ಬೆಮೆಲ್‌ ಕಾರ್ಮಿಕರ ಸಮಸ್ಯೆ ವಾರದೊಳಗೆ ಇತ್ಯರ್ಥ

KannadaprabhaNewsNetwork | Published : Nov 18, 2024 12:01 AM

ಸಾರಾಂಶ

ಬೆಮೆಲ್‌ ಹೊರಗುತ್ತಿಗೆ ಕಾರ್ಮಿಕರ ಉದ್ಯೋಗ ಕಾಯಂ ವಿಷಯ ಬಿಟ್ಟು ಉಳಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಕಂಪನಿಯ ಸಿಎಂಡಿ ಪರಿಶೀಲನೆ ಮಾಡಲು ಸಿದ್ಧರಿದ್ದಾರೆ. ಕಾರ್ಮಿಕರು ಧರಣಿ ಅಂತ್ಯಗೊಳಿಸಿ ಕೆಲಸಕ್ಕೆ ಹಾಜರಾದರೆ, ಈ ಬಗ್ಗೆ ಕೂತು ಚರ್ಚೆ ನಡೆಸಲು ಸಾಧ್ಯವಾಗಲಿದೆ

ಕನ್ನಡಪ್ರಭ ವಾರ್ತೆ ಕೆಜಿಎಫ್ಬಿಇಎಂಎಲ್ ಹೊರಗುತ್ತಿಗೆ ಕಾರ್ಮಿಕರ ಸಮಸ್ಯೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರೊಂದಿಗೆ ಚರ್ಚಿಸುವುದಾಗಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.ಕೆಜಿಎಫ್‌ನ ಪೈವ್ ಲೈಟ್ಸ್ ಬಳಿ ಕಳೆದ ೧೩ ದಿನಗಳಿಂದ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಕೋಲಾರ ಸಂಸದ ಮಲ್ಲೇಶ್ ಬಾಬು, ಶಾಸಕರಾದ ವೆಂಕಟ ಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್ ಅವರೊಂದಿಗೆ ಎಚ್ಡಿಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ನಿಮ್ಮ ಬೇಡಿಕೆಗಳ ಬಗ್ಗೆ ಈಗಾಗಲೇ ಕಂಪನಿಯ ಸಿಎಂಡಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ನೌಕರಿ ಕಾಯಂಗೊಳಿಸುವ ಬೇಡಿಕೆ ಒಂದನ್ನು ಬಿಟ್ಟು ಉಳಿದ ಬೇಡಿಕೆಗಳನ್ನು ಈಡೇರಿಸಲು ಸ್ಪಂದಿಸಿದ್ದಾರೆ. ನಾನು ನಾಳೆ (ಸೋಮವಾರ) ಬೆಳಗ್ಗೆ ದೆಹಲಿಗೆ ತೆರಳುತ್ತಿದ್ದು, ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಸಚಿವಾಲಯದ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಅವರು ಖಂಡಿತಾ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಕಾರ್ಮಿಕರ ನೋವು ಅರ್ಥವಾಗಿದೆತಾವು ಇಲ್ಲಿಗೆ ಬರುವುದಕ್ಕೆ ಮೊದಲೇ ಬಿಇಎಂಎಲ್ ಸಿಎಂಡಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದೆ. ಉದ್ಯೋಗ ಕಾಯಂ ವಿಷಯ ಬಿಟ್ಟು ಉಳಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ನಾವು ಪರಿಶೀಲನೆ ಮಾಡಲು ಸಿದ್ಧರಿದ್ದೇವೆ. ಕಾರ್ಮಿಕರು ಧರಣಿ ಅಂತ್ಯಗೊಳಿಸಿ ಕೆಲಸಕ್ಕೆ ಹಾಜರಾದರೆ, ಈ ಬಗ್ಗೆ ಕೂತು ಚರ್ಚೆ ನಡೆಸಲು ನಾವು ತಯಾರಿದ್ದೇವೆ ಎಂದು ಅವರು ನನಗೆ ತಿಳಿಸಿದರು ಎಂಬುದಾಗಿ ಸಚಿವರು ಕಾರ್ಮಿಕರ ಸಭೆಯಲ್ಲಿ ತಿಳಿಸಿದರು.ಶುಭ ಶುಕ್ರವಾರ: ಆದ್ದರಿಂದ ನನ್ನ ಮಾತಿನ ಮೇಲೆ ಭರವಸೆ ಇಡಿ. ತಕ್ಷಣ ನಿಮ್ಮ ಧರಣಿ ಅಂತ್ಯಗೊಳಿಸಿ ಕೆಲಸಕ್ಕೆ ಹಾಜರಾಗಿ. ನಾನು ಗುರುವಾರದೊಳಗೆ ರಕ್ಷಣಾ ಸಚಿವರ ಜತೆ ಚರ್ಚೆ ನಡೆಸಿದ ಬಳಿಕ ಶುಕ್ರವಾರ ಬೆಳಗ್ಗೆ ನಾನೇ ಸ್ವತಃ ಇಲ್ಲಿಗೆ ಬಂದು ನಿಮ್ಮೆಲ್ಲರಿಗೂ ಒಳ್ಳೆಯ ಸುದ್ದಿ ಕೊಡುತ್ತೇನೆ ಎಂದು ಕುಮಾರಸ್ವಾಮಿ ಮನವಿ ಮಾಡಿದರು.

ಸಚಿವರ ಮಾತಿಗೆ ಸ್ಪಂದಿಸಿದ ಕಾರ್ಮಿಕರು, ಈ ಕೂಡಲೇ ನಾವು ಕೆಲಸಕ್ಕೆ ಹಾಜರಾಗಬೇಕು ಎನ್ನುವ ನಿಮ್ಮ ಒತ್ತಾಸೆಯ ಬಗ್ಗೆ ಚರ್ಚೆ ನಡೆಸುತ್ತೇವೆ. ಇಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಕಳಕಳಿಗೆ ವಿರುದ್ಧವಾದ ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದು ಹೇಳಿದರು.

ಈ ವೇಳೆ ಸಂಸದ ಮಲ್ಲೇಬಾಬು, ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್, ಶ್ರೀನಿವಾಸಪುರ ವೆಂಕಟಶಿವಾರೆಡ್ಡಿ, ಮಾಜಿ ಶಾಸಕ ವೈ.ಸಂಪಂಗಿ , ಸಿಎಂಆರ್ಶ್ರೀ ನಾಥ್, ಕೆ.ರಾಜೇಂದ್ರನ್ ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ ಹಾಗೂ ಇತರರು ಹಾಜರಿದ್ದರು.

Share this article