ಕೊಪ್ಪಳ: ಭಾರತದ ಇತಿಹಾಸ ಕೇವಲ ರಾಜರ ಇತಿಹಾಸ ಎನ್ನುವಂತಾಗಿದೆ. ಆದರೆ, ಅದನ್ನು ಮೀರಿಯೂ ಇರುವ ಜನಸಾಮಾನ್ಯರ ಮೌಖಿಕ ಸಂಭಾಷಣೆ ಸಂಶೋಧನೆ ಮಾಡಿದಾಗ ನಿಜವಾದ ಇತಿಹಾಸದ ದರ್ಶನವಾಗುತ್ತದೆ ಎಂದು ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಹೇಳಿದ್ದಾರೆ.
ಭಾರತದಲ್ಲಿ ಕತೆ, ಕಾದಂಬರಿ, ಧಾರ್ಮಿಕ ಗ್ರಂಥಗಳು ರಾಶಿ ರಾಶಿ ಇವೆ. ಇವುಗಳನ್ನು ಹಿಂಡಿದಾಗ ಒಂದು ಗಿಂಡಿಯೂ ಸಹ ಇತಿಹಾಸ ದೊರೆಯುವುದಿಲ್ಲ ಎನ್ನುವ ಆಪಾದನೇ ಇದೆ. ಪಾಶ್ಚಾತ್ಯ ಇತಿಹಾಸಕಾರರು ಭಾರತದಲ್ಲಿ ಇತಿಹಾಸ ಹೇಳು ಎಂದರೇ ಕತೆಗಳನ್ನು ಹೇಳುತ್ತಾರೆ ಎನ್ನುತ್ತಾರೆ.
ಪಾಶ್ಚಾತ್ಯರ ಪ್ರಕಾರ ಇತಿಹಾಸ ಎಂದರೇ ಕಾಲ, ಸ್ಥಳ ಮತ್ತು ಕುರುಹು ಇದ್ದರೇ ಮಾತ್ರ ಅದನ್ನು ಇತಿಹಾಸ ಎಂದು ಒಪ್ಪಿಕೊಳ್ಳುತ್ತಾರೆ. ಆದರೆ, ಭಾರತದ ಇತಿಹಾಸ ರಚನೆಯಲ್ಲಿ ಇದಕ್ಕೆ ಒತ್ತು ನೀಡಿಲ್ಲವಾದ್ದರಿಂದ ನಮ್ಮ ಇತಿಹಾಸ ಸಂಶೋಧನೆ ನಡೆಸುವುದು ಎಂದರೇ ಜನರ ಮೌಖಿಕ ಸಂಭಾಷಣೆ ಸಂಶೋಧನೆಗೆ ಒಳಪಡಿಸಿದಾಗ ನಿಜವಾದ ಇತಿಹಾಸ ದೊರೆಯುತ್ತದೆ ಎಂದರು.ಶಾಸನಗಳು ಕೇವಲ ರಾಜರ ಹಿರಿಮೆ, ಗರಿಮೆ ಹೇಳುತ್ತವೆ. ರಾಜರ ಬಳಿಯೇ ಇರುತ್ತಿದ್ದ ಇತಿಹಾಸಕಾರರು, ಸಾಹಿತಿಗಳು ಅವರನ್ನು ಕುರಿತು ಬಣ್ಣಿಸಿದ್ದಾರೆಯೇ ಹೊರತು ಅವರು ಸಾಮಾನ್ಯರ ಇತಿಹಾಸ ಹೇಳಿಯೇ ಇಲ್ಲ. ವಿಜಯನಗರ ಸಾಮ್ರಾಜ್ಯದ ಇತಿಹಾಸ ನಮಗೆ ಶಾಸನಗಳಲ್ಲಿ ದೊರೆಯುತ್ತದೆ. ಆದರೆ, ಕುಮಾರರಾಮ ಚರಿತ್ರೆ ಜನಮಾನಸದಲ್ಲಿಯೇ ಇದೆಯೇ ಹೊರತು ಎಲ್ಲಿಯೂ ಶಾಸನಗಳಿಂದ ತಿಳಿದು ಬರುವುದಿಲ್ಲ ಎಂದರು.
ಕೃಷ್ಣದೇವರಾಯರ ಸಮಾಧಿ ಕುರಿತು ಜನರಲ್ಲಿ ಇರುವ ಅರಿವು ದಾಖಲೆಯಲ್ಲಿ ಇಲ್ಲ. ಹಾಗೆಯೇ ಕೆಂಪೇಗೌಡ ಬಂಧಿಯಾಗಿರುವ ಸೆರೆಮನೆಯ ಕುರಿತು ಜನರು ಹೇಳುತ್ತಾರೆಯಾದರೂ ಆ ಕುರಿತು ದಾಖಲಿಸುವ ಕಾರ್ಯ ಆಗಿರಲಿಲ್ಲ. ಆಗ ಮಾಡಲಾಗಿದೆ ಎಂದರು.
ಕೃತಿ ಲೋಕಾರ್ಪಣೆ ಮಾಡಿದ ಡಾ.ಬಸವರಾಜ ಪೂಜಾರ ಮಾತನಾಡಿ, ಕೆಂಪೇಗೌಡ ಬಂಧನದಲ್ಲಿದ್ದ ಸೆರೆಮನೆ ಮೇಲೆ ಡಾ.ಶರಣಬಸಪ್ಪ ಕೋಲ್ಕಾರ ಬೆಳಕು ಚೆಲ್ಲಿದ್ದಾರೆ. ಈ ಕುರಿತು ಕೆಲವರು ಆಕ್ಷೇಪ ಎತ್ತಿದರೂ ಅದಕ್ಕೆ ನಾನು ಉತ್ತರ ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಕೃತಿಯಲ್ಲಿಯೇ ಸಾಕಷ್ಟು ಪುರಾವೆ ಒದಗಿಸಿದ್ದಾರೆ ಎಂದರು.
ಗ್ರಂಥದಾನಿ ಡಾ.ಮಹಾಂತೇಶ ಮಲ್ಲನಗೌಡ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿದ್ಲಿಂಗಪ್ಪ ಕೊಟ್ನೇಕಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು.