ಕಸಾಪ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ವಿರುದ್ಧದ ಸಮರದಲ್ಲಿ ಸಂಘಟನೆಗಳ ಮೇಲುಗೈ..!

KannadaprabhaNewsNetwork | Published : Jun 1, 2025 1:37 AM
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರಿಗೆ ರಾಜ್ಯ ಸರ್ಕಾರ ನೀಡಿದ್ದ ರಾಜ್ಯ ಸಚಿವ ದರ್ಜೆ ಸ್ಥಾನ-ಮಾನ ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಇದರೊಂದಿಗೆ ಡಾ.ಮಹೇಶ್ ಜೋಶಿ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಜಿಲ್ಲಾ ಸಾಹಿತಿಗಳು ಮತ್ತು ಸಂಘಟನೆಗಳು ಮೇಲುಗೈ ಸಾಧಿಸಿವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರಿಗೆ ರಾಜ್ಯ ಸರ್ಕಾರ ನೀಡಿದ್ದ ರಾಜ್ಯ ಸಚಿವ ದರ್ಜೆ ಸ್ಥಾನ-ಮಾನ ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಇದರೊಂದಿಗೆ ಡಾ.ಮಹೇಶ್ ಜೋಶಿ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಜಿಲ್ಲಾ ಸಾಹಿತಿಗಳು ಮತ್ತು ಸಂಘಟನೆಗಳು ಮೇಲುಗೈ ಸಾಧಿಸಿವೆ.

ಕಳೆದ ಏ.೨೨ರಂದು ನಾಗಮಂಗಲ ತಾಲೂಕಿನ ದೊಡ್ಡಬಾಲ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದ ವೇಳೆ ಜಿಲ್ಲೆಯ ಹಿರಿಯ ಸಾಹಿತಿಗಳು, ವಿವಿಧ ಸಂಘಟನೆಯವರು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಡಾ.ಮಹೇಶ್‌ ಜೋಶಿ ಅವರಿಗೆ ರಾಜ್ಯ ಸಚಿವ ದರ್ಜೆ ಸ್ಥಾನಮಾನ, ಸೌಲಭ್ಯ ಹಿಂಪಡೆಯುವಂತೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು.

ಅದರಂತೆ ಡಾ.ಮಹೇಶ್ ಜೋಶಿ ಅವರಿಗೆ ೫ ಜನವರಿ ೨೦೨೩ರಂದು ನೀಡಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಸೌಲಭ್ಯಗಳನ್ನು ಹಿಂಪಡೆದಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ರಾಜ್ಯ ಶಿಷ್ಠಾಚಾರ) ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಆರ್.ಬಾಣದರಂಗಯ್ಯ ಮೇ ೩೧ರಂದು ಅಧಿಸೂಚನೆ ಹೊರಡಿಸಿದ್ದಾರೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಆರಂಭವಾದ ಡಾ.ಮಹೇಶ್ ಜೋಶಿ ಹಾಗೂ ಮಂಡ್ಯ ಜಿಲ್ಲಾ ಸಾಹಿತಿಗಳೊಂದಿಗಿನ ಸಮರ ಸಮ್ಮೇಳನ ಮುಗಿದ ನಂತರದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿತು. ರಾಜ್ಯಾಧ್ಯಕ್ಷರಾಗಿ ಜೋಶಿ ಅವರು ಕೈಗೊಂಡು ಕೆಲವು ಆತುರದ ನಿರ್ಧಾರಗಳು, ಸೇಡಿನ ಮನೋಭಾವದಿಂದ ಅನುಸರಿಸಿದ ನಡೆಯಿಂದ ಕೆಲವು ಸಂಘಟನೆಗಳೂ ಅವರ ವಿರುದ್ಧ ತಿರುಗಿಬೀಳುವಂತಾಯಿತು.

ಜಿಲ್ಲೆಯ ಹಿರಿಯ ಸಾಹಿತಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸಂಘಟನೆಗಳ ಮುಖಂಡರೊಂದಿಗೆ ತಾಳ್ಮೆ, ಸಹನೆ, ಸೌಜನ್ಯದಿಂದ ವರ್ತಿಸಿದ್ದರೆ ರಾಜ್ಯ ಸಚಿವ ಸ್ಥಾನ-ಮಾನವನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿಯೇ ಉದ್ಭವವಾಗುತ್ತಿರಲಿಲ್ಲ. ಆದರೆ, ರಾಜ್ಯಾಧ್ಯಕ್ಷ ಡಾ.ಮಹೇಶ್‌ಜೋಶಿ ಅವರು ಅಹಂ ಮುಂದಿಟ್ಟುಕೊಂಡೇ ಬಂದರು. ಸಾಹಿತ್ಯ ಪರಿಷತ್ತಿನ ಅಧಿಕಾರವೆಲ್ಲವೂ ತನ್ನ ಕಪಿಮುಷ್ಠಿಯಲ್ಲೇ ಇರಬೇಕು. ಜಿಲ್ಲಾ ಕಸಾಪಗಳಿಗೆ ಅಧಿಕಾರ ಶೂನ್ಯಗೊಳಿಸಬೇಕು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು-ವೆಚ್ಚಗಳೆಲ್ಲವೂ ತನ್ನ ಮೂಲಕವೇ ನಡೆಯಬೇಕೆಂಬ ಅಧಿಕಾರದ ಲಾಲಸೆಗೆ ಒಳಗಾಗಿ ಬೈಲಾ ತಿದ್ದುಪಡಿ ಮಾಡಿ ಎಲ್ಲರ ವಿರೋಧ ಕಟ್ಟಿಕೊಂಡ ಜೋಶಿ ಈಗ ರಾಜ್ಯ ಸಚಿವ ದರ್ಜೆ ಸ್ಥಾನವನ್ನೇ ಕಳೆದುಕೊಳ್ಳುವಂತಾಯಿತು.

ರಾಜ್ಯ ಸಚಿವ ಸ್ಥಾನಮಾನ ಕಸಿದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರ ಜಿಲ್ಲೆಯ ಹಿರಿಯ ಸಾಹಿತಿಗಳು, ಸಂಘಟನೆಗಳ ಮುಖಂಡರಿಗೆ ಖುಷಿಯನ್ನು ತಂದುಕೊಟ್ಟಿದೆ. ಜೋಶಿಗೆ ಇದರಿಂದ ಹಿನ್ನಡೆಯಾಗಿದೆ. ಮಂಡ್ಯ ಜಿಲ್ಲೆಯವರ ವಿಷಯದಲ್ಲಿ ಸ್ವಲ್ಪ ಸಮಾಧಾನದಿಂದ ವರ್ತಿಸಿದ್ದರೆ ಇಂತಹ ಪರಿಸ್ಥಿತಿಯನ್ನು ಎದುರಾಗುತ್ತಿರಲಿಲ್ಲ. ಅನವಶ್ಯಕ ದ್ವೇಷ, ಕಸಾಪ ಪದಾಧಿಕಾರಿಗಳ ಆತುರದ ಅಮಾನತು, ಸಲ್ಲದ ಮಾತುಗಳು, ಬೈಲಾ ತಿದ್ದುಪಡಿಯಲ್ಲಿ ಸರ್ವಾಧಿಕಾರಿತನ, ಸಮ್ಮೇಳನ ಯಶಸ್ವಿಯಾದರೂ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಲಾಗದಷ್ಟು ಉಡಾಫೆತನ ಇವೆಲ್ಲವೂ ಜೋಶಿ ಅವರಿಗೆ ಮುಳುವಾಗಿ ಪರಿಣಮಿಸಿವೆ.

ಕೋಳಿ ಕಬಾಬ್ ತಿಂದು ಬಾಡೂಟ ಬಳಗದಿಂದ ಸಂಭ್ರಮ

ಮಂಡ್ಯ:

ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿಗೆ ನೀಡಿದ್ದ ಸಂಪುಟ ದರ್ಜೆ ಸ್ಥಾನಮಾನ ಹಿಂಪಡೆದ ರಾಜ್ಯ ಸರ್ಕಾರದ ನಿಲುವನ್ನು ಸ್ವಾಗತಿಸಿ ನಗರದಲ್ಲಿ ಬಾಡೂಟ ಬಳಗದ ಸದಸ್ಯರು ಕೋಳಿ ಕಬಾಬ್ ತಿಂದು ಸಂಭ್ರಮಿಸಿದರು.

ನಗರದ ವಿವಿ ರಸ್ತೆಯಲ್ಲಿ ಸೇರಿದ ಬಳಗದ ಸದಸ್ಯರು, ಸಾರ್ವಜನಿಕರಿಗೆ ಕಬಾಬ್ ಹಂಚಿ ಇನ್ನಾದರೂ ಜೋಶಿಯವರು ಕನ್ನಡಪರ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಆಗ್ರಹಿಸಿದರು.

ಕನ್ನಡಪರ ಕೆಲಸಗಳಲ್ಲಿ ತೊಡಗಬೇಕಾದ ಜೋಶಿಯವರು ಬೈಲಾ ತಿದ್ದುಪಡಿ ಮೂಲಕ ಸರ್ವಾಧಿಕಾರಿಯಾಗಲು ಹೊರಟಿದ್ದರು. ಜೋಶಿಯವರ ವಿರುದ್ಧ ಮಂಡ್ಯದಲ್ಲಿ ತೀವ್ರ ಪ್ರತಿಭಟನೆ ಸಹ ನಡೆದಿತ್ತು. ರಾಜ್ಯ ಸರ್ಕಾರ ಅವರ ಸಂಪುಟ ಸ್ಥಾನಮಾನ ಹಿಂಪಡೆದಿರುವುದು ಸ್ವಾಗತಾರ್ಹವಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.

ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ. ತಿಮ್ಮೇಗೌಡ, ಶ್ರೀಕಾಂತ್, ಎಂ.ವಿ.ಕೃಷ್ಣ, ಟಿ.ಡಿ.ನಾಗರಾಜು ಸೇರಿದಂತೆ ಹಲವರು ಇದ್ದರು.