ಸುಧೀರ್ಘ ರಾಜಕಾರಣದಲ್ಲಿ ಕಪ್ಪು ಚುಕ್ಕೆಯಿಲ್ಲದ ಪ್ರಾಮಾಣಿಕ ವ್ಯಕ್ತಿತ್ವ
ರಾಜ್ಯದ ಜನರಿಂದ ತಿರಸ್ಕೃತಗೊಂಡಿರುವ ಬಿಜೆಪಿ- ಜೆಡಿಎಸ್ ಪಕ್ಷಗಳು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಕುತಂತ್ರಗಳು ಫಲಿಸುವುದಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯನವರ 40 ವರ್ಷಗಳ ಸುಧೀರ್ಘ ರಾಜಕಾರಣದ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದ ಪ್ರಾಮಾಣಿಕ ವ್ಯಕ್ತಿತ್ವ ಅವರದು. ಮುಡಾ ವಿಚಾರದಲ್ಲೂ ಕೂಡ ಸಿದ್ದರಾಮಯ್ಯನವರದು ಯಾವುದೇ ಭ್ರಷ್ಟಾಚಾರದ ಪಾತ್ರವಿಲ್ಲ. ಎಲ್ಲಿಯೂ ಅವರ ಹಸ್ತಕ್ಷೇಪ ಇಲ್ಲದಿದ್ದರೂ ಕೇವಲ ರಾಜಕೀಯ ದುರುದ್ದೇಶದಿಂದ ಅವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆಸುತ್ತಿರುವುದು ಖಂಡನೀಯ. ಪ್ರಜಾಪ್ರಭುತ್ವ ಆಡಳಿತವಿರುವ ನಮ್ಮ ದೇಶದಲ್ಲಿ ಇಂತಹ ತೀರ್ಪುಗಳು ಮಾರಕ ಎಂದು ಆತಂಕ ವ್ಯಕ್ತಪಡಿಸಿದರು.ರಾಜ್ಯಪಾಲರೂ ಕೂಡ ತರಾತುರಿಯಲ್ಲಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ. ನ್ಯಾಯಾಲಯದಲ್ಲಿ ತನಿಖೆಗೆ ಅನುಮತಿ ದೊರೆತಿದೆ. ವಿನಹ ಪ್ರಾಸಿಕ್ಯೂಷನ್ನಿಗೆ ನೀಡಿಲ್ಲ. ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಿದ್ದು, ವಿರೋಧ ಪಕ್ಷಗಳ ಸಂತಸ ತಾತ್ಕಾಲಿಕ ಮಾತ್ರ. ಸಿದ್ದರಾಮಯ್ಯನವರು ಲೋಕಾಯುಕ್ತ ಸೇರಿದಂತೆ ಎಲ್ಲ ತನಿಖೆಗೆ ಸಹಕರಿಸುತ್ತಿದ್ದಾರೆ. ಸತ್ಯ ಏನೆಂಬುದು ಹೊರಬರುವ ಮೂಲಕ ಷಡ್ಯಂತ್ರ ಮಾಡುವ ಪರಿಪಾಠದವರಿಗೆ ಭ್ರಮನಿರಸನ ಆಗುವುದರಲ್ಲಿ ಸಂಶಯವಿಲ್ಲ ಎಂದರು.
ಅನೇಕ ಹಗರಣಗಳಲ್ಲಿರುವ ಎಚ್.ಡಿ. ಕುಮಾರಸ್ವಾಮಿ ಅವರ ರಾಜೀನಾಮೆ ಪಡೆಯುವ ತಾಕತ್ತು ಇದೆಯೇ? ಬಿಜೆಪಿ ಅನೇಕ ನಾಯಕರ ವಿರುದ್ಧವು ಭ್ರಷ್ಟಾಚಾರದ ಆರೋಪಗಳಿವೆ. ಅವರ ರಾಜೀನಾಮೆ ಕೇಳಿ ಪ್ರತಿಭಟನೆ ಮಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಈ ನಿಟ್ಟಿನಲ್ಲಿ ಈಗಾಗಲೇ ಜನರಿಂದ ತಿರಸ್ಕಾರಗೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅವನತಿ ಅಂಚಿನಲ್ಲಿವೆ. ಮುಂಬರುವ ದಿನಗಳಲ್ಲಿ ಈ ಎರಡೂ ಪಕ್ಷಗಳಿಗೆ ರಾಜ್ಯದ ಜನತೆ ದೊಡ್ಡ ಪಾಠ ಕಲಿಸಲಿದ್ದಾರೆ ಎಂದರು.ಮುಖಂಡರಾದ ವಸಂತಕುಮಾರ್, ಕಂಸಾಗರ ರೇವಣ್ಣ, ಧರ್ಮಣ್ಣ, ದೀಪು, ಈಶ್ವರ್ ಮತ್ತಿತರರು ಇದ್ದರು.26ಕೆಕೆಡಿಯು2.ಶಾಸಕ ಕೆ.ಎಸ್.ಆನಂದ್.