ಭಾರತ ಕಮ್ಯುನಿಸ್ಟ್ ಪಕ್ಷದ 8ನೇ ತಾಲೂಕು ಸಮ್ಮೇಳನದಲ್ಲಿ ಜಿಲ್ಲಾ ಸಹಕಾರ್ಯದರ್ಶಿ
ದೇಶದ ಸ್ವಾತಂತ್ರ್ಯಕ್ಕಾಗಿ ದುಡಿಯುವ ವರ್ಗವನ್ನು ಸಂಘಟಿಸಿ ಮುನ್ನಡೆಸಿದ ಇತಿಹಾಸ ಭಾರತ ಕಮ್ಯುನಿಸ್ಟ್ ಪಕ್ಷಕ್ಕಿದೆ ಎಂದು ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ರೇಣುಕಮ್ಮ ಹೇಳಿದರು.
ತಾಲೂಕಿನ ಬೆಣ್ಣಿಹಳ್ಳಿಯಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ 8ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ನಂತರ ದುಡಿಯುವ ವರ್ಗದ ನ್ಯಾಯಸಮ್ಮತ ಹಕ್ಕುಗಳಿಗಾಗಿ ಕಮ್ಯುನಿಸ್ಟ್ ಪಕ್ಷ ನಿರಂತರವಾಗಿ ಹೋರಾಟವನ್ನು ನಡೆಸುತ್ತಿದೆ. ಆದರೆ ಇಂದಿನ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐ ತಾಲೂಕು ಕಾರ್ಯದರ್ಶಿ ಎಚ್.ಎಂ. ಸಂತೋಷ್, ಪ್ರಸ್ತುತ ನವ ವಸಾಹತುಶಾಹಿಯ ಜಾಗತೀಕರಣ ನೀತಿಗಳ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷ ನಿರಂತರವಾಗಿ ಹೋರಾಡುತ್ತಿದೆ. ಶ್ರಮಿಕ ವರ್ಗ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಾಗ ತಮ್ಮ ಶೋಷಣೆಯಿಂದ ಮುಕ್ತರಾಗುತ್ತಾರೆ. ಪಕ್ಷ ಹಾಗೂ ಪಕ್ಷದ ಸಾಮೂಹಿಕ ಸಂಘಟನೆಗಳು ಜನರ ಪರವಾಗಿ ಹೋರಾಟ ಮಾಡುವ ಅಗತ್ಯವಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊಸಳ್ಳಿ ಮಲ್ಲೇಶ್ ಮಾತನಾಡಿದರು.
ಇದೇ ವೇಳೆ ತಾಲೂಕು ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನೂತನ ತಾಲೂಕು ಮಂಡಳಿ ಕಾರ್ಯದರ್ಶಿಯಾಗಿ ರಮೇಶ್ ನಾಯ್ಕ ಹಾಗೂ ಸಹ ಕಾರ್ಯದರ್ಶಿಗಳಾಗಿ ಬಳಿಗನೂರು ಕೊಟ್ರೇಶ್ ಮತ್ತು ಹಾವೇರಿ ದೊಡ್ಡಬಸಪ್ಪ ಹಾಗೂ ಖಜಾಂಚಿಯಾಗಿ ಪುಷ್ಪ ಅವರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭ ಮುಖಂಡರಾದ ಗುಡಿಹಳ್ಳಿ ಹಾಲೇಶ್, ಹನುಮಂತಪ್ಪ, ರಮೇಶ್ನಾಯ್ಕ, ಬಳಿಗನೂರು ಕೊಟ್ರೇಶ್, ಪುಷ್ಟ, ದೊಡ್ಡಬಸವರಾಜ್ ಉಪಸ್ಥಿತರಿದ್ದರು.