ಮಹಿಳಾ ಮೀಸಲಾತಿ ಹೆಸರಿನಲ್ಲಿ ಅನುಕಂಪ ಪಡೆಯುವ ಎನ್‌ಡಿಎ ಸರ್ಕಾರದ ಹುನ್ನಾರ ಬಯಲು-ಶಾಸಕ ಮಾನೆ

KannadaprabhaNewsNetwork |  
Published : Apr 22, 2026, 02:30 AM IST
ಹಾನಗಲ್ಲಿನಲ್ಲಿ ಶಾಸಕ ಶ್ರೀನಿವಾಸ ಮಾನೆ ನಡೆಸಿದ ಸುದ್ದಿಗೋಷ್ಠಿಯಲ್ಲ ಪಕ್ಷದ ವಿವಿಧ ಪದಾಧಿಕಾರಿಗಳಿದ್ದರು. | Kannada Prabha

ಸಾರಾಂಶ

ಮಹಿಳಾ ಮೀಸಲಾತಿ ಹೆಸರಿನಲ್ಲಿ ಮಹಿಳೆಯರ ಅನುಕಂಪ ಪಡೆಯುವ ಎನ್‌ಡಿಎ ಸರ್ಕಾರದ ರಾಜಕೀಯ ಹುನ್ನಾರ ಈಗ ಬಯಲಾದಂತಾಗಿದೆ.

ಹಾನಗಲ್ಲ: ಮಹಿಳಾ ಮೀಸಲಾತಿ ಹೆಸರಿನಲ್ಲಿ ಮಹಿಳೆಯರ ಅನುಕಂಪ ಪಡೆಯುವ ಎನ್‌ಡಿಎ ಸರ್ಕಾರದ ರಾಜಕೀಯ ಹುನ್ನಾರ ಈಗ ಬಯಲಾದಂತಾಗಿದೆ. ಬಿಲ್ ಬಿದ್ದು ಹೋದರೆ ಬಿಜೆಪಿಗೆ ಬಹು ದೊಡ್ಡ ಲಾಭ ಎಂದು ಹೇಳುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆವರೆ ಇದನ್ನು ಒಪ್ಪಿಕೊಂಡಂತಾಗಿದೆ. ದೇಶದ ಹಿತದಲ್ಲಿ ಇಂತಹ ರಾಜಕೀಯ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಹರಿಹಾಯ್ದರು.

ಮಂಗಳವಾರ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜೀವ ಗಾಂಧಿ, ಮನಮೋಹನ ಸಿಂಗ್, ಪಿ.ವಿ. ನರಸಿಂಹರಾವ ಅವರು ಪ್ರಧಾನಮಂತ್ರಿಗಳಾಗಿದ್ದಾಗಲೇ ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ಮುಂದಾಗಿತ್ತು. ಆದರೆ ಈ ಬಿಜೆಪಿ ಇದಕ್ಕೆ ಸಹಕಾರ ನೀಡಿರಲಿಲ್ಲ. ಈಗ ವಿವಿಧ ರಾಜ್ಯಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ಮಹಿಳೆಯರ ಅನುಕಂಪ ಪಡೆಯಲು ಮುಂದಾಗಿರುವ ಹುನ್ನಾರ ಈಗ ಇಡೀ ದೇಶಕ್ಕೆ ಗೊತ್ತಾಗಿದೆ. ೨೦೧೦ರಲ್ಲಿ ಯುಪಿಎ ಸರ್ಕಾರ ಇದ್ದಾಗಲೇ ಸ್ಥಳೀಯ ಸಂಸ್ಥೆಗಳಿಗೆ ಶೇ. ೩೩ರ ಮೀಸಲಾತಿ ನೀಡಿದೆ. ಇದರಿಂದ ಇಡೀ ದೇಶದಲ್ಲಿ ಮಹಿಳೆಯರಿಗೆ ಒಳ್ಳೆಯ ಅವಕಾಶ ನೀಡಿರುವುದು ಕಾಂಗ್ರೆಸ್ ಪಕ್ಷದ ಇಚ್ಛಾಶಕ್ತಿಯಿಂದ ಸಾಧ್ಯವಾಗಿದೆ. ಇದರ ಪರಿಣಾಮವಾಗಿ ಹಾನಗಲ್ಲ ತಾಲೂಕಿನಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ೩೦೦ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳಿದ್ದಾರೆ. ಕಾಂಗ್ರೆಸ್ ಯಾವಾಗಲೂ ಮಹಿಳೆಯರ ಪರ ಎಂದರು.

ಎನ್‌ಡಿಎ ಸರ್ಕಾರ ೨೦೨೪ರಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟೆಬಿಟ್ಟೆವು ಎನ್ನುವಂತೆ ಮಾಡಿದರು. ಆದರೆ ಈವರೆಗೂ ಅದರ ಸುದ್ದಿಯೇ ಇರಲಿಲ್ಲ. ಈಗ ಮೀಸಲಾತಿ ಮುನ್ನೆಲೆಗೆ ತಂದು ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ಇದು ಪ್ರಧಾನ ಮಂತ್ರಿ ಸ್ಥಾನದ ಗೌರವ ಕುಗ್ಗಿಸಿದೆ. ಮಹಿಳಾ ಮೀಸಲಾತಿಗೆ ಎನ್‌ಡಿಎ ಸರ್ಕಾರಕ್ಕೆ ಅಷ್ಪೊಂದು ಕಾಳಜಿ ಇದ್ದರೆ ಈಗಿರುವ ಜನಂಖ್ಯೆಯ ಆಧಾರದ ಮೇಲೆಯೇ ಮೀಸಲಾತಿ ಪ್ರಕಟಿಸಲಿ. ಮತ್ತೆ ಈಗ ನಡೆದಿರುವ ಜನಗಣತಿ ಆಧರಿಸಿ ಜನಸಂಖ್ಯೆ ಪರಿಗಣಿಸಿ ಮೀಸಲಾತಿಗೆ ಕಾಯುವುದೇಕೆ ಎಂದು ಪ್ರಶ್ನಿಸಿದರು.

ತೆರಿಗೆ ಹಂಚಿಕೆಯಲ್ಲಿಯೂ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ತಾರತಮ್ಯ ಮಾಡುತ್ತಿದೆ. ಈಗ ಮಹಿಳಾ ಮೀಸಲಾತಿಯಲ್ಲಿಯೂ ಅದೇ ಹುನ್ನಾರ ನಡೆಸಿರುವುದು ಜಗಜ್ಜಾಹೀರಾಗಿದೆ. ಇದಕ್ಕೆ ನಮ್ಮ ಪಕ್ಷದಿಂದ ಮಹಿಳೆಯರಿಂದಲೇ ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗುತ್ತಾರೆ. ನಮ್ಮ ಈ ವಿಚಾರವನ್ನು ಪಕ್ಷಾತೀತವಾಗಿ ಎಲ್ಲ ಮಹಿಳೆಯರು ಬೆಂಬಲಿಸಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಉಪಾಧ್ಯಕ್ಷೆ ಅನಿತಾ ಶಿವೂರ, ಪುರಸಭೆ ಮಾಜಿ ಅಧ್ಯಕ್ಷರಾದ ಮಮತಾ ಆರೆಗೊಪ್ಪ, ರಾಧಿಕಾರ ದೇಶಪಾಂಡೆ, ಸದಸ್ಯೆ ಶಂಶಿಯಾಬಾನು ಬಾಳೂರ ಹಾಗೂ ಗೀತಾ ಪೂಜಾರ, ಕಾಂಗ್ರೆಸ್ ಪಕ್ಷದ ವಿವಿಧ ಮಹಿಳಾ ಘಟಕಗಳ ಪದಾಧಿಕಾರಿಗಳು, ಮಹಿಳಾ ಜನಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೋಷ ತಿದ್ದಿಕೊಂಡು ನಡೆಯುವಂತಾಗಲಿ: ಮಾಧವಾನಂದಭಾರತೀ ಸ್ವಾಮಿಗಳು
ವಿಜೃಂಭಣೆಯ ಉಜ್ಜಯನಿ ಮರಳುಸಿದ್ದೇಶ್ವರ ಮಹಾರಥೋತ್ಸವ