ಮುಂಡರಗಿ: ಪಂಚಪೀಠಗಳ ಒಕ್ಕೂಟ ವ್ಯವಸ್ಥೆಗೆ ಭದ್ರಬುನಾದಿ ಹಾಕಿದ್ದೆ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಎಂದು ರಂಭಾಪುರಿ ವೀರಸಿಂಹಾಸನಾಧೀಶ್ವರ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಾಜಿ ಸಚಿವ ಎಸ್.ಎಸ್.ಪಾಟೀಲ ಅವರ ನಿವಾಸದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್. ಎಸ್. ಪಾಟೀಲ್ ಅವರು ಪಂಚಪೀಠಗಳು ಒಂದಾಗಬೇಕು ಎನ್ನುವ ಮಾತಿಗೆ ಪ್ರತಿಕ್ರಿಯಿಸಿ ಮಾತನಾಡಿದರು.1966ರಲ್ಲಿ ಛಿದ್ರಗೊಂಡ ಪೀಠಗಳನ್ನು ಒಂದೆಡೆ ಸೇರಿಸಿ ಬೃಹತ್ ಧಾರ್ಮಿಕ ಸಮ್ಮೇಳನ ನಡೆಸಿ 1008 ಅಡ್ಡಪಲಕ್ಕಿಮಹೋತ್ಸವ, 108 ರಥೋತ್ಸವ, ಕೋಟಿ ಬಿಲ್ವಾರ್ಚನೆ ಪೂಜೆ ಮಾಡಿಸಿ ಪಂಚಪೀಠಾಧೀಶರ ಸಮ್ಮಿಲನ ಮಾಡಿದ್ದರು.
ಹಿರಿಯರಾದ ಎಸ್.ಎಸ್. ಪಾಟೀಲ್ ಅವರು ಮುಂಚೂಣಿಯಲ್ಲಿ ನಿಂತು ಪರಸ್ಪರ ಸಮಾಧಾನ ಮಾಡಿ, ಪರಸ್ಪರ ಸಂವಾದ ಮಾಡಿ, ನಡೆದು ಹೋದಂತಹ ತಪ್ಪು ಕ್ರಮಗಳನ್ನು ಸರಿಪಡಿಸಿ ಪರಿಹರಿಸಬೇಕು. ಅವರು ಕರೆದಲ್ಲಿಗೆ ನಾವು ಬರುತ್ತೇವೆ. ಒಂದುವೇಳೆ ಪಾಟೀಲರು ನಮ್ಮ ಪೀಠಕ್ಕೆ ಬಂದು ಸರಿಪಡಿಸುವುದಾದರೆ ವ್ಯವಸ್ಥೆ ಮಾಡಲು ನಾವು ಸಿದ್ಧ, ಉಜ್ಜಯಿನಿ ಪೀಠಕ್ಕೆ ಹೋಗಿ ಸರಿಪಡಿಸುವುದಾದರೆ ಅವರಿಗೂ ಹೇಳುತ್ತೇವೆ ಅಥವಾ ಇದೇ ಕಲಕೇರಿಯ ತಮ್ಮ ಮನೆಗೆ ಕರೆದರೂ ಸಹ ನಾವು ಇಲ್ಲಿಗೇ ಬರುತ್ತೇವೆ. ನಮ್ಮದು ಯಾವುದಕ್ಕೂ ವಿರೋಧವಿಲ್ಲ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ನೀವು ಐದು ಜನ ಪಂಚಪೀಠಾಧೀಶ್ವರರು ಹೊಂದಾಣಿಕೆ ಇಲ್ಲ. ನೀವು ದೊಡ್ಡವರು ನಿಮಗೆ ಹೇಳುವಷ್ಟು ಸಾಮರ್ಥ್ಯ ನನಗಿಲ್ಲ. ನೀವು ಮೊದಲು ಮನಸ್ಸಿನಲ್ಲಿರುವ ಭೇದ ಭಾವವನ್ನು ತೆಗೆದುಹಾಕಿ ಎಲ್ಲರೂ ಒಂದಾಗಿರಿ. ನಾವು ಭಕ್ತರಾದವರು ವಿರಕ್ತರು, ಪಂಚಾಚಾರ್ಯರು ಎಂದು ಯಾವಾಗಲೂ ಭೇದಭಾವ ಮಾಡಿಲ್ಲ. ಎಲ್ಲರನ್ನು ಮನೆಗೆ ಕರೆದು ಪೂಜಿಸಿದ್ದೇವೆ ಎಂದರು. ಮುಂಬರುವ ದಿನಗಳಲ್ಲಿ ವಿರಕ್ತರು ಹಾಗೂ ಪಂಚಪೀಠಗಳ ಸ್ವಾಮೀಜಿಯವರು ಒಂದಾಗಬೇಕು. ಆ ಕಾರ್ಯವನ್ನು ಮಾಡಲು ತಾವು ಪ್ರಯತ್ನಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ನಾಡಿನ ವಿವಿಧ ಸ್ವಾಮೀಜಿಗಳು, ಮಾಜಿ ಸಂಸದ ಮಂಜುನಾಥ ಕುನ್ನೂರ, ಡಾ.ಲಿಂಗನಗೌಡ ಪಾಟೀಲ, ಶಿವಕುಮಾರಗೌಡ ಪಾಟೀಲ, ಎಸ್.ಬಿ. ಕರಿಭರಮಗೌಡ್ರ ಉಪಸ್ಥಿತರಿದ್ದರು.