ಶಿವರಾಜ ಯಲವಗಿಸವಣೂರು: ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಎಡವಟ್ಟಿನಿಂದಾಗಿ ತಾಲೂಕಿನ ಕಳಲಕೊಂಡ ಗ್ರಾಮದ ಬಸ್ ನಿಲ್ದಾಣದಿಂದ ತಳ್ಳಿಹಳ್ಳಿ ಮಾರ್ಗದಿಂದ ಜಿಲ್ಲಾ ಕೇಂದ್ರ ಹಾವೇರಿ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಖಾಸಗಿ ಕಂಪನಿಗಳು ಸರ್ಕಾರದ ಆಸ್ತಿ ಹಾಗೂ ಸಾರ್ವಜನಿಕರ ಉಪಯುಕ್ತ ರಸ್ತೆಯನ್ನು ಮತ್ತಷ್ಟು ಹಾಳು ಮಾಡಿದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆಮಾಡಿದೆ. ಜಲ್ಲಾಪುರ ಗ್ರಾಪಂ ವತಿಯಿಂದ ಖಾಸಗಿ ಮೊಬೈಲ್ ಕಂಪನಿ ಪಡೆದ ಪರವಾನಗಿ ಕುರಿತು ತನಿಖೆ ಕೈಗೊಳ್ಳಬೇಕು ಎಂಬುದು ಕಳಲಕೊಂಡ ಗ್ರಾಮಸ್ಥರ ಬೇಡಿಕೆಯಾಗಿದೆ. ರಸ್ತೆ ಹಾಳು ಮಾಡಿದ ಖಾಸಗಿ ಕಂಪನಿ ವಿರುದ್ಧ ಸೂಕ್ತ ಕಾನೂನು ಕೈಗೊಂಡು ಹಾನಿಯನ್ನು ಭರಣ ಮಾಡಿಸಬೇಕು. ಕೂಡಲೇ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ತಪ್ಪಿಸ್ಥರ ವಿರುದ್ಧ ಕ್ರಮ: ಮೊಬೈಲ್ ಕಂಪನಿ ಕೇಬಲ್ ಅಳವಡಿಕೆಗಾಗಿ ಪರವಾನಗಿಗಾಗಿ ಮನವಿಯನ್ನು ಸಲ್ಲಿಸಿದ್ದರು. ಈ ಕುರಿತು ಆಡಳಿತ ಮಂಡಳಿ ಹಾಗೂ ಸರ್ಕಾರದ ಷರತ್ತುಗಳ ಅನ್ವಯ ಪರವಾನಗಿ ನೀಡಲಾಗಿತ್ತು. ಆದರೆ, ಕಂಪನಿಯವರು ರಸ್ತೆಗೆ ಹೊಂದಿಕೊಂಡು ಅಗೆದು ಕೇಬಲ್ ಅಳವಡಿಸಿರುವ ಹಿನ್ನೆಲೆ ರಸ್ತೆ ಮತ್ತಷ್ಟು ಹಾಳಾಗಿದೆ. ಈ ಕುರಿತು ತಪ್ಪಿಸ್ಥರ ವಿರುದ್ಧ ಕ್ರಮಕ್ಕಾಗಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಲ್ಲಾಪುರ ಗ್ರಾಪಂ ಪಿಡಿಒ ವೀರೇಶ ಅವಾರಿ ತಿಳಿಸಿದರು.ಹೋರಾಟ ಅನಿವಾರ್ಯ: ರಸ್ತೆ ಪಿಡಬ್ಲ್ಯುಡಿಗೆ ಸೇರಿದ್ದು. ಖಾಸಗಿ ಮೊಬೈಲ್ ಕಂಪನಿಗೆ ರಸ್ತೆ ಅಗೆಯಲು ಪರವಾನಗಿ ನೀಡಿದ್ದು ಮಾತ್ರ ಗ್ರಾಪಂ. ಇದು ಹೇಗೆ ಸಾಧ್ಯ? ಗ್ರಾಪಂ ಬೊಕ್ಕಸಕ್ಕೆ ಹಣ ಕಟ್ಟಿಸಿಕೊಂಡಿದ್ದಾರೆ. ಎಲ್ಲ ಗೊಂದಲಕ್ಕೆ ತೆರೆ ಎಳೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಳ್ಳುವುದು ಅವಶ್ಯವಾಗಿದೆ. ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಕಳಲಕೊಂಡ ನಿವಾಸಿ ಗಂಗಪ್ಪ ಹರಿಜನ ತಿಳಿಸಿದರು.