- ಸೀತೂರಿನ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್. ಸುಬ್ರಮಣ್ಯ ಮಾಹಿತಿ
ಕೇಂದ್ರ ಸರ್ಕಾರ ಮುಂದಿನ 2-3 ತಿಂಗಳಲ್ಲಿ ನೂತನ ಸಹಕಾರ ನೀತಿ ಜಾರಿಗೆ ತರಲಿದೆ ಎಂದು ಸೀತೂರಿನ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್. ಸುಬ್ರಮಣ್ಯ ತಿಳಿಸಿದರು.
ಬುಧವಾರ ಸೀತೂರಿನಲ್ಲಿ ನಡೆದ ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಒಳ್ಳೆಯ ಆಶಯ, ದೂರ ದೃಷ್ಠಿ ಇಟ್ಟುಕೊಂಡು ಕಾಯ್ದೆ ತರುತ್ತಿದೆ. ಹಿಂದೆ ಕೇದ್ರ ಸರ್ಕಾರದ ಕೃಷಿ ಮಂತ್ರಾಲಯದ ಖಾತೆ ಜತೆಗೆ ಸಹಕಾರ ಖಾತೆ ಸೇರಿತ್ತು. ಈಗ ಅದನ್ನು ಬೇರ್ಪಡಿಸಿ ಸಹಕಾರ ಖಾತೆಯನ್ನು ಸ್ವತಂತ್ರವಾಗಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.ಈ ಆಡಳಿತ ಮಂಡಳಿ ಕೊನೆ ಸಭೆ ಇದಾಗಿದೆ. ನಮ್ಮ ಆಡಳಿತ ಮಂಡಳಿ ಸಂಘವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದೆ. ಸದಸ್ಯರ ಸಲಹೆ, ಸಹಕಾರ ಇದ್ದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಸರ್ಕಾರದ ಸುತ್ತೋಲೆಯಂತೆ ಸಂಘದ ಹೆಸರು ಬದಲಾಯಿ ಸಿದ್ದೇವೆ. ಸಂಘ ಸದಸ್ಯರಿಗೆ ನೀಡುವ ಸಾಲವನ್ನು ಸದ್ಭಳಕೆ ಮಾಡಿಕೊಂಡು ಸಕಾಲಕ್ಕೆ ಕಟ್ಟಬೇಕು. ಸಂಘದಿಂದ ಶೇ 100ರಷ್ಟು ವಸೂಲಾತಿ ಆಗಬೇಕು ಎಂದು ಪ್ರಯತ್ನ ನಡೆಸಿದ್ದೇವೆ. ಸಾಲ ಬಾಕಿ ಇಟ್ಟುಕೊಂಡವರಿಗೆ ಮನವೊಲಿಸಿ ಸಾಲ ಕಟ್ಟಿಸುತ್ತಿದ್ದೇವೆ ಎಂದರು.
ಇನ್ನೂ 44 ಸದಸ್ಯರು ₹88,58,500.00 ದಾಸ್ತಾನು ಸಾಲ ಪಡೆದಿದ್ದಾರೆ. ಸೊನ್ನೆ ಬಡ್ಡಿ ದರದಲ್ಲಿ 513 ಸದಸ್ಯರು ₹6,54,75,000 ಸಾಲ ಪಡೆದಿದ್ದಾರೆ. 282 ಸದಸ್ಯರು ₹2,08,90, 356 ಸ್ವಂತ ಬಂಡವಾಳ ಸಾಲ ಪಡೆದಿದ್ದಾರೆ. ಒಟ್ಟು 795 ಸದಸ್ಯರು ₹8,63, 65,356 ಸಾಲ ಪಡೆದಿದ್ದಾರೆ ಎಂದರು.
ಈ ವೇಳೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಶಾಖೆಯಲ್ಲಿ ಅತಿ ಹೆಚ್ಚು ವ್ಯಾಪಾರ ಮಾಡಿದವರನ್ನು ಸನ್ಮಾನಿಸಲಾಯಿತು. ಸೀತೂರು ಶಾಖೆಯ ಟಿ.ಕೆ. ಕಾರ್ತಿಕ್, ಬೆಳ್ಳೂರು ಶಾಖೆಯ ಎಂ.ಎಸ್. ನಾಗೇಂದ್ರ, ಈಚಿಕೆರೆ ಶಾಖೆಯ ಎನ್.ಬಿ. ಲಕ್ಷ್ಮೀನಾರಾಯಣ, ಮೂಡಬಾಗಿಲು ಶಾಖೆ ಎಚ್.ಪಿ. ಶಿವಣ್ಣಗೌಡ ಸನ್ಮಾನಕ್ಕೆ ಭಾಜನರಾದರು.ಸಭೆಯಲ್ಲಿ ಸದಸ್ಯರಾದ ವಿಷ್ಣುಮೂರ್ತಿ, ಪಿ.ಕೆ. ಬಸವರಾಜ್, ತಿಮ್ಮಪ್ಪ, ಬೆಮ್ಮನೆ ಮೋಹನ್ ಹಾಗೂ ಇತರರು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಸಲಹೆ ನೀಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಸ್. ಶ್ರೀನಿವಾಸ್, ನಿರ್ದೇಶಕರಾದ ಎಚ್.ವಿ. ಸಂದೀಪಕುಮಾರ್, ಎನ್.ಪಿ. ರವಿ, ಎಸ್. ಉಪೇಂದ್ರರಾವ್, ಎಚ್.ಎನ್. ಸತೀಶ್, ಈ.ಡಿ. ಮಂಜುನಾಥ್, ವೈ.ಜಿ. ವಿಜೇಂದ್ರ, ಎಂ.ಎಸ್. ಗೀತಾ, ಸುಸೀಲಮ್ಮ, ಜಿ.ಕೆ. ಜಯರಾಮ್ ಇದ್ದರು.