-ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆಯಾದ ಷಡಾಕ್ಷರಿ ಹೇಳಿಕೆ । ಇನ್ನಷ್ಟು ರಚನಾತ್ಮಕ ಕೆಲಸ ಮಾಡುವ ಭರವಸೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಮತ್ತೊಮ್ಮೆ ಸರ್ಕಾರಿ ನೌಕರರು ಅವಕಾಶ ನೀಡಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಮುಂದಿನ ದಿನದಲ್ಲಿ ಇನ್ನೂ ರಚನಾತ್ಮಕ ಕೆಲಸ ಮಾಡುತ್ತೇನೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆಯಾದ ಸಿ.ಎಸ್.ಷಡಾಕ್ಷರಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆಯಲ್ಲಿ ಸಾಕಷ್ಟು ಸವಾಲು ಎದುರಾಗಿದ್ದವು. 5ವರ್ಷ ನಿರಂತರ ಸಂಘಟನೆ ಮಾಡಿದ್ದೇನೆ. ಈ ಬಾರಿ ನಿರೀಕ್ಷೆಯಷ್ಟು ಮತಗಳು ಬರದೇ ಇದ್ದರೂ ಅಂಕಿಸಂಖ್ಯೆಯಲ್ಲಿ ಗೆದ್ದಿದ್ದೇನೆ. ಸತ್ಯ, ನ್ಯಾಯ, ಸೇವೆ, ಸಂಘಟನೆ ಕಾರಣಕ್ಕೆ ಸರ್ಕಾರಿ ನೌಕರರು 2ನೇ ಬಾರಿಗೆ ನನಗೆ ಆಶೀರ್ವಾದ ಮಾಡಿದ್ದಾರೆ ಎಂದರು.ಚುನಾವಣೆಯಲ್ಲಿ ಗೆಲುವು ಪಡೆದ ಬಳಿಕ ನನ್ನ ಜವಾಬ್ದಾರಿ ಹೆಚ್ಚಿದೆ. ಪ್ರಣಾಳಿಕೆಯಲ್ಲಿ ಹೇಳಿದ ಭರವಸೆ ಈಡೇರಿಸುವ ಜವಬ್ದಾರಿ ನನ್ನ ಮೇಲಿದೆ. ಅಲ್ಲದೆ, 2025ಅನ್ನು ಎನ್ಪಿಎಸ್ನಿಂದ ಒಪಿಎಸ್ ಮಾಡುವ ವರ್ಷ ಎಂದೇ ಘೋಷಿಸಲಾಗಿದೆ. ಎಲ್ಲ ಸರ್ಕಾರಿ ನೌಕರರ ಒತ್ತಾಯವೂ ಇದೇ ಆಗಿದೆ. ಈಗಗಾಗಲೇ 5 ರಾಜ್ಯಗಳಲ್ಲಿ ಎನ್ಪಿಎಸ್, ಒಪಿಎಸ್ ಮಾಡಲಾಗಿದೆ. 6ನೇ ರಾಜ್ಯವಾಗಿ ಕರ್ನಾಟಕದಲ್ಲೂ ಜಾರಿಯಾಗಲಿದೆ. ಸರ್ಕಾರ ಈಗಾಗಲೇ ಸಮಿತಿ ರಚನೆ ಮಾಡಿದೆ. ಸರ್ಕಾರದ ಜತೆ ಮಾತುಕತೆ ಮೂಲಕ ಇದನ್ನು ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ನೂತನ ಕಟ್ಟಡ ನಿರ್ಮಾಣ: ಸರ್ಕಾರಿ ನೌಕರರು ಬೆಂಗಳೂರಿಗೆ ಬಂದರೆ ಉಳಿಯಲು ಸರಿಯಾದ ವ್ಯವಸ್ಥೆ ಇಲ್ಲ. ಈಗಿರುವ ರೂಂ ಸಾಕಾಗುತ್ತಿಲ್ಲ. ಅದಕ್ಕಾಗಿ 150 ಕೋಟಿ ವೆಚ್ಚದಲ್ಲಿ 250 ಕೊಠಡಿಗಳಿರುವ ಕಟ್ಟಡ ಕಟ್ಟಲು ತೀರ್ಮಾನಿಸಲಾಗಿದೆ. ಕೇವಲ 100 ಕೊಠಡಿ ಕೋಣೆಗೆ ನೀಡುವ ಯೋಜನೆ ಸಂಘದ ಮುಂದೆ ಇದೆ. ಎಲ್ಲ ಜಿಲ್ಲೆಗಳಲ್ಲೂ ಆಡಿಟೋರಿಯಂ, ರೆಸ್ಟೋರೆಂಟ್, ವಿಶ್ರಾಂತಿ ಕೊಠಡಿ , ಬೋರ್ಡ್ ರೂಂ, ಸಮುದಾಯ ಭವನ ಇರುವ ಕಟ್ಟಡಗಳನ್ನು ಕಟ್ಟಲು ಚಿಂತನೆ ನಡೆದಿದೆ. ಮುಂದಿನ ದಿನಗಳಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಟೀಕೆ ಟಿಪ್ಪಣಿಗೆ ತಲೆಕೆಡಿಸಿಕೊಳ್ಳಲ್ಲ: ಸಿ.ಎಸ್.ಷಡಾಕ್ಷರಿ
ಪೊಟೋ: ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಪುನರಾಯ್ಕೆಯಾದ ಸಿ.ಎಸ್.ಷಡಾಕ್ಷರಿ ಮಾತನಾಡಿದರು.