ದೇಶದ ಪ್ರಗತಿಯಲ್ಲಿ ಮಾನವ ಸಂಪನ್ಮೂಲದ ಪಾತ್ರ ಹಿರಿದು: ರಾಜಶೇಖರ ಹಿಟ್ನಾಳ

KannadaprabhaNewsNetwork | Published : Mar 9, 2025 1:48 AM

ದೇಶದ ಪ್ರಗತಿಯಲ್ಲಿ ಮಾನವ ಸಂಪನ್ಮೂಲ (ಎಚ್‌.ಆರ್‌.) ವಿಭಾಗದ ಪಾತ್ರ ಹಿರಿದಾಗಿದೆ. ಕಾರ್ಖಾನೆ ಇಲ್ಲವೇ ಉದ್ಯಮ ಸಮರ್ಥವಾಗಿ ನಡೆಯಲು ಮಾನವ ಸಂಪನ್ಮೂಲದ ಪಾತ್ರ ಅತಿ ಮುಖ್ಯ.

ಎಚ್‌.ಆರ್‌. ಸಂಘದ ದಕ್ಷಿಣ ಪ್ರಾದೇಶಿಕ ಸಮ್ಮೇಳನಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ದೇಶದ ಪ್ರಗತಿಯಲ್ಲಿ ಮಾನವ ಸಂಪನ್ಮೂಲ (ಎಚ್‌.ಆರ್‌.) ವಿಭಾಗದ ಪಾತ್ರ ಹಿರಿದಾಗಿದೆ. ಕಾರ್ಖಾನೆ ಇಲ್ಲವೇ ಉದ್ಯಮ ಸಮರ್ಥವಾಗಿ ನಡೆಯಲು ಮಾನವ ಸಂಪನ್ಮೂಲದ ಪಾತ್ರ ಅತಿ ಮುಖ್ಯ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್‌ ನ ಉತ್ತರ ಕರ್ನಾಟಕ ಘಟಕದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ದಕ್ಷಿಣ ಪ್ರಾದೇಶಿಕ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾನವ ಸಂಪನ್ಮೂಲ (ಎಚ್‌.ಆರ್‌.) ಇಲ್ಲದೇ ಯಾವುದೇ ಸಂಸ್ಥೆ, ಉದ್ಯಮ, ಕಾರ್ಖಾನೆ ಮತ್ತು ಕಂಪನಿಗಳು ಪ್ರಗತಿ ಹೊಂದಲು ಕಷ್ಟ ಸಾಧ್ಯ. ಮಾನವ ಸಂಪನ್ಮೂಲ ವಿಭಾಗ ಕೂಡ ಕಾಲ ಕಾಲಕ್ಕೂ ಮಾರ್ಪಾಡುಗಳನ್ನು ಹೊಂದಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಯಮಗಳ ಬದಲಾವಣೆಯೊಂದಿಗೆ ಕೆಲಸ ಮಾಡಬೇಕು ಎಂದರು.

ಮಾನವ ಸಂಪನ್ಮೂಲ ವಿಭಾಗ ಬರೀ ಸಿಬ್ಬಂದಿ ನೇಮಕಾತಿ ಅಷ್ಟೇ ಅದರ ಹೊಣೆಯಲ್ಲ. ಹೊಸ, ಹೊಸ ತಾಂತ್ರಿಕತೆ, ಕೌಶಲ್ಯ ಅಳವಡಿಸಿಕೊಳ್ಳಬೇಕು. ಜೊತೆಗೆ ನೆಲದ ಕಾನೂನಿನ ಬದಲಾವಣೆಯನ್ನು ಅಳವಡಿಸಿಕೊಳ್ಳಬೇಕು. ಹಾಗಾಗಿ ಮಾನವ ಸಂಪನ್ಮೂಲ ವಿಭಾಗದ ಕಾರ್ಯ ಸವಾಲಿನ ಕೆಲಸ ಆಗಿದೆ ಎಂದರು.

ಮಾನವ ಸಂಪನ್ಮೂಲ ವಿಭಾಗ ಪ್ರಗತಿ ಹೊಂದಿದರೆ, ದೇಶ ಸಮಗ್ರ ಪ್ರಗತಿ ಹೊಂದಲಿದೆ. ಹಾಗಾಗಿ ಮಾನವ ಸಂಪನ್ಮೂಲ ವಿಭಾಗಕ್ಕೆ ನಾವೆಲ್ಲರೂ ಮನ್ನಣೆ ನೀಡಬೇಕಿದೆ. ಇಡೀ ದೇಶ ಈಗ ಮಾನವ ಸಂಪನ್ಮೂಲ ಕ್ಷೇತ್ರದತ್ತ ನೋಡುತ್ತಿದೆ. ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನನ್ನ ಸೌಭಾಗ್ಯವೇ ಸರಿ. ಇಂತಹ ಸಮ್ಮೇಳನ, ಕಾರ್ಯಾಗಾರ, ವಿಚಾರ ಸಂಕಿರಣಗಳು ಹೆಚ್ಚೆಚ್ಚು ನಡೆಯಬೇಕು. ಪರಸ್ಪರ ವಿಚಾರ, ವಿನಿಮಯ ಮಾಡಿಕೊಳ್ಳಬೇಕು ಎಂದರು.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್‌ ನ ಅಧ್ಯಕ್ಷ ಡಾ. ಎಂ.ಎಚ್‌. ರಾಜಾ, ಪ್ರ. ಕಾರ್ಯದರ್ಶಿ ಪಿ.ಆರ್. ಬಸವರಾಜ, ಮಾಜಿ ಅಧ್ಯಕ್ಷ ಎಸ್‌.ಎನ್‌. ಗೋಪಿನಾಥ, ಉತ್ತರ ಕರ್ನಾಟಕ ಘಟಕದ ಅಧ್ಯಕ್ಷ ಡಾ. ಪಿ. ನಾರಾಯಣ, ದಕ್ಷಿಣ ಪ್ರಾದೇಶಿಕ ಘಟಕದ ಉಪಾಧ್ಯಕ್ಷ ಡಾ. ಎಸ್‌. ರಾಜೇಂದ್ರನ್‌, ಹೈಕೋರ್ಟ್‌ನ ಹಿರಿಯ ವಕೀಲ ಎಸ್‌.ಎನ್‌. ಮೂರ್ತಿ ಮತ್ತಿತರರಿದ್ದರು. ಈ ಸಮ್ಮೇಳನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ 350ಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇಡೀ ದಿನ ವಿವಿಧ ವಿಷಯಗಳ ಕುರಿತು ವಿಚಾರ ಗೋಷ್ಠಿ ನಡೆಸಲಾಯಿತು.