ರೈತಸಂಘ ಹೋರಾಟದ ಫಲ: ನೆರೆಯ ತಾಲೂಕುಗಳಿಗೆ ಹೇಮಾವತಿ ನೀರು

KannadaprabhaNewsNetwork |  
Published : May 16, 2026, 12:30 AM IST
15ಕೆಎಂಎನ್ ಡಿ15 | Kannada Prabha

ಸಾರಾಂಶ

ರೈತ ಸಂಘದ ಸತತ ಹೋರಾಟದ ಫಲವಾಗಿ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದಿಂದ ಹೇಮಾವತಿ ಎಡದಂಡೆ ನಾಲೆಗೆ ನೀರು ಬಿಟ್ಟಿದ್ದರೂ ತಾಲೂಕಿನ ರೈತ ಸಮುದಾಯಕ್ಕೆ ನೀರಿನ ಸೌಲಭ್ಯ ಇಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರೈತ ಸಂಘದ ಸತತ ಹೋರಾಟದ ಫಲವಾಗಿ ಹಾಸನ ಜಿಲ್ಲೆ ಗೊರೂರಿನ ಹೇಮಾವತಿ ಜಲಾಶಯದಿಂದ ಹೇಮಾವತಿ ಎಡದಂಡೆ ನಾಲೆಗೆ ನೀರು ಬಿಟ್ಟಿದ್ದರೂ ತಾಲೂಕಿನ ರೈತ ಸಮುದಾಯಕ್ಕೆ ನೀರಿನ ಸೌಲಭ್ಯ ಇಲ್ಲದಂತಾಗಿದೆ.

ತಾಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸದೆ ನೆರೆಯ ತಾಲೂಕಿನ ಎರಡು ಕೆರೆಗಳಿಗೆ ಮಾತ್ರ ನೀರು ತುಂಬಿಸಲು ಮುಂದಾಗಿರುವ ನೀರಾವರಿ ಇಲಾಖೆ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರೈತರು, ಸರ್ಕಾರ ತಾಲೂಕಿನ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀರಾವರಿ ಇಲಾಖೆ ಕ್ರಮ ಖಂಡಿಸಿರುವ ರೈತಮುಖಂಡ ಸಿಂದಘಟ್ಟ ಮುದ್ದುಕುಮಾರ್, ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳನ್ನು ಹೇಮೆಯ ನೀರಿನಿಂದ ತುಂಬಿಸದಿದ್ದರೆ ರೈತರು ತಮ್ಮ ತಮ್ಮ ವ್ಯಾಪ್ತಿಯ ಕೆರೆಗಳ ತೂಬು ಎತ್ತಿ ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಆರಂಭಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಹೇಮೆಯ ನೀರಿನ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ದೇಶ ಪೂರ್ವಕವಾಗಿ ರಾಜಕೀಯ ಮಾಡಿದ್ದಾರೆ. ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಕೂಡ ತಮ್ಮ ಕ್ಷೇತ್ರ ವ್ಯಾಪ್ತಿಯ ತೊಣ್ಣೂರು ಕೆರೆಗೆ ಮಾತ್ರ ನೀರು ಬಿಡಿಸಿಕೊಂಡು ಕೆ.ಆರ್.ಪೇಟೆ ತಾಲೂಕಿನ ರೈತರ ಹಿತವನ್ನು ಮರೆತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹೇಮಾವತಿ ಜಲಾಶಯದ ನಂ.03 ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಜಯರಾಂ ಅವರು ನೀಡಿರುವ ಮಾಹಿತಿಯಂತೆ ಸರ್ಕಾರದ ಸೂಚನೆಯಂತೆ ಹೇಮಾವತಿ ಎಡದಂಡೆ ನಾಲೆ ಮೂಲಕ 500 ಕ್ಯುಸೆಕ ನೀರು ಬಿಟ್ಟಿದ್ದು, ಇದರಿಂದ ಮೇಲುಕೋಟೆ ಕ್ಷೇತ್ರದ ತೊಣ್ಣೂರು ಕೆರೆ ಮತ್ತು ನಾಗಮಂಗಲ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಸೂಳೆ ಕೆರೆ ಮಾತ್ರ ತುಂಬಿಸಲಾಗುವುದು. ಉಳಿದಂತೆ ಹೇಮಾವತಿ ವ್ಯಾಪ್ತಿಯ ಯಾವುದೇ ಕೆರೆಗಳನ್ನು ತುಂಬಿಸುವುದಿಲ್ಲ. ಮೇ 19ರವರೆಗೆ ಮಾತ್ರ ಕಾಲುವೆಯಲ್ಲಿ ನೀರು ಹರಿಯಲಿದೆ. ತೊಣ್ಣೂರು ಮತ್ತು ಸೂಳೆಕೆರೆಗಳು ತುಂಬಿದ ತಕ್ಷಣವೇ ನಾಲೆ ನೀರನ್ನು ಬಂದ್ ಮಾಡುವುದಾಗಿ ತಿಳಿಸಿದ್ದಾರೆ.

ಅಲ್ಲದೇ, ತಾಲೂಕು ವ್ಯಾಪ್ತಿಯಲ್ಲಿ ರೈತರು ಅಕ್ರಮವಾಗಿ ಕೆರೆಗಳಿಗೆ ನೀರು ಹರಿಸಿಕೊಳ್ಳುವುದನ್ನು ತಡೆಯಲು ಕಾಲುವೆ ಏರಿ ಮೇಲೆ ನಿರಂತರ ಬೀಟ್ ಆರಂಭಿಸಿದ್ದಾರೆ. ತುಮಕೂರು ಭಾಗಕ್ಕೆ ಹೇಮೆ ನೀರು ಹರಿಸಿ ಮಂಡ್ಯ ಜಿಲ್ಲಾ ವ್ಯಾಪ್ತಿಯ ಪ್ರದೇಶಕ್ಕೆ ನೀರು ಹರಿಸದ ರಾಜ್ಯ ಸರ್ಕಾರದ ಮಲತಾಯಿ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರಿಗೆ ಯಾವುದೇ ಪಕ್ಷವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆನ್ನುವ ಕಾರಣದಿಂದ ರಾಜಕೀಯ ಮಾಡದೆ ತಾಲೂಕಿನ ಕೆರೆ ಕಟ್ಟೆಗಳಿಗೂ ಹೇಮೆಯ ನೀರು ಹರಿಸಲು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

ತಾಲೂಕಿನ ಕೆರೆ ಕಟ್ಟೆಗಳು ಒಣಗಿದ್ದು ಭೀಕರ ಬರದ ಛಾಯೆ ಕಾಣಿಸಿಕೊಂಡಿದೆ. ಕೆರೆಗಳಲ್ಲಿ ನೀರಿಲ್ಲದ ಕಾರಣ ಅಂತರ್ಜಲ ಮಟ್ಟವೂ ಕುಸಿದಿದ್ದು ಸಾವಿರಾರು ಕೊಳವೆ ಬಾವಿಗಳು ನೆಲಕಚ್ಚಿವೆ. ಅಳಿದುಳಿದ ಬೆಳೆಗಳ ಸಂರಕ್ಷಣೆ ಮತ್ತು ಕುಡಿಯುವ ನೀರಿನ ದಾಹ ತಣಿಸಲು ಹೇಮಾವತಿ ಎಡದಂಡೆ ನಾಲೆ ಮೂಲಕ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಡಗರ-ಸಂಭ್ರಮ ಶ್ರೀಚಾಮುಂಡೇಶ್ವರಿ ದೇವಿ ರಥೋತ್ಸವ
ಪಾರಂಪರಿಕ ಮೂಲೆ ಮಂಟಪ ಧ್ವಂಸ: ಪ್ರತಿಭಟನೆ