ಕನ್ನಡಪ್ರಭ ವಾರ್ತೆ ಗುಬ್ಬಿ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟಗಾಗರರು, ಹೇಮಾವತಿ ಜಿಲ್ಲೆಯ ಜೀವನಾಡಿ. ನಮ್ಮ ನೀರು ನಮ್ಮ ಹಕ್ಕು ಈ ನಿಟ್ಟಿನಲ್ಲಿ ಕೃಷ್ಣಪ್ಪ ಅವರ ಹೋರಾಟ ಜಿಲ್ಲೆಯ ರೈತರ ಹಿತಕ್ಕಾಗಿ ಎಂಬುದು ಕುಣಿಗಲ್ ರೈತರು ತಿಳಿಯಬೇಕಿದೆ. ಶಾಸಕ ರಂಗನಾಥ್ ಅವರ ಈ ತಂತ್ರಗಾರಿಕೆ ಪೈಪ್ ಲೈನ್ ಕಾಮಗಾರಿ ನೇರ ರಾಮನಗರ ಮಾಗಡಿ ಬಿಡದಿಗೆ ನೀರು ಹರಿಸಲು ಎಂಬುದು ಕುಣಿಗಲ್ ರೈತರು ಸೂಕ್ಷ್ಮವಾಗಿ ಆಲೋಚಿಸಬೇಕಿದೆ. ಡಿಸಿಎಂ ಅವರ ಕುಣಿಗಲ್ ತಾಲೂಕಿನ ಬರವೀಕ್ಷಣೆ ಸಮಯದಲ್ಲಿ ಕೆಲ ಮಂದಿ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ದಿಢೀರ್ ಘೇರಾವ್ ಮಾಡಿರುವುದು ಕುಣಿಗಲ್ ಶಾಸಕ ರಂಗನಾಥ್ ಅವರ ಪೂರ್ವನಿಯೋಜಿತ ಯೋಜನೆ ಎಂದು ನೇರ ಆರೋಪ ಮಾಡಿದರು. ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮಾತನಾಡಿ ಕುಣಿಗಲ್ ತಾಲೂಕಿಗೆ ಬಂದ ತುರುವೇಕೆರೆ ಶಾಸಕ ಕೃಷ್ಣಪ್ಪ ಅವರನ್ನು ಕುಣಿಗಲ್ ಶಾಸಕ ರಂಗನಾಥ್ ಟೀಕಿಸಿ ಪೈಪ್ ಲೈನ್ ವಿಚಾರವನ್ನು ತಿರುಚಿ ಹೇಳಿ ಅಲ್ಲಿದ್ದ ಬೆಂಬಲಿಗರನ್ನು ಪ್ರಚೋದಿಸಿ ಘೇರಾವ್ ಮಾಡಿಸಿದ್ದಾರೆ. ಕುಣಿಗಲ್ ಗೆ ನೀರು ಕೊಡಲು ಯಾರ ವಿರೋಧವಿಲ್ಲ. ಆದರೆ ಇಲ್ಲಿ ಸಾವಿರ ಕೋಟಿ ಲೂಟಿ ಹೊಡೆಯುವ ಯೋಜನೆ ಅನುಷ್ಠಾನಕ್ಕೆ ರೈತರ ನಡುವೆ ಎತ್ತಿಕಟ್ಟುವ ಕೆಲಸ ನಡೆದಿದೆ ಎಂದು ತಿಳಿಸಿದರು. ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೀರಮಾರನಹಳ್ಳಿ ನರಸೇಗೌಡ ಮಾತನಾಡಿ, ಕುಣಿಗಲ್ ಶಾಸಕರಿಗೆ ರಾಮನಗರ, ಮಾಗಡಿ, ಬಿಡದಿ ಚಿಂತೆ ಯಾಕೆ ಎಂಬುದು ಅಲ್ಲಿನ ರೈತರು ಯೋಚಿಸಬೇಕಿದೆ. ಕೃಷ್ಣಪ್ಪ ಅವರ ಬಗ್ಗೆ ಹಗುರವಾಗಿ ಮಾತು, ನಡವಳಿಕೆ ಕಂಡು ಬಂದರೆ ಕುಣಿಗಲ್ ನಲ್ಲಿ ನಮ್ಮ ಹೋರಾಟ ನಡೆಯಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನಂಜೇಗೌಡ, ಬೋರಪ್ಪನಹಳ್ಳಿ ಕುಮಾರ್, ವೀರಣ್ಣಗುಡಿ ರಾಮಣ್ಣ, ರವಿಕುಮಾರ್, ಬಾಬಣ್ಣ, ಕೇಶವ್, ನಂದೀಶ್, ಪಾಪಣ್ಣ, ಹರೀಶ್, ಲಕ್ಷ್ಮಿನಾರಾಯಣ(ಅಣ್ಣಿ), ಸೀನಣ್ಣ ಇತರರು ಇದ್ದರು.