ಸುರಪುರ: ತಾಲೂಕಿನ ಕೆಂಭಾವಿ ಪಟ್ಟಣದ ಮುಖ್ಯ ಕಾಲುವೆಯಲ್ಲಿ (ಮೂರು ಗೇಟ್ ಹತ್ತಿರ) ಕಾಲು ಜಾರಿ ಬಿದ್ದು ಕೊಚ್ಚಿ ಹೋಗುತ್ತಿದ್ದ ವೃದ್ಧೆಯನ್ನು ಯುವಕರು ರಕ್ಷಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಅಯ್ಯಮ್ಮ ಪೂಜಾರಿ (75) ಎಂಬ ವೃದ್ಧ ಮಹಿಳೆ ಕಾಲು ಜಾರಿ ಮುಖ್ಯ ಕಾಲುವೆಯಲ್ಲಿ ಬಿದ್ದಿದ್ದಾಳೆ. ಹೊಲದ ಕೆಲಸಕ್ಕೆ ಹೋಗುತ್ತಿದ್ದ ಚಂದಪ್ಪ ಮ್ಯಾಗೇರಿ ಎಂಬ ಯುವಕ ಇದನ್ನು ಗಮನಿಸಿ ಕೂಡಲೇ ತನ್ನ ಗೆಳೆಯರಿಗೆ ಫೋನ್ ಮಾಡಿ ಕರೆಸಿದ್ದಾನೆ. ಬಹಳ ಆಳಕ್ಕೆ ಇದ್ದ ಕಾಲುವೆಯಲ್ಲಿ ಯುವಕರೆಲ್ಲ ಸೇರಿ ಹಗ್ಗವನ್ನು ಬಿಟ್ಟು ಅಜ್ಜಿಯನ್ನು ರಕ್ಷಿಸಿದ್ದಾರೆ. ನಂತರ ಸಂಬಂಧಿಕರು ಬಂದು ಮನೆಗೆ ಕರೆದುಕೊಂಡು ಹೋಗಿದ್ದು ಯುವಕರ ಕಾರ್ಯಕ್ಕೆ ಪಟ್ಟಣದ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.