ಕನ್ನಡಪ್ರಭ ವಾರ್ತೆ ಚಾಮರಾಜನಗರಸಮಾಜದಲ್ಲಿ ಯಾವುದೇ ಭೇದಭಾವ ತೋರದೆ ಶಾಂತಿ, ಸಾಮರಸ್ಯ ಕಾಪಾಡುವವರು ನಿಜವಾದ ಸ್ವಾಮೀಜಿಗಳು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಹೇಳಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೆಎಸ್ಎಸ್ ಮಹಿಳಾ ಕಾಲೇಜಿನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀಮತ್ ರಾಜಗುರುತಿಲಕ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೯ನೆಯ ಜಯಂತಿ ಹಾಗೂ ವಿಚಾರ ಸಂಕಿರಣ ಮತ್ತು ದತ್ತಿ ಕಾರ್ಯಕ್ರಮ, ಸಾಧಕರಿಗೆ ಗೌರವಾಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಶೇ.೯೦ರಷ್ಟು ಸಾಮರಸ್ಯ ಇದೆ ಎಂದರೆ ಅದಕ್ಕೆ ಮಠ ಮಾನ್ಯಗಳು ಹಾಗೂ ಸ್ವಾಮೀಜಿಗಳೇ ಕಾರಣ, ನಮ್ಮ ಸಮಾಜದಲ್ಲಿ ಶಾಂತಿ ಸಾಮರಸ್ಯ ಕಾಪಾಡಿ ಮಾನವ ಕಲ್ಯಾಣಕ್ಕಾಗಿ ದುಡಿದವರು ಅನೇಕ ಸ್ವಾಮೀಗಳಿದ್ದಾರೆ. ಅಂತಹ ಸ್ವಾಮೀಜಿಗಳಲ್ಲಿ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಒಬ್ಬರು ಆದಕ್ಕಾಗಿ ಅವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.ಸ್ವಾಮೀಜಿಗಳಿಂದ ಪ್ರಸ್ತುತ ಸಮಾಜ ಬಯಸುವುದೇ ಸಾಮರಸ್ಯ ಜೀವನ. ಜಾತಿ, ಧರ್ಮ, ದ್ವೇಷಗಳಿಂದ ಏನನ್ನೂ ಸಾಧಿಸಲಾಗದು, ಮೀಸಲಾತಿ ಎನ್ನುವುದು ಅರ್ಹರಿಗೆ ಸಿಗಬೇಕು, ಮೀಸಲಾತಿ ದುರ್ಬಳಕೆಯಾಗಬಾರದು ಎಲ್ಲಾ ಜಾತಿ, ಧರ್ಮಗಳಲ್ಲೂ ಅತ್ಯಂತ ಬಡವರಿದ್ದಾರೆ, ಅಂತಹವರನ್ನು ಗುರುತಿಸಬೇಕಾಗಿದೆ ಎಂದರು. ಮಠ ಮಾನ್ಯಗಳಿಗೆ ದಿನಂಪ್ರತಿ ಸಾವಿರಾರು ಜನರು ಬರುತ್ತಾರೆ, ಅಂತಹವರಲ್ಲಿ ಜಾಗೃತಿ ಮೂಡಿಸಿ, ಸಾಮರಸ್ಯ ಮೂಡಿಸುತ್ತಿರುವವರು ಸ್ವಾಮೀಜಿಗಳು, ಕೆಲ ಸ್ವಾಮೀಜಿಗಳು ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಇದು ಸಮಾಜದಲ್ಲಿ ಆಶಾಂತಿ ಮೂಡಿಸುತ್ತದೆ ಎಂದರು.ಅಮೇರಿಕಾದ ಅಧ್ಯಕ್ಷ ಟ್ರಂಪ್ ಅವರು ನಾನು ಹಿಂದೂ ಧರ್ಮವನ್ನು ಗೌರವಿಸುತ್ತೇನೆ ಎಂದಿದ್ದಾರೆ. ಇದಕ್ಕೆ ಕಾರಣ ಹಿಂದೂ ಧರ್ಮದಲ್ಲಿರುವ ಮೌಲ್ಯಯುತ ಅಂಶಗಳು, ಇಂತಹ ಕಾರ್ಯಕ್ರಮಗಳು ದೊಡ್ಡ ಮಟ್ಟದಲ್ಲಿ ನಡೆಯಬೇಕು ಎಂದರು.ಜಿಲ್ಲೆಗೆ ಆಪಾರ ಕೊಡುಗೆ: ಜಿಲ್ಲೆಗೆ ರಾಜೇಂದ್ರ ಶ್ರೀಗಳ ಕೊಡುಗೆ ಎಂಬ ವಿಷಯದ ಬಗ್ಗೆ ಮಾತನಾಡಿದ ಮೈಸೂರಿನ ವಾಗ್ಮಿ ಡಿ.ಎಸ್.ಸದಾಶಿವಮೂರ್ತಿ ಚಾಮರಾಜನಗರ ಜಿಲ್ಲೆಗೆ ರಾಜೇಂದ್ರ ಶ್ರೀ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದರು. ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ಸಾಮಾಜಿಕ, ಆಡಳಿತಾತ್ಮಕ, ಸಾಹಿತ್ಯಕ, ಗ್ರಾಮೀಣಾಭಿವೃದ್ದಿ, ಕೌಟಂಬಿಕ ಸಾಮರಸ್ಯ, ಸರ್ಕಾರಿ ಸೇವೆ, ಆರೋಗ್ಯ ಸೇವೆ ಈ ರೀತಿ ಹತ್ತು ಹಲವು ಕೊಡುಗೆಗಳನ್ನು ನೀಡಿ ಜಿಲ್ಲೆಯ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದರು.೧೯೪೫ರಲ್ಲೇ ಈ ಜಿಲ್ಲೆಯಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ವಾಪಿಸಿ ಅನೇಕ ಬಡ ಕುಟುಂಬಳಿಗೆ ಅನ್ನದಾನ, ವಿದ್ಯಾದಾನ ಮಾಡಿದ್ದಾರೆ, ಇಲ್ಲಿ ಕಲಿತ ಸಾವಿರಾರು ಮಂದಿ ಉನ್ನತ ಸ್ಥಾನ ಪಡೆದಿದ್ದಾರೆ. ಸಂಸ್ಥೆಗಳನ್ನು ಸ್ಥಾಪಿಸಿ, ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ, ಮೈಸೂರಿನಲ್ಲಿ ಗುರುಕುಲ ಸ್ಥಾಪಿಸಿ, ಜಿಲ್ಲೆಯ ಅನೇಕ ಮಠಗಳಿಗೆ ಉತ್ತಮ ಮಠಾಧಿಪತಿಗಳನ್ನು ನೀಡಿದ್ದಾರೆ, ಜಿಲ್ಲೆಯ ಪ್ರಗತಿಗೆ ಬಹುಮುಖ ಆಯಾಮದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.