ಜಮೀನುಗಳಿಗೆ ತೆರಳಿ ಪರಿಶೀಲನೆ ಮಾಡಿದ ಅಧಿಕಾರಿಗಳು । ಹತೋಟಿಗೆ ಸಲಹೆ
ಕನ್ನಡಪ್ರಭ ವಾರ್ತೆ ಕುಕನೂರುತಾಲೂಕಿನ ತಳಕಲ್ಲ, ತಳಬಾಳ, ನಿಂಗಾಪುರ, ಇಟಗಿ ಹಾಗೂ ಇತರ ಗ್ರಾಮಗಳಲ್ಲಿ ಹೆಸರು ಬೆಳೆಯಲ್ಲಿ ಕುಡಿ ಸಾಯುವ ನಂಜು ರೋಗ ಇದೆ ಎಂದು ಪರಿಶೀಲನೆ ಮಾಡಿದ ಕೊಪ್ಪಳ ಕೃಷಿ ಇಲಾಖೆ, ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಅಧಿಕಾರಿಗಳು ಹೇಳಿದರು. ಅಲ್ಲದೆ ನಾನಾ ಹತೋಟಿ ಕ್ರಮ ಹಾಗೂ ರೋಗದ ಲಕ್ಷಣಗಳನ್ನು ತಿಳಿಸಿದರು.
ಜಮೀನುಗಳಿಗೆ ತೆರಳಿ ಮಾಹಿತಿ ನೀಡಿದ ಅಧಿಕಾರಿಗಳು, ಗಿಡ ಗಿಡ್ಡವಾಗುವುದು, ಕುಡಿ ಎಲೆಯಲ್ಲಿ ತಿಳಿಹಳದಿ ಬಣ್ಣದ ವೃತ್ತಾಕಾರದ ಮಚ್ಚೆಗಳು ಕಂಡು ಬರುವುದು, ಗಿಡದಲ್ಲಿ ಹೂ ಇಲ್ಲದಿರುವುದು, ಕುಡಿ ಸಾಯುವುದು ಹಾಗೂ ಹೊಸ ಚಿಗುರು ಬರುವುದು ಕಂಡು ಬರುತ್ತವೆ. ಗಿಡದಲ್ಲಿ ಕಾಯಿಗಳು ಕಡಿಮೆ ಅಥವಾ ಇಲ್ಲದೆ ಇರಬಹುದು, ಬೆಳಯ ಮೊಗ್ಗು ಬಾಡಿ ಇಲ್ಲವೇ ಕೊಳೆತು ಸಾಯುವುದು ಕುಡಿ ಸಾಯುವ ನಂಜು ರೋಗದ ಲಕ್ಷಣ ಎಂದರು.ಪ್ರತಿಕೂಲ ವಾತಾವರಣ:
ರೋಗವು ಥ್ರೀಪ್ಸ್ ಕೀಟದಿಂದ ಹರಡುತ್ತದೆ. ಬಿಸಿಲಿನ ವಾತಾವರಣ (23ರಿಂದ 30 ಡಿ.ಸೆ) ಮತ್ತು ಆರ್ದ್ರತೆ (40ರಿಂದ 70) ಇದ್ದಲ್ಲಿ ರೋಗ ಉಲ್ಬಣವಾಗುತ್ತದೆ ಎಂದರು.ಹತೋಟಿಗೆ ಕ್ರಮ:ಬೇಸಿಗೆ ಬಿತ್ತನೆ ಬೇಗನೆ ಮಾಡಬೇಕು. ಹೊಲದಲ್ಲಿ ರೋಗಲಕ್ಷಣಗಳು ಕಂಡುಬಂದ ಕೂಡಲೇ ಶೇ.4ರ ಜೋಳದ ಎಲೆಯ ಕಷಾಯವನ್ನು, 15 ದಿನದ ಅವಧಿಯಲ್ಲಿ ಸಿಂಪಡಣೆ ಮಾಡಬೇಕು. ತೀವ್ರ ಬಾಧೆ ಕಂಡುಬಂದಲ್ಲಿ 0.3 ಮಿ.ಲೀ ಇಮಿಡಾಕ್ಲೋಪ್ರೀಡ್ 17.8 ಎಸ್ .ಎಲ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು.ಕೃಷಿಕ ಸಮಾಜದ ಅಧ್ಯಕ್ಷ ತಿಮ್ಮಣ್ಣ ಚೌಡಿ, ಕೊಪ್ಪಳ ಉಪ ಕೃಷಿ ನಿರ್ದೇಶಕರ ಸಹದೇವ ಯರಗೊಪ್ಪ, ಯಲಬುರ್ಗಾ ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರಾಘವೇಂದ್ರ ಎಲಿಗಾರ್, ಗಂಗಾವತಿ ಸಸ್ಯರೋಗ ಶಾಸ್ತ್ರಜ್ಞ ಡಾ. ಎಸ್.ಬಿ. ಗೌಡರ್, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ. ವಾಮನಮೂರ್ತಿ, ಗಂಗಾವತಿ ಕೃಷಿ ವಿಜ್ಙಾನ ಕೇಂದ್ರದ ಡಾ. ರೇವತಿ ಆರ್.ಎಂ., ಕುಕನೂರು ಕೃಷಿ ಅಧಿಕಾರಿ ಬಸವರಾಜ ತೇರಿನ, ಸಹಾಯಕ ಕೃಷಿ ಅಧಿಕಾರಿ ಸಿದ್ದರಾಮರೆಡ್ಡಿ, ಗೂಳಪ್ಪ ಕೊಳಜಿ, ರೈತರಾದ ಮಲ್ಲಿಕಾರ್ಜುನ ಗಡಗಿ ,ಶಂಕರ ಕುಲಕರ್ಣಿ, ಗಂಗಮ್ಮ ಗಡಗಿ , ಶಿವುಕುಮಾರ ಆದಾಪುರ ಇತರರಿದ್ದರು.