ಮದುವೆ ಮಂಟಪದಿಂದ ಮತಗಟ್ಟೆಗೆ ಬಂದುಮತದಾನ ಮಾಡಿದ ನವ ದಂಪತಿ

KannadaprabhaNewsNetwork | Published : May 8, 2024 1:01 AM

ಸಾರಾಂಶ

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಮಮತಾ ಹಾಗೂ ನನ್ನೆಪ್ಪ ದಂಪತಿ ಅವರು ಮಂಗಳವಾರ ಮದುವೆಯಾಗಿದ್ದು, ಮದುವೆಶಾಸ್ತ್ರ ಮುಗಿಯುತ್ತಿದ್ದಂತೆಯೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮದುವೆ ಮಂಟಪದಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ ನವ ಜೋಡಿಯೊಂದು ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಕ್ಕು ಚಲಾವಣೆಯ ಜವಾಬ್ದಾರಿ ಮೆರೆದಿದೆ.

ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಮಮತಾ ಹಾಗೂ ನನ್ನೆಪ್ಪ ದಂಪತಿ ಅವರು ಮಂಗಳವಾರ ಮದುವೆಯಾಗಿದ್ದು, ಮದುವೆಶಾಸ್ತ್ರ ಮುಗಿಯುತ್ತಿದ್ದಂತೆಯೇ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ್ದಾರೆ.

ಇದೇ ವೇಳೆ ಮಾತನಾಡಿದ ನವ ದಂಪತಿ, "ಮತದಾನ ಎಂಬುದು ಪವಿತ್ರ ಕೆಲಸ. ಅಪರೂಪವಾಗಿ ಸಿಗುವ ಈ ಅವಕಾಶವನ್ನು ಯಾರೂ ತಪ್ಪಿಸಿಕೊಳ್ಳದೆ ಹಕ್ಕು ಚಲಾಯಿಸಬೇಕು. ಈ ಮೂಲಕ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು " ಎಂದು ಹೇಳಿದ್ದಾರೆ. ಕುರುಗೋಡು ತಾಲೂಕಿನಾದ್ಯಂತ ಶಾಂತಿಯುತ ಮತದಾನ

ಕನ್ನಡಪ್ರಭ ವಾರ್ತೆ ಕುರುಗೋಡುಲೋಕಸಭಾ ಚುನಾವಣೆಯ ಅಂಗವಾಗಿ ಕುರುಗೋಡು ತಾಲೂಕಿನ ಮತದಾನದ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಶಾಂತಿಯುತವಾಗಿ ನಡೆಯಿತು.

ಪಟ್ಟಣದ ಮುಷ್ಟಗಟ್ಟೆ ರಸ್ತೆಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಕೇಂದ್ರ ತೆರೆದ ಹಿನ್ನೆಲೆ ವಿಶೇಷವಾಗಿ ಹೆಚ್ಚು ಮಹಿಳಾ ಮತದಾರರೆ ಮತ ಚಲಾಯಿಸಿದ್ದು ಕಂಡು ಬಂತು.ಕುರುಗೋಡಿನ ಪುರಸಭೆ ವ್ಯಾಪ್ತಿಯಲ್ಲಿ ೧೮ ಮತ ಕೇಂದ್ರಗಳಿದ್ದು, ತಾಲೂಕಿನಲ್ಲಿ ಒಟ್ಟು ೯೩ ಮತ ಕೇಂದ್ರಗಳತ್ತ ಬೆಳಗ್ಗೆಯಿಂದ ಮದ್ಯಾಹ್ನದ ವರೆಗೆ ಮಹಿಳೆಯರು ಹೆಚ್ಚಾಗಿ ಸರತಿ ಸಾಲಿನಲ್ಲಿ ನಿಂತು ಶಾಂತಿಯುತವಾಗಿ ಮತದಾನ ಮಾಡಿದರು.ಬಿರು ಬಿಸಿಲು ಇರುವುದರಿಂದ ಮದ್ಯಾಹ್ನದಿಂದ ಸಂಜೆ ೪.೩೦ರ ವರೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಲು ಉತ್ಸಾಹ ತೋರಲಿಲ್ಲ. ಬಿಸಿಲು ಇರುವ ಕಾರಣ ನೆರಳಿನ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ವಿಕಲಚೇತನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಲು ಸಮಸ್ಯೆ ಆಗಬಾರದು ಎಂದು ಅವರಿಗೆ ವಿಶೇಷವಾಗಿ ಮತಕೇಂದ್ರ ಸ್ಥಾಪಿಸಲಾಗಿದ್ದು, ಉತ್ಸಾಹದಿಂದ ಮತಚಲಾವಣೆ ಮಾಡಿದರು.ತಾಲೂಕಿನಲ್ಲಿ ೧೮ ವರ್ಷ ಮೇಲ್ಪಟ್ಟ ಯುವ ಮತದಾರರು ಉತ್ಸಾಹದಿಂದ ತೆರಳಿ ಮತಚಲಾವಣೆ ಮಾಡಿದ್ದು, ವಿಶೇಷವಾಗಿ ಕಂಡು ಬಂತು.

ವಿಶೇಷವಾಗಿ ವಿಕಲಚೇತನರಿಗಾಗಿ ಪಟ್ಟಣದ ಎಸ್.ಡಬ್ಲೂಎಸ್ ಶಾಲೆ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ, ಬಾದನಹಟ್ಟಿ ಗ್ರಾಮದಲ್ಲಿ ಯುವ ಹಾಗೂ ಕೋಳೂರಿನಲ್ಲಿ ವಿಶೇಷ ಮತ ಕೇಂದ್ರ ಸ್ಥಾಪಿಸಲಾಗಿತ್ತು ಎಂದು ತಹಸೀಲ್ದಾರ್ ಎಂ.ರೇಣುಕಾ ತಿಳಿಸಿದರು.ಕುರುಗೋಡು, ಗೆಣಿಕೆಹಾಳು, ಕ್ಯಾದಿಗೆಹಾಳು ಮುಷ್ಠಗಟ್ಟೆ, ಸೋಮಲಾಪುರ, ವೀರಾಪುರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಬಿರು ಬಿಸಿಲನ್ನು ಲೆಕ್ಕಿಸದೆ ಮತಚಲಾಯಿಸಿದ್ದು ಕಂಡುಬಂತು.

Share this article