ಕನ್ನಡಪ್ರಭ ವಾರ್ತೆ ಮೈಸೂರು
ಕೊಲ್ಕತ್ತಾ ಆರ್.ಜಿ.ಕರ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯ ಮೇಲೆ ಆಗಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಜಗತ್ತೇ ತಲೆ ತಗ್ಗಿಸುವ ವಿಷಯವಾಗಿದೆ ಎಂದು ಜಯದೇವ ಹೃದ್ಯೋಗ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ, ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.ಮೈಸೂರು ಜಯದೇವ ಆಸ್ಪತ್ರೆಗೆ ಸಂಸದರಾದ ಬಳಿಕ ಪ್ರಥಮ ಬಾರಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಮೆಡಿಕಲ್ ಕಾಲೇಜುಗಳಲ್ಲಿನ ಆಸ್ಪತ್ರೆಗಳಲ್ಲಿ ಶೇ. 70 ಕೆಲಸವನ್ನು ಹಿರಿಯ ವೈದ್ಯರು, ಸ್ನಾತಕೋತ್ತರ ವೈದ್ಯರು ಮಾಡುತ್ತಾರೆ. ಈ ವೈದ್ಯರಿಗೆ ಹೆಚ್ಚು ರಕ್ಷಣೆಯನ್ನು ಸರ್ಕಾರ ನೀಡಬೇಕು. ದೇಶದಲ್ಲಿರುವ 706 ವೈದ್ಯಕೀಯ ಕಾಲೇಜುಗಳಲ್ಲಿ ಆಡಿಟ್ ಆಗಬೇಕು. ಮಹಿಳಾ ವೈದ್ಯರಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿಗಳಿರಬೇಕು. ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದ 12 ಗಂಟೆ ಒಳಗೆ ಆಸ್ಪತ್ರೆಯ ಮುಖ್ಯಸ್ಥರು ಪೊಲೀಸರಿಗೆ ಕಂಪ್ಲೇಂಟ್ ಕೊಡಬೇಕು ಎಂದರು.
ಗ್ರಾಮೀಣ ಆಸ್ಪತ್ರೆ ಮತ್ತು ಜಿಲ್ಲಾ ಮಟ್ಟದಲ್ಲಿ ವೈದ್ಯಕೀಯ ಸಿಬ್ಬಂದಿ ನೇಮಕಾತಿ ಆಗುತ್ತಿಲ್ಲ. ಇದರಿಂದ ವೈದರ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ವೈದ್ಯರ ಆಯಸ್ಸು 10 ರಿಂದ 12 ವರ್ಷ ಕಡಿಮೆಯಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ವೈದ್ಯರಿಗೆ ಕನಿಷ್ಟ 75 ಸಾವಿರ ಸಂಬಳ ನೀಡಬೇಕು. ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದು, ಇದನ್ನುತಡೆಗಟ್ಟಲುಇರುವಕಾನೂನನ್ನು ಬಲಪಡಿಸಬೇಕು. ಯಾವುದೇ ವೈದ್ಯರ ಮೇಲೆ ರೋಗಿಗಳ ಪೋಷಕರು ದೂರು ಕೊಟ್ಟರೆ ಪ್ರಾಥಮಿಕ ತನಿಖೆ ಆದ ನಂತರ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದ ಅವರು, ರಾಜ್ಯದಲ್ಲಿ ಡೆಂಘೀ, ಚಿಕೂನ್ ಗುನ್ಯ, ಜೀಕಾ ಕಾಯಿಲೆ ಹೆಚ್ಚಾಗುತ್ತಿದ್ದು, ಸರ್ಕಾರ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ್, ಡಾ. ಸಂತೋಷ್, ಡಾ. ರಾಜೀತ್, ಡಾ. ವೀಣಾನಂಜಪ್ಪ, ಡಾ.ಎಸ್. ಹೇಮಾ, ಡಾ. ಜಯಪ್ರಕಾಶ್, ಡಾ. ಭಾರತಿ, ಡಾ. ಕುಮಾರ್, ಡಾ. ಮಂಜುನಾಥ್, ಡಾ. ಅಶ್ವಿನಿ, ಡಾ. ವಿಶ್ವನಾಥ್, ಡಾ. ಚಂದನ್, ಡಾ. ದೇವರಾಜ್, ಆರ್ಎಂಒ ಡಾ. ಪಶುಪತಿ, ನರ್ಸಿಂಗ್ ಅಧೀಕ್ಷಕಿ ಯೋಗಲಕ್ಷ್ಮಿ, ಹಿರಿಯ ಶುಶ್ರೂಷಾಧಿಕಾರಿ ಹರೀಶ್ ಕುಮಾರ್, ಪಿಆರ್.ಒ ವಾಣಿ ಮೋಹನ್, ಲೋಬೋ, ಸಯ್ಯದ್, ಮಹೇಂದ್ರ ಇದ್ದರು.