂಗಾವಳಿ ನದಿಯಲ್ಲಿ ನೀರಿನ ಹರಿವಿನ ವೇಗ ಹೆಚ್ಚಿದ್ದರಿಂದ ಕಾರ್ಯಾಚರಣೆಯನ್ನು ಕೆಲವು ದಿನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮತ್ತೆ ಮಂಗಳವಾರ ಕಣ್ಮರೆಯಾದವರ ಪತ್ತೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಮುಳುಗುತಜ್ಞ ಈಶ್ವರ ಮಲ್ಪೆ ಶಿರೂರು ಗುಡ್ಡ ಕುಸಿತದ ಸ್ಥಳಕ್ಕಾಗಮಿಸಿ, ಶಾಸಕ ಸತೀಶ ಸೈಲ್ ಅವರ ಸೂಚನೆಯಂತೆ ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕೇರಳದ ಅರ್ಜುನ ಚಲಾಯಿಸುತ್ತಿದ್ದ ಭಾರತ ಬೆಂಜ್ ಲಾರಿಯ ಜಾಕ್ ದೊರೆತಿದ್ದು, ಇದನ್ನು ಸ್ಥಳದಲ್ಲಿದ್ದ ಲಾರಿ ಮಾಲೀಕ ಖಚಿತಪಡಿಸಿದ್ದಾರೆ.ಬುಧವಾರವು ಕಾರ್ಯಾಚರಣೆ ನಡೆಯಲಿದೆ. ಈಶ್ವರ ಮಲ್ಪೆ ಜತೆ ಇನ್ನೂ ೫ ಜನ ಮುಳುಗು ಪರಿಣಿತರು ಆಗಮಿಸಿ ಕಾರ್ಯಾಚರಣೆಗಿಳಿಯಲಿದ್ದಾರೆ. ಅಲ್ಲದೆ ಅತ್ಯಾಧುನಿಕ ಸಲಕರಣೆಯೊಂದಿಗೆ ಕಾರ್ಯಾಚರಣೆ ನಡೆಯಲಿದೆ ಎಂದು ಈಶ್ವರ ಮಲ್ಪೆ ತಿಳಿಸಿದ್ದಾರೆ.

ಮೂವರ ಶವ ಪತ್ತೆಯಾಗಬೇಕಿದೆ

ಶಿರೂರು ಗುಡ್ಡ ಕುಸಿತದಿಂದಾಗಿ ಒಂದೇ ಕುಟುಂಬದ ಐವರು ಸೇರಿದಂತೆ ೧೧ ಜನರು ನಾಪತ್ತೆಯಾಗಿದ್ದು, ಅವರಲ್ಲಿ ೮ ಜನರ ಶವ ಪತ್ತೆಯಾಗಿದೆ. ಇನ್ನು ಮೂವರು ಪತ್ತೆಯಾಗಬೇಕಾಗಿದೆ. ಅದರಲ್ಲಿ ಜಗನ್ನಾಥ, ಲೊಕೇಶ ಮತ್ತು ಕೇರಳದ ಅರ್ಜುನ ಹಾಗೂ ಆತನ ಭಾರತ ಬೆಂಜ್ ಲಾರಿಯನ್ನು ಪತ್ತೆ ಕಾರ್ಯ ನಡೆಯಬೇಕಿದೆ.

ಶಾಸಕರ ಸೂಚನೆಯಂತೆ ಶೋಧ

ಮಳೆ ಪ್ರಮಾಣ ಕಡಿಮೆಯಾಗಿರುವುದನ್ನು ಗಮನಿಸಿ ಹಾಗೂ ಗಂಗಾವಳಿಯಲ್ಲಿ ನೀರಿನ ಸೆಳೆತ ಇಲ್ಲದಿರುವುದನ್ನು ಗಮನಿಸಿ ಸ್ಥಳಕ್ಕೆ ಮಂಗಳವಾರ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಆಗಮಿಸಿದ್ದರು. ಆದರೆ ಜಿಲ್ಲಾಡಳಿತ ಇವರಿಗೆ ಮಾತ್ರ ನದಿಗೆ ಇಳಿಯದಂತೆ ಸೂಚಿಸಿತ್ತು. ಈಶ್ವರ ಅವರು ಶೋಧ ಕಾರ್ಯಕ್ಕೆ ಇಂತಹ ಸಮಯ ಮತ್ತೆ ಸಿಗುವುದು ಕಷ್ಟ ಎಂದು ಬೇಸರ ವ್ಯಕ್ತಪಡಿಸಿದರು. ಆಗ ಶಾಸಕ ಸತೀಶ ಸೈಲ್ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿದರು. ಜತೆಗೆ ಸ್ಥಳೀಯ ಮೀನುಗಾರರ ಬೋಟ್, ಮೀನುಗಾರರನ್ನು ವ್ಯವಸ್ಥೆ ಮಾಡಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ