ಕೆರೂರ ಆಸ್ಪತ್ರೆಯ ಕಾರ್ಯವೈಖರಿ ಆರೋಗ್ಯ ಸಚಿವರ ಪ್ರಶಂಸೆ

KannadaprabhaNewsNetwork |  
Published : Jun 30, 2024, 12:48 AM IST
ಕೆರೂರ | Kannada Prabha

ಸಾರಾಂಶ

ಕೆರೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ದಿನೇಶ ಗುಂಡುರಾವ್‌ ಪರಿಶೀಲನೆ ನಡೆಸಿದರು.

ಕನ್ನಡಪ್ರಭವಾರ್ತೆ ಕೆರೂರ

ಆಸ್ಪತ್ರೆಯನ್ನು ಸ್ವಚ್ಛಗಾಗಿಟ್ಟುಕೊಂಡು ರೋಗಿಗಳ ಉತ್ತಮ ಸೇವೆ ಒದಗಿಸುತ್ತಿರುವ ಆಸ್ಪತ್ರೆ ಸಿಬ್ಬಂದಿಗಳ ಕಾರ್ಯವೈಖರಿ ಶ್ಲಾಘನೀಯ ಎಂದು ಆರೋಗ್ಯ ಸಚಿವ ದಿನೇಶ ಗುಂಡುರಾವ್ ಹೇಳಿದರು.

ಶುಕ್ರವಾರ ಕೆರೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸಾ ಕೊಠಡಿ, ಪ್ರಯೋಗಾಲಯ ಸೇರಿದಂತೆ ಎಲ್ಲ ವಿಭಾಗಗಳನ್ನು ವೀಕ್ಷಿಸಿದ ಸಚಿವರು, ಸ್ಥಳದಲ್ಲಿದ್ದ ನಾಗರಿಕರ ಅಭಿಪ್ರಾಯ ಪಡೆದು ಬಳಿಕ ಮಾತನಾಡಿ, ಆಸ್ಪತ್ರೆಯ ಕಾರ್ಯವೈಖರಿ ಉತ್ತಮವಾಗಿದ್ದು, ನಾಗರಿಕರ ಬೇಡಿಕೆಯಂತೆ ಎಲ್ಲ ಸೌಲಭ್ಯ ಒದಗಿಸಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಭರವಸೆ ನೀಡಿದರು. ಸಿಬ್ಬಂದಿ ಕೊರತೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇದು ರಾಜ್ಯದ ಸಮಸ್ಯೆಯಾಗಿರುವುದರಿಂದ ಹಂತ ಹಂತವಾಗಿ ಸಿಬ್ಬಂದಿ ನೇಮಕದ ಕುರಿತು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿದ್ದು, ಶೀಘ್ರ ಸಿಬ್ಬಂದಿ ಒದಗಿಸುವುದಾಗಿ ತಿಳಿಸಿದರು.

ನಕಲಿ ವೈದ್ಯರ ಹಾವಳಿ ಕುರಿತು ಮಾತನಾಡಿ, ಅಂಥವರು ಕಂಡುಬಂದಲ್ಲಿ ಇಲಾಖೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಕ್ಷೆಗೆ ಗುರಿಪಡಿಸಲಿದೆ. ನಾಗರಿಕರು ಸಹ ಅಂಥವರ ಸುಳಿವು ನೀಡಿ ಸಹಕರಿಸಬೇಕೆಂದರು. ಆಸ್ಪತ್ರೆಯ ಪ್ರಾಮಾಣಿಕ ಸೇವೆಯನ್ನು ಸರ್ಕಾರದ ಗಮನಕ್ಕೆ ತಂದು ಯಾವುದೇ ಸೌಲಭ್ಯಗಳ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ಆಸ್ಪತ್ರೆಯ ಅಭಿವೃದ್ಧಿಯ ಕುರಿತು ಸಚಿವರಲ್ಲಿ ಮಾತನಾಡಿದ್ದೇನೆ. ಅವರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದರು.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ , ಡಿ.ಡಿ. ಅನಂತ ದೇಸಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಜಯಶ್ರೀ ಎಮ್ಮಿ , ಟಿ.ಎಚ್.ಒ. ಎಂ.ಬಿ. ಪಾಟೀಲ , ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಕಿರಣ ಕುಳಗೇರಿ, ವೈದ್ಯಾಧಿಕಾರಿಗಳಾದ ಶ್ರೀಧರ ಪತ್ತಾರ, ತೋಹಿದ್ ಖಾಜಿ, ಸುರೇಶ ಭಂಗಿ, ಸವಿತಾ ಶೆಟ್ಟರ, ಶಿವಪ್ಪ ನಾಯ್ಕರ, ಫಾರ್ಮಸಿ ಅಧಿಕಾರಿ ರವಿ ಬೋರಣ್ಣವರ ಹಾಗೂ ಸಿಬ್ಬಂದಿ ಜಿಪಂ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ, ಪಪಂ ಮಾಜಿ ಅಧ್ಯಕ್ಷ ಬಿ.ಬಿ. ಸೂಳಿಕೇರಿ, ಕಾಂಗ್ರೆಸ್‌ ಧುರೀಣರಾದ ಸೈದುಸಾಬ ಚೌಧರಿ, ರಫೀಕ್‌ ಫೀರಖಾನ, ಯಾಸೀನ್ ಖಾಜಿ, ವಿಠ್ಠಲಗೌಡ ಗೌಡ್ರ, ಉಸ್ಮಾನ ಅತ್ತಾರ, ಮಲ್ಲು ಹಡಪದ, ಕಂಟೇಶ ಕತ್ತಿಶೆಟ್ಟರ, ದಿನ್ನು ಸೂಪದಾರ, ಮೈಬೂಬ ಸೂಳಿಕೇರಿ, ಪ್ರಕಾಶ ಪರದೇಶಿ, ದಾದಫೀರ್‌ ಅತ್ತಾರ ಸೇರಿದಂತೆ ಹಲವಾರು ನಾಯಕರಿದ್ದರು.

-----ಬಾಕ್ಸ್‌ಗ------

ಭ್ರೂಣ ಹತ್ಯೆ ತಡೆಗೆ ನಿರ್ದಾಕ್ಷಿಣ್ಯ ಕ್ರಮ:ಲಿಂಗಾನುಪಾತ ಕುರಿತು ಮಾತನಾಡಿದ ಸಚಿವರು, ಈ ಸಮಸ್ಯೆ ಸರಿದೂಗಿಸಲು ಸರ್ವ ಪ್ರಯತ್ನ ನಡೆದಿದೆ. ಭ್ರೂಣ ಹತ್ಯೆ ಸಾಮಾಜಿಕ ಪಿಡುಗಾಗಿದ್ದು, ಅದನ್ನು ತಡೆಗಟ್ಟಲು ನಿರ್ದಾಕ್ಷಿಣ್ಯ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಈ ವಿಷಯದಲ್ಲಿ ನಾಗರಿಕರ ಸಹಕಾರ ಅಗತ್ಯವಿದ್ದು, ಭ್ರೂಣ ಹತ್ಯೆ ಗಮನಕ್ಕೆ ಬಂದರೆ ಆರೋಗ್ಯ ಇಲಾಖೆ ಅಥವಾ ಪೊಲೀಸ್‌ ಇಲಾಖೆ ಗಮನಕ್ಕೆ ತಂದರೆ ಪ್ರಕರಣ ದಾಖಲಿಸಿ ಅಂಥವರನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಾಗಲಿದೆ ಎಂದು ಸಚಿವ ದಿನೇಶ ಗುಂಡೂರಾವ್‌ ಹೇಳಿದರು.ಪಟ್ಟಣಕ್ಕೆ ಇಂದಿರಾ ಕ್ಯಾಂಟೀನ್‌ ಮಂಜೂರಾಗಿದ್ದು, ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಾರಣದಿಂದ ಕಾಮಗಾರಿ ವಿಳಂಬವಾಗಿದೆ. ಆಸ್ಪತ್ರೆ ಆವರಣದಲ್ಲಿಯೇ ಒಂದೆರೆಡು ತಿಂಗಳಲ್ಲಿ ಇಂದಿರಾ ಕ್ಯಾಂಟೀನ್‌ ಸೇವೆ ನಾಗರಿಕರಿಗೆ ದೊರೆಯಲಿದೆ.

- ಭೀಮಸೇನ್‌ ಚಿಮ್ಮನಕಟ್ಟಿ, ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲವು ಜಿಲ್ಲೆಗಳಲ್ಲಿ ಶೀತಗಾಳಿ ತಾಪಮಾನ 5-7 ಡಿಗ್ರಿ ಇಳಿಕೆ
‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ