ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ

KannadaprabhaNewsNetwork |  
Published : Dec 11, 2025, 01:30 AM IST
ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ಎಸ್‌ಪಿ ಮಹಮ್ಮದ್ ಸುಜಿತ ಅವರು ಹಾಸನಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆಯನ್ನೆಲ್ಲಾ ಗಾಳಿಗೆ ತೂರಿದ್ದಾರೆ. ಜಿಲ್ಲೆಯಾದ್ಯಂತ ಅಪರಾಧಿಗಳು ಬೆಲೆ ಕಟ್ಟದೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಗಾಂಜಾ ನಶೆಯಲ್ಲಿ ನಡೆದ ಯುವಕ ಕೊಲೆಯಾದರೂ ಪೊಲೀಸರ ಇಂಟೆಲಿಜೆನ್ಸ್ ಎಲ್ಲಿ ಎಂದು ಪ್ರಶ್ನಿಸಿದರು. ವೈರಲ್ ಆದ ನಡೆದ ಗಾಂಜಾ ನಶೆಯಲ್ಲಿ ಯುವಕನ ಕೊಲೆ ಪ್ರಕರಣ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಘಟನೆ ನಡೆದ ಒಂದೇ ದಿನ ಕಳೆದರೂ ಪೊಲೀಸರಿಗೆ ಕೊಲೆ ನಡೆದಿರುವುದು ಗೊತ್ತಿಲ್ಲವೆಂಬುದು ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ಪರಮಾವಧಿ ಎಂದು ಅವರು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊಲೆ, ದರೋಡೆ, ಗಾಂಜಾ, ಡ್ರಗ್ಸ್ ಮಾರಾಟ, ಜೂಜಾಟ, ಇಸ್ಪೀಟ್ ಹಾಗೂ ವಿವಿಧ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾದ ಹಿನ್ನಲೆ ಎಸ್ಪಿ ಮಹಮ್ಮದ್ ಸುಜೀತಾ ಅವರನ್ನು ಕೂಡಲೇ ವರ್ಗಾವಣೆ ಮಾಡುವಂತೆ ಎಎಪಿ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೀಶ್ ಸರ್ಕಾರವನ್ನು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಎಸ್‌ಪಿ ಮಹಮ್ಮದ್ ಸುಜಿತ ಅವರು ಹಾಸನಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆಯನ್ನೆಲ್ಲಾ ಗಾಳಿಗೆ ತೂರಿದ್ದಾರೆ. ಜಿಲ್ಲೆಯಾದ್ಯಂತ ಅಪರಾಧಿಗಳು ಬೆಲೆ ಕಟ್ಟದೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಗಾಂಜಾ ನಶೆಯಲ್ಲಿ ನಡೆದ ಯುವಕ ಕೊಲೆಯಾದರೂ ಪೊಲೀಸರ ಇಂಟೆಲಿಜೆನ್ಸ್ ಎಲ್ಲಿ ಎಂದು ಪ್ರಶ್ನಿಸಿದರು. ವೈರಲ್ ಆದ ನಡೆದ ಗಾಂಜಾ ನಶೆಯಲ್ಲಿ ಯುವಕನ ಕೊಲೆ ಪ್ರಕರಣ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಘಟನೆ ನಡೆದ ಒಂದೇ ದಿನ ಕಳೆದರೂ ಪೊಲೀಸರಿಗೆ ಕೊಲೆ ನಡೆದಿರುವುದು ಗೊತ್ತಿಲ್ಲವೆಂಬುದು ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ಪರಮಾವಧಿ ಎಂದು ಅವರು ಕಿಡಿಕಾರಿದರು.

ಕೊಲೆ ಮಾಡಿದ ಯುವಕವೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಡಿದಾಗ ಮಾತ್ರ ಪೊಲೀಸರ ಕಣ್ಣು ತೆರೆದಿದೆ. ಇದು ಯಾವ ರೀತಿಯ ಇಂಟೆಲಿಜೆನ್ಸ್? ಗಾಂಜಾ, ಅಫೀಮು, ಡ್ರಗ್ಸ್ ಶಾಲಾ- ಕಾಲೇಜು ವಿದ್ಯಾರ್ಥಿಗಳ ಕೈಗೂ ಸಹ ಸುಲಭವಾಗಿ ಸಿಗುತ್ತಿರುವುದು ಆತಂಕಕಾರಿ. ಹಾಗಿದ್ದರೆ ಜಿಲ್ಲಾ ಪೊಲೀಸ್ ಇಲಾಖೆಯ ಕರ್ತವ್ಯವೇನು ಎಂದು ಆಕ್ರೋಶ ಹೊರಹಾಕಿದರು. ರಾತ್ರಿ ವೇಳೆ ಮಹಿಳೆಯರು, ಮಕ್ಕಳಿಗೆ ಸುರಕ್ಷತೆ ಕ್ಷೀಣ. ಬೈಕ್ ವ್ಹೀಲಿಂಗ್ ಪ್ರಕರಣಗಳು ಹೆಚ್ಚಳವಾಗಿದ್ದು, ಸರಗಳ್ಳತನ, ಸುಲಿಗೆಗಳು ನಿರಂತರ ಜೂಜಾಟ, ಇಸ್ಪೀಟ್, ಮಟ್ಕಾ ಅಟ್ಟಹಾಸ ಮೆರೆಯುತ್ತಿದೆ. ಎಲ್ಲೆಡೆ ಅಪರಾಧಗಳು ನಡೆಯುತ್ತಿದ್ದರೂ ಎಸ್‌ಪಿ ಕಣ್ಣುಮುಚ್ಚಿ ಕೂತಿದ್ದಾರೆ. ಆರೋಪಿಗಳನ್ನು ಬಂಧಿಸುವುದಿಲ್ಲ, ಅಡ್ಡಗಳ ಮೇಲೆ ದಾಳಿ ನಡೆಸುವುದಿಲ್ಲ. ಇಂತಹ ಅಧಿಕಾರಿ ಹಾಸನಕ್ಕೆ ಅಗತ್ಯವಿದೆಯೇ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಾಸನದ ಜನರು ಈಗ ಆತಂಕದಲ್ಲಿ ಬದುಕುತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕೂಡಲೇ ಇಂತಹ ಬೇಜವಾಬ್ದಾರಿ ನಿವೃತ್ತಿ ಮಾಡಿಸಿ, ಜಿಲ್ಲೆಗೆ ದಕ್ಷ ಹಾಗೂ ನಿಷ್ಪಕ್ಷಪಾತ ಪೊಲೀಸ್ ಅಧಿಕಾರಿಯನ್ನು ನೇಮಿಸಬೇಕು ಎಂದು ಸರ್ಕಾರದ ಗಮನ ಸೆಳೆದರು. ಇನ್ನೂ ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ-ಡ್ರಗ್ಸ್ ಮಾಫಿಯಾ, ಕೊಲೆ- ದರೋಡೆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ಸಂಪೂರ್ಣ ತನಿಖೆ ನಡೆಸಬೇಕು ಎಂದರು. ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ಖಂಡಿಸಿ, ಪಕ್ಷಾತೀತವಾಗಿ ಎಲ್ಲಾ ಸಂಘ-ಸಂಸ್ಥೆಗಳು, ನಾಯಕರು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರನ್ನು ಒಗ್ಗೂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಅಗತ್ಯವಿದ್ದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಕೂಡಲೇ ದೊಡ್ಡ ಮಟ್ಟದ ಪ್ರತಿಭಟನೆಯತ್ತ ಸಾಗುತ್ತೇವೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಮಂಜು, ಕಾರ್ಯದರ್ಶಿ ಖಾದರ್‌, ಕಾರ್ಯಕರ್ತೆ ಶೋಭಾ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತಿ ಗ್ಯಾರಂಟಿ ರಾಮಣ್ಣನವರಿಗೆ ಅಧಿಕೃತ ಆಹ್ವಾನ
ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಕನ್ನಡದಲ್ಲಿಯೇ ವ್ಯವಹರಿಸಿ