ರಾಮನಗರ: ಬಿಡದಿ ಟೌನ್ಶಿಪ್ ಯೋಜನೆ ಪರ ಮತ್ತು ವಿರೋಧವಾಗಿ ಹೋರಾಟ ನಡೆಯುತ್ತಿದ್ದ ಬೈರಮಂಗಲ ಗ್ರಾಮದಲ್ಲಿ ಭಾನುವಾರ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣವನ್ನು ಪೊಲೀಸ್ ಇಲಾಖೆ ಯಶಸ್ವಿಯಾಗಿ ನಿಭಾಯಿಸಿತು.
ಬಿಡದಿ ಟೌನ್ಶಿಪ್ ಯೋಜನೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಧ್ಯೆ ವಾಗ್ವಾದ ತಾರಕಕ್ಕೇರಿದೆ. ರೈತರ ಸಮ್ಮುಖದಲ್ಲೇ ಚರ್ಚೆ ನಡೆಸೋಣ ಬೈರಮಂಗಲಕ್ಕೆ ಬರುವಂತೆ ಕುಮಾರಸ್ವಾಮಿರವರು ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದರು.
ಒಂದೆಡೆ ಬೈರಮಂಗಲ ವೃತ್ತದಲ್ಲಿ 476 ದಿನಗಳಿಂದ ರೈತರು ಶಾಂತಿಯುತವಾಗಿ ಧರಣಿ ಮುಂದುವರೆಸಿದ್ದರೆ, ಮತ್ತೊಂದೆಡೆ ಕುಮಾರಸ್ವಾಮಿರವರು ಪಂಥಾಹ್ವಾನದಿಂದ ಕೆರಳಿದ ಟೌನ್ ಶಿಪ್ ಯೋಜನೆ ಪರವಾಗಿರುವ ರೈತರು, ಕುಮಾರಸ್ವಾಮಿಯವರು ಬೈರಮಂಗಲ ವೃತ್ತಕ್ಕೆ ಹೋಗುವುದಾದರೆ ನಮ್ಮ ಪ್ರಶ್ನೆಗಳಿಗೆ ಉತ್ತರಿಸಿ ಮುಂದೆ ಸಾಗಬೇಕೆಂದು ಪಟ್ಟು ಹಿಡಿದು ವೃಷಭಾವತಿ ಶಾಲೆ ಬಳಿ ಪ್ರತಿಭಟನೆ ಪ್ರಾರಂಭಿಸಿದರು. ಇದರಿಂದಾಗಿ ಬೈರಮಂಗಲ ಗ್ರಾಮದಲ್ಲಿ ಎರಡು ದಿನಗಳಿಂದ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.ಭಾನುವಾರ ಬೆಳಗ್ಗೆಯಿಂದಲೇ ಟೌನ್ಶಿಪ್ ಯೋಜನೆ ಪರ ಮತ್ತು ವಿರೋಧವಾಗಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಎರಡೂ ಪ್ರತಿಭಟನಾ ಸ್ಥಳಗಳಿಂದ ಪರ ಮತ್ತು ವಿರುದ್ಧವಾದ ಘೋಷಣೆಗಳು ಮೊಳಗುತ್ತಿದ್ದವು.
ಇನ್ನು ಟೌನ್ಶಿಪ್ ವಿರೋಧಿ ರೈತರು, ಕುಮಾರಸ್ವಾಮಿ ಅವರನ್ನು ಅಡ್ಡ ಹಾಕುತ್ತಾರೆ. ಅವರನ್ನು ನಾವು ಕರೆತರುತ್ತೇವೆ ಬಿಡಿ. ಅಲ್ಲಿ ಯಾವುದೇ ರೈತರಿಲ್ಲ. ಇರುವವರೆಲ್ಲ ರೌಡಿಗಳು. ಹಣಕೊಟ್ಟು ಬೇರೆಯವರನ್ನು ಕರೆತಂದಿದ್ದಾರೆ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಪೊಲೀಸರ ಸರ್ಪಗಾವಲಿನಲ್ಲಿ ಕುಮಾರಸ್ವಾಮಿಯವರು ಬೈರಮಂಗಲ ವೃತ್ತಕ್ಕೆ ಆಗಮಿಸಿದಾಗ ಟೌನ್ಶಿಪ್ ವಿರುದ್ಧ ರೈತರು ಜೈಕಾರ ಕೂಗಿ ಹರ್ಷೋದ್ಘಾರ ವ್ಯಕ್ತಪಡಿಸಿದರು. ಸುಮಾರು ಮೂರುವರೆ ಗಂಟೆ ರೈತರೊಂದಿಗೆ ಚಳವಳಿಯಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿ ಪೊಲೀಸ್ ಭದ್ರತೆಯಲ್ಲಿ ತೆರಳಿದರು.
ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. 4 ಕೆಎಸ್ಆರ್ಪಿ, 300ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗಾಗಿ ನಿಯೋಜನೆ ಮಾಡಲಾಗಿತ್ತು. ಬಿಡದಿ-ಹಾರೋಹಳ್ಳಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡದೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.
6.ಬೈರಮಂಗಲ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಅನ್ನು ಕೇಂದ್ರ ವಲಯ ಐಜಿಪಿ ಗಿರೀಶ್ ವೀಕ್ಷಣೆ ಮಾಡಿದರು.