ಕನ್ನಡಪ್ರಭ ವಾರ್ತೆ ಸಕಲೇಶಪುರ
ಹಿಂದೂ ಧರ್ಮದ ಮೇಲೆ ಅಪಪ್ರಚಾರಗಳು ಹೆಚ್ಚಾಗಿರುವುದು ಬೇಸರದ ಸಂಗತಿಯಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಮಧೂತ ಗಣಪತಿ ಸೇವಾ ಸಮಿತಿಯ ಕರಪತ್ರವನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿ, ಪ್ರತಿ ವರ್ಷ ಸಕಲೇಶಪುರ ಪಟ್ಟಣದಲ್ಲಿ ರಾಮಧೂತ ಗಣಪತಿ ಸೇವಾ ಸಮಿತಿ ವತಿಯಿಂದ ಅದ್ಧೂರಿಯಾಗಿ ಗಣಪತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿಯು ಸಹ ಅದ್ದೂರಿಯಾಗಿ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾನೆ ನೆರವೇರಲಿದೆ. ನಾನು ಸಹ ಗಣಪತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಸಾರ್ವಜನಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕೆಂದು ಮನವಿ ಮಾಡುತ್ತೇನೆ. ನಮ್ಮ ಧರ್ಮ, ಸಂಸ್ಕೃತಿಯ ರಕ್ಷಣೆ ಮಾಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಿಂದೂ ಧರ್ಮ ಹಾಗೂ ಧರ್ಮಕ್ಕೆ ಸಂಬಂಧಿಸಿದ ಪವಿತ್ರವಾದ ಸ್ಥಳಗಳು, ವ್ಯಕ್ತಿಗಳ ಮೇಲೆ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅದರಲ್ಲೂ ಪವಿತ್ರವಾದ ಧರ್ಮಸ್ಥಳ ಕ್ಷೇತ್ರ ಹಾಗೂ ಅಲ್ಲಿನ ಧರ್ಮಾಧಿಕಾರಿಗಳ ಮೇಲೆ ಹೆಚ್ಚಿನ ಅಪಪ್ರಚಾರ ಮಾಡುತ್ತಿರುವುದು ಖಂಡನೀಯ, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಾವೆಲ್ಲಾ ಒಗ್ಗೂಡಿ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.ಹಿಂದೂ ಹಿತರಕ್ಷಣಾ ವೇದಿಕೆ ರಾಜ್ಯ ಮುಖಂಡ ರಘು ಸಕಲೇಶಪುರ ಮಾತನಾಡಿ ಪ್ರತಿವರ್ಷದಂತೆ ಈ ಬಾರಿಯು ರಾಮಧೂತ ಗಣಪತಿ ವತಿಯಿಂದ ಅದ್ದೂರಿಯಾಗಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿ ಅದ್ದೂರಿಯಾಗಿ ವಿಸರ್ಜಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ಅಪಪ್ರಚಾರ ಕೂಡಲೇ ನಿಲ್ಲಬೇಕು. ಇಲ್ಲದಿದ್ದಲ್ಲಿ ನಾವು ಸಹ ಹೋರಾಟಕ್ಕೆ ಸಿದ್ಧರಿದ್ದೇವೆ. ಮೊದಲ ಹಂತದಲ್ಲಿ ಸಕಲೇಶಪುರದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಯಪ್ರಕಾಶ್ ದೊಡ್ಡದೀಣೆ, ಟಿಎಪಿಸಿಎಂಎಸ್ ಅಧಕ್ಷ ಶಶಿಕುಮಾರ್, ಸಮಾಜ ಸೇವಕರಾದ ಹೆತ್ತೂರು ವಿಜಯ್ ಕುಮಾರ್, ಲಕ್ಷ್ಮೀ ರಂಗನಾಥ್, ಧರ್ಮಪ್ಪ, ಸಂಘಟನೆಯ ಪ್ರಮುಖರಾದ ಕೌಶಿಕ್, ಪ್ರದೀಪ್, ಮಂಜು ಕಬ್ಬಿನಗದ್ದೆ, ಶಿವು ಜಿಪ್ಪಿ,ಬಾಬಣ್ಣ, ಶೇಖರ್ ಕಬ್ಬಿನಗದ್ದೆ, ದುಷ್ಯಂತ್ ಮುಂತಾದವರು ಹಾಜರಿದ್ದರು.