ಬ್ಯಾಡಗಿ: ಬಹು ಹಿಂದಿನಿಂದಲೂ ಸಮಾಜದ ಎಲ್ಲ ಸ್ಥರಗಳಲ್ಲಿ ಸಮಾನತೆ ತರಲು ಧಾರ್ಮಿಕ ಆಚರಣೆಗಳು ಅವಶ್ಯವಾಗಿದ್ದವು. ಅದರಲ್ಲೂ ಜಾತ್ರಾ ಮಹೋತ್ಸವಗಳು ಎಲ್ಲಾ ಧರ್ಮದ ಜನರನ್ನು ಒಗ್ಗೂಡಿಸುವಲ್ಲಿ ಪ್ರಮಖ ಪಾತ್ರವನ್ನು ವಹಿಸಿವೆ ಎಂದು ಪಟ್ಟಣದ ಮುಪ್ಪಿನೇಶ್ವರಮಠದ ಚನ್ನಮಲ್ಲಿಕಾರ್ಜುನಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಬದುಕಿನ ಮೌಲ್ಯ, ನಂಬಿಕೆ, ಆಚರಣೆ, ಸಂಪ್ರದಾಯ ಇವುಗಳನ್ನು ಒಗ್ಗೂಡಿಸುವ ಶಕ್ತಿ ಧರ್ಮಕ್ಕಿದೆ. ಇವೆಲ್ಲವೂ ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರಲಿದೆ. ಅದರಲ್ಲೂ ಸಾಮಾಜಿಕ ಬದಲಾವಣೆಗೆ ಧನಾತ್ಮಕವಾಗಿ ಕೆಲಸ ಮಾಡಲು ಜಾತ್ರಾ ಮಹೋತ್ಸವಗಳು ಪ್ರೇರೇಪಿಸುತ್ತವೆ. ಇದಕ್ಕಾಗಿಯೇ ಪ್ರತಿಯೊಂದು ಹಳ್ಳಿಗಳಲ್ಲಿ ಜಾತ್ರೆಗಳು ವಿಜೃಂಭಣೆಯಿಂದ ನೆರವೇರಿಸಲಾಗುತ್ತದೆ ಎಂದರು.
ಧಾರ್ಮಿಕ ನಂಬಿಕೆಗಳು ಅಸ್ತಿತ್ವದಲ್ಲಿ ಇರದಿದ್ದರೇ ಸಾಮಾಜಿಕ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಇರುತ್ತಿರಲಿಲ್ಲ. ಧರ್ಮವು ಯಾವುದಾದರೊಂದು ರೂಪದಲ್ಲಿ ಮನುಷ್ಯನಲ್ಲಿ ಅಡಗಿದ್ದು ಜಾತ್ರೆಗಳು ಇಂತಹ ಚಟುವಟಿಕೆಗಳಲ್ಲಿ ಒಂದಾಗಿದೆ. ನಾವೆಲ್ಲರೂ ಒತ್ತಡದ ಬದುಕನ್ನು ಸಾಗಿಸುತ್ತಿದ್ದು, ಲೌಕಿಕ ಬದುಕಿನಲ್ಲಿ ಸುಖವಾಗಿಲ್ಲ, ಹೀಗಾಗಿ ಜಾತ್ರೆಗಳು ಭೌತಿಕ ಮತ್ತು ಸಾಮಾಜಿಕ ಪರಿಸರದ ಶಕ್ತಿಗಳೊಂದಿಗೆ ಮನುಷ್ಯನ ಸಂಬಂಧಗಳನ್ನು ಬಹಳಷ್ಟು ಹತ್ತಿರಕ್ಕೆ ತರಲು ಸಹಕರಿಸಲಿವೆ ಎಂದರು.ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿಯ ರಾಚಯ್ಯನವರು ಓದಿಸೋಮಠ, ಡಾ.ಎಸ್.ಎನ್. ನಿಡಗುಂದಿ, ಮಹೇಶ್ವರಿ ಪಸಾರದ, ರಾಜು ಮೋರಿಗೇರಿ, ಅಶೋಕ ಮೂಲಿಮನಿ, ಪುರಸಭೆ ಸದಸ್ಯೆ ಗಾಯತ್ರಿ ರಾಯ್ಕರ್, ಚಂದ್ರಶೇಖರ ಹಿರೇಮಠ, ಎಂ.ಜಿ. ಹಿರೇಮಠ, ಅರುಣ ಶಾಸ್ತ್ರಿ, ವೈದಿಕ ಪಾಠಶಾಲೆಯ ಚನ್ನಬಸಯ್ಯ ಹಾಗೂ ಇನ್ನಿತರರಿದ್ದರು.