ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಕೆರೆಗಳ ರಕ್ಷಣೆ ರಾಜಸ್ವ ನಿರೀಕ್ಷರ ಹೊಣೆ

KannadaprabhaNewsNetwork | Published : Oct 11, 2024 11:56 PM

ಅಕ್ರಮವಾಗಿ ಮಣ್ಣುತೆಗೆಯುವುದರಿಂದ ಕೆರೆಗಳ ಸ್ವರೂಪ ಹಾಳಾಗುವುದರ ಜೊತೆಗೆ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೂ ತೊಂದರೆ ಉಂಟಾಗಬಹುದು. ಆದ್ದರಿಂದ ಆಯಾ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಮತ್ತು ಮರಳು ಸಾಗಾಣಿಕೆ ಪ್ರಕರಣಗಳು ಕಂಡು ಬಂದರೆ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ತಾಲೂಕಿನ ಕೆರೆ ಕುಂಟೆಗಳು ಮತ್ತು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಕೆರೆಗಳ ಸ್ವರೂಪ ಹಾಳು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಾಜಸ್ವ ನಿರೀಕ್ಷಕರಿಗೆ ತಹಸೀಲ್ದಾರ್ ವೆಂಕಟೇಶಪ್ಪ ಸೂಚಿಸಿದ್ದಾರೆ. ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ವೆಂಕಟೇಶಪ್ಪ ರಾಜಸ್ವ ನಿರೀಕ್ಷಕರ ಸಭೆ ನಡೆಸಿ, ತಾಲೂಕಿನ ಕೆರೆಕುಂಟೆಗಳು ಸೇರಿದಂತೆ ಸರ್ಕಾರಿ ಸ್ಥಳಗಳಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಮಾರಾಟ ಮಾಡುತ್ತಿರುವುದಾಗಿ ಆರೋಪಗಳು ಕೇಳಿ ಬರುತ್ತಿರುವುದನ್ನಪ ಪ್ರಸ್ತಾಪಿಸಿದರು.

ಕಾನೂನು ಕ್ರಮ ಜರುಗಿಸಿ

ಅಕ್ರಮವಾಗಿ ಮಣ್ಣುತೆಗೆಯುವುದರಿಂದ ಕೆರೆಗಳ ಸ್ವರೂಪ ಹಾಳಾಗುವುದರ ಜೊತೆಗೆ ಅಂತರ್ಜಲ ಮಟ್ಟ ಕುಸಿದು ಕುಡಿಯುವ ನೀರಿಗೂ ತೊಂದರೆ ಉಂಟಾಗಬಹುದು. ಆದ್ದರಿಂದ ಆಯಾ ಹೋಬಳಿ ವ್ಯಾಪ್ತಿಯಲ್ಲಿ ಅಕ್ರಮ ಮಣ್ಣು ಮತ್ತು ಮರಳು ಸಾಗಾಣಿಕೆ ಪ್ರಕರಣಗಳು ಕಂಡು ಬಂದರೆ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಿ ವರದಿಯನ್ನು ನೀಡುವಂತೆ ಎಲ್ಲಾ ರಾಜಸ್ವ ನಿರೀಕ್ಷಕರಿಗೂ ಸೂಚನೆ ನೀಡಿದರು.

ಕೆರೆಕುಂಟೆಗಳು ನಮಗೆ ನೀರಿನ ಮೂಲವಾಗಿದ್ದು, ಅವುಗಳನ್ನು ಅಭಿವೃದ್ದಿ ಮಾಡಿ ರಕ್ಷಣೆ ಮಾಡಬೇಕೆ ಹೊರತು ಹಾಳು ಮಾಡಬಾರದು. ಕೆಲವರು ಕೆಟ್ಟ ಮಾರ್ಗದಲ್ಲಿ ಹಣ ಮಾಡುವ ಉದ್ದೇಶದಿಂದ ಕೆರೆಗಳಿಂದ ಮಣ್ಣು ತೆಗೆದು ಅವುಗಳ ಸ್ವರೂಪವನ್ನೇ ಹಾಳು ಮಾಡುತ್ತಿದ್ದಾರೆ. ಕೆಎಲ್‌ಆರ್ ೭೨ರ ಅಧಿನಿಯಮದ ಅಡಿಯಲ್ಲಿ ತಹಸೀಲ್ದಾರ್ ಮತ್ತು ಗಣ ಮತ್ತು ಭೂ ವಿಜ್ಞಾನ ಅಧಿಕಾರಿಗಳ ಮೂಲಕ ಕೆರೆಯಲ್ಲಿ ೫ ಅಡಿಗಳ ಆಳದವರೆಗೂ ಮಣ್ಣು ತೆಗೆಯಲು ಅವಕಾಶವಿದೆ ಎಂದರು.

ನಿಯಮ ಉಲ್ಲಂಘಿಸಿದರೆ ಕ್ರಮ

ಮಣ್ಣು ತೆಗೆಯಲು ನೀರಾವರಿ ಇಲಾಖೆಗಳ ಮೂಲಕ ಸಹ ಅನುಮತಿಯನ್ನು ಪಡೆಯಬೇಕಿದೆ. ಯಾರಾದರೂ ನಿಯಮವನ್ನು ಉಲ್ಲಂಘನೆ ಮಾಡಿದರೆ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಪಂಚಾಯಿತಿ, ಪೊಲೀಸ್ ಮತ್ತು ನೀರಾವರಿ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಿ ಅಕ್ರಮ ಮಣ್ಣುಗಾರಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗದುಕೊಳ್ಳಲಾಗುತ್ತದೆ ಎಂದರು.

ಈ ವೇಳೆ ಉಪ ತಹಸೀಲ್ದಾರ್ ಪ್ರಭಾಕರ್, ರಾಜಸ್ವ ನಿರೀಕ್ಷಕರಾದ ಪವನ್, ಅಜಯ್, ಶಿರಸ್ತೇದಾರ್ ಮಂಜುನಾಥ್ ಇದ್ದರು.