ರಂಗ ಕಲೆಗಳಿಗೆ ಆರ್ಥಿಕವಾಗಿ ಬಲ ತುಂಬುವ ಅಗತ್ಯ

KannadaprabhaNewsNetwork |  
Published : Aug 10, 2025, 01:30 AM IST
ಚಿತ್ರದುರ್ಗ 2 | Kannada Prabha

ಸಾರಾಂಶ

ಚಿತ್ರದುರ್ಗ ಪರಿಸರದ ಬಯಲಾಟಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಸತೀಶ್‌ ತಿಪಟೂರು ಹೇಳಿಕೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಂಗ ಕಲೆಗಳಿಗೆ ಆರ್ಥಿಕವಾಗಿ ಬಲ ತುಂಬದಿದ್ದರೆ ಬಹಳ ಕಾಲ ಉಳಿಯುವುದಿಲ್ಲ ಎಂದು ರಂಗಾಯಣ ನಿರ್ದೇಶಕ ಮೈಸೂರಿನ ಸತೀಶ ತಿಪಟೂರು ಹೇಳಿದರು.

ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ, ಸರ್ಕಾರಿ ಕಲಾ ಕಾಲೇಜು ಚಿತ್ರದುರ್ಗ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ ಚಿತ್ರದುರ್ಗ ಪರಿಸರದ ಬಯಲಾಟಗಳು ಎರಡು ದಿನಗಳ ವಿಚಾರ ಸಂಕಿರಣವನ್ನು ಸರ್ಕಾರಿ ಕಲಾ ಕಾಲೇಜಿನಲ್ಲಿ ಮೃದಂಗ ಬಾರಿಸುವ ಮೂಲಕ ಶನಿವಾರ ಉದ್ಗಾಟಿಸಿ ಮಾತನಾಡಿದರು.

ದೊಡ್ಡಾಟ, ಬಯಲಾಟ, ಇನ್ನಿತರೆ ರಂಗ ಪ್ರಾಕಾರಗಳು ಜನಪದರ ಬದುಕಿನ ಒಂದು ಭಾಗ. ಅಳಿವಿನಂಚಿನಲ್ಲಿರುವ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿರುವುದರಿಂದ ಕಲೆಗಳ ಪುನಶ್ಚೇತನಕ್ಕೆ ಯೋಚಿಸುತ್ತಿದ್ದೇವೆ. ಶೂದ್ರ ಸಮುದಾಯದವರು ಕಲೆಗಳನ್ನು ಕಟ್ಟಿ ಬೆಳೆಸಿದ್ದಾರೆಯೇ ವಿನಃ ಮೇಲ್ವರ್ಗದವರಲ್ಲ. ಆರ್ಥಿಕವಾಗಿ ಕಲೆಗಳು ಸದೃಡವಾಗದಿದ್ದರೆ ಅಸ್ಪೃಶ್ಯ ಕಲೆಗಳಾಗಿಯೇ ಉಳಿದುಬಿಡುತ್ತವೆಂದು ವಿಷಾಧಿಸಿದರು.

ಆರ್ಥಿಕ ಲಾಭಕ್ಕಾಗಿ ಕಲೆಗಳನ್ನು ಮೇಲ್ವರ್ಗದವರು ಹೈಜಾಕ್ ಮಾಡುತ್ತಿರುವುದರ ವಿರುದ್ಧ ಕಲಾವಿದರು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಸಾಂಸ್ಕೃತಿಕ ನುಸುಳುಕೋರರಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಒಂದು ವರ್ಷದ ರಂಗಕಲೆ ಡಿಪ್ಲೋಮಾ ಕೋರ್ಸ್‍ನ್ನು ಎರಡು ವರ್ಷಗಳಿಗೆ ವಿಸ್ತರಿಸಿ ದಕ್ಷಿಣ ಭಾರತಕ್ಕೆ ವ್ಯಾಪಿಸಬೇಕು. ಬಯಲಾಟ ಕಾರ್ಯಾಗಾರವಾಗಬೇಕು. ರಂಗಕಲೆಗಳು ಯೂರೋಪಿಯನ್ ಮಾಡಲ್‍ಗಳಿರುವುದರಿಂದ ರಂಗಾಯಣ ರಂಗಶಾಲೆಯನ್ನು ದ್ರವಿಡಿಯನ್ ಇನ್ಸಿಟಿಟ್ಯೂಟ್ ಶಾಲೆಗಳನ್ನಾಗಿ ಮಾರ್ಪಡಿಸಬೇಕಿದೆ ಎಂದು ಸಲಹೆ ನೀಡಿದರು. ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್.ದುರ್ಗಾದಾಸ್ ವಿದ್ಯಾರ್ಥಿಗಳು, ಯುವ ಜನಾಂಗ ಪಾರಂಪರಿಕ ಕಲೆಗಳನ್ನು ತಿಳಿದುಕೊಳ್ಳಬೇಕು. ರಂಗಭೂಮಿಯನ್ನು ಕಟ್ಟಿದವರು ಅನಕ್ಷರಸ್ಥರು, ರೈತರು, ಕೂಲಿಕಾರರು. ಇವರಿಗೆ ಪುರಾಣಗಳಲ್ಲಿ ವಾದ್ಯಗಳನ್ನು ನುಡಿಸುವುದು ಗೊತ್ತು. ಕಲಾವಿದರ ಪ್ರದರ್ಶನಕ್ಕೆ ಆರ್ಥಿಕ ಸಂಪನ್ಮೂಲ ಗಟ್ಟಿಯಾಗಬೇಕು. ಶ್ರಮಿಕ ವರ್ಗದಿಂದ ಮಾತ್ರ ಇನ್ನು ಬಯಲಾಟ ಕಲೆ ಉಳಿದಿದೆ. ಚಿತ್ರದುರ್ಗಕ್ಕೆ ಹತ್ತಿರವಾಗಿರುವ ಹಳ್ಳಿಗಳಲ್ಲಿ ಅನೇಕ ಕಥೆಗಾರರಿದ್ದಾರೆ. ಬಯಲಾಟ ಸರಳ ಮತ್ತು ಸುಲಭವಾದ ಸಂವಹನ. ಜಿಲ್ಲೆಯ ಪಾರಂಪರಿಕ ಕಲೆ ಬಯಲಾಟವನ್ನು ಉಳಿಸಬೇಕಿದೆ ಎಂದು ಮನವಿ ಮಾಡಿದರು.

ರಂಗ ಸಮಾಜ ಸದಸ್ಯ ಡಾ.ರಾಜಪ್ಪ ದಳವಾಯಿ ಮಾತನಾಡಿ, ಜಾತ್ಯತೀತ, ಮಾನವೀಯ ಮೌಲ್ಯಗಳು ಬಯಲಾಟದಲ್ಲಿದೆ. ಊರೊಂದಿಗೆ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಬಯಲಾಟಗಳು ನಾಶವಾಗುತ್ತಿವೆ. ರಂಗ ಶಿಕ್ಷಣ ವ್ಯಾಪಕವಾಗಿ ಕರ್ನಾಟಕದಲ್ಲಿ ಬೆಳೆದಿದೆ. ಬಯಲಾಟ ದೊಡ್ಡ ಕಲಾ ಮಾಧ್ಯಮ. ಸ್ಥಳಿಯ ರಂಗಕಲೆ ಹಾಗೂ ಹಳ್ಳಿಗಳಲ್ಲಿ ವಿಭಿನ್ನ ಬದಲಾವಣೆಯಾಗಿರುವುದರಿಂದ ಬಯಲಾಟವನ್ನು ಉಳಿಸಬೇಕಿದೆ ಎಂದರು.

ಬಯಲಾಟ ಪ್ರಯೋಗ ಸವಾಲಾಗಿ ಪರಿಣಮಿಸಿದ್ದು, ವಿದ್ವತ್‍ಗೆ ಸಮಸ್ಯೆಯಿಲ್ಲ. ಇರುವುದು ಪ್ರಯೋಗದ ಸಮಸ್ಯೆ ಯಾವುದೇ ಕಲಾವಿದರನ್ನು ಅಗೌರವದಿಂದ ಕಾಣಬಾರದು.

ಬಯಲಾಟಕ್ಕೆ ಪ್ರೋತ್ಸಾಹ ಬೇಕು. ಸರಳಗೊಳಿಸಿ ಬಯಲಾಟವನ್ನು ಪ್ರೇಕ್ಷಕರ ಮುಂದಿಡಬೇಕು. ಬಯಲಾಟದ ಪಲ್ಲವಿತ ಪ್ರದೇಶ ಚಿತ್ರದುರ್ಗವಾಗಿರುವುದರಿಂದ ಪ್ರಯೋಗವಾಗದಿದ್ದರೆ ಬಯಲಾಟ ಉಳಿಯುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಬುಡಕಟ್ಟು ಅಧ್ಯಯನ ವಿಭಾಗ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಂ.ಮೈತ್ರಿ ಮಾತನಾಡಿ, ಬಯಲಾಟ ಬದುಕಿನ ಭಾಗ. ಬಹಳಷ್ಟು ಹಳ್ಳಿಗಳಲ್ಲಿ ಬಯಲಾಟ ಕಲಾವಿದರಿದ್ದಾರೆ. ವೇಷಭೂಷಣ ಆಕರ್ಷಣೀಯವಾಗಿರುವುದರಿಂದ ಸಮುದಾಯದ ಮೇಲೆ ಪ್ರಭಾವ ಬೀರಲಿದೆ. ಹಬ್ಬಗಳು ಕಲೆಗಳ ಹಿಂದೆ ಜ್ಞಾನ ವಿಜ್ಞಾನವಿದೆ. ಕಲೆಗಳ ಉಳಿವಿಗೆ ಸರ್ಕಾರ ಗಮನ ಕೊಡಬೇಕೆಂದು ವಿನಂತಿಸಿದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಬಯಲು ಪ್ರದೇಶ ಚಿತ್ರದುರ್ಗ ಶ್ರಮಿಕರ ನೆಲ. ಹೆಚ್ಚಾಗಿ ತಳ ಸಮುದಾಯದವರೆ ವಾಸಿಸುವ ಪ್ರದೇಶ. ನೆಲವನ್ನು ನಂಬಿ ಬದುಕುತ್ತಿರುವ ಇಲ್ಲಿ ತಳ ಶ್ರಮಿಕ ಸಮುದಾಯ ಬುಡಕಟ್ಟು ಮೂಲದವರು ಅಕ್ಷರದಿಂದ ವಂಚಿತರಾದರು ಕಲೆಯನ್ನು ದೇವರಂತೆ ಪೂಜಿಸಿಕೊಂಡು ಬಂದವರು. ಬಡತನವನ್ನು ಮರೆತು ಇಲ್ಲಿನ ಕಲೆ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

ಹಣ, ಅಧಿಕಾರ, ಪ್ರಶಸ್ತಿ, ಸನ್ಮಾನಗಳಿಂದ ದೂರವಿದ್ದು, ಕಲೆಯನ್ನು ಗೌರವಿಸಿದ್ದಾರೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿಯೂ ಇಂತಹ ಕಲಾವಿದರಿದ್ದಾರೆ. ಆದರೆ ಸಮಕಾಲೀನ ಸಂದರ್ಭ ವ್ಯವಹಾರಿಕ ಬದುಕನ್ನೆ ಮುಖ್ಯ ಎಂದು ಭಾವಿಸಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸ್ಥಿತ್ಯಂತರಗೊಳ್ಳುತ್ತಿರುವ ಇಂದಿನ ಕಾಲಮಾನದಲ್ಲಿ ವ್ಯವಹಾರಿಕ ಜಗತ್ತಿನಿಂದ ದೂರವೆ ಉಳಿದು ನೆಲ, ಕಲೆಯನ್ನು ಜನರನ್ನು ನಂಬಿ ಜೀವಿಸುತ್ತಿರುವ ಅಪರೂಪದ ಕಲಾವಿದರಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಎನ್‌ಸಿಸಿ ಅಧಿಕಾರಿಗಳಾದ ಪ್ರೊ.ಮಂಜುನಾಥ, ಡಾ.ವಿ.ಪ್ರಸಾದ, ಡಾ.ಬಿ.ಕೆ.ಬಸವರಾಜು, ವ್ಯವಹಾರ ನಿರ್ವಹಣಾಶಾಸ್ತ್ರ ಮುಖ್ಯಸ್ಥರಾದ ಡಾ.ಮೇಘನಾ, ವಾಣಿಜ್ಯಶಾಸ್ತ್ರ ಮುಖ್ಯಸ್ಥರಾದ ಪ್ರೊ.ಜಮುನಾರಾಣಿ ಇವರುಗಳು ವೇದಿಕೆಯಲ್ಲಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ