ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸುಂದರ ಸಮಾಜ ನಿರ್ಮಾಣ ಕಾರ್ಯದಲ್ಲಿ ಮಾಧ್ಯಮಗಳ ಪಾತ್ರ ಅನನ್ಯವಾದುದು ಎಂದು ಹಿರಿಯ ವಕೀಲ ಹಾಗೂ ನೋಟರಿ ಈಶ್ವರಚಂದ್ರ ವಿದ್ಯಾಸಾಗರ್ ಅಭಿಪ್ರಾಯಪಟ್ಟರು.ಇಲ್ಲಿನ ಪತ್ರಿಕಾಭವನದಲ್ಲಿ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾಪುರಸ್ಕಾರ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈಭವಿಕರೀಸುವುದಕ್ಕೆ ಕಡಿವಾಣ ಹಾಕಬೇಕು:ಪತ್ರಿಕಾ ಮಾಧ್ಯಮದವರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ದೃಶ್ಯ ಮಾಧ್ಯಮದಲ್ಲಿ ಅಪರಾಧ ಸುದ್ದಿಗಳನ್ನು ಅತೀ ಹೆಚ್ಚು ವೈಭವಿಕರೀಸುವುದಕ್ಕೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪ್ರಸ್ತುತ ದಿನಗಳಲ್ಲಿ ಮೊಬೈಲ್ ಬಳಕೆ ಮಾಡುವ ಮೂಲಕ ಸಮಯವನ್ನು ವ್ಯರ್ಥಮಾಡುತ್ತಿದ್ದಾರೆ. ಆ ಘೀಳಿನಿಂದ ಹೊರಬಂದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.ಕರ್ನಾಟಕ ಪೊಲೀಸರು ವಿಶ್ವದಲ್ಲೇ ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವ ಹೆಸರನ್ನು ಹೊಂದಿರುವ ಸ್ಕಾಟ್ಲ್ಯಾಂಡ್ ಪೊಲೀಸರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಮವಾರಪೇಟೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಲವಾರು ಕ್ಲಿಷ್ಟಕರ ಕೇಸುಗಳನ್ನು ಪತ್ತೆ ಹಚ್ಚುವ ಮೂಲಕ ಸಾಧನೆ ಮಾಡಿರುವುದು ಪ್ರಶಂಸನೀಯ ಎಂದು ಈ ಸಂದರ್ಭ ಶ್ಲಾಘಿಸಿದರು.
ಭವಿಷ್ಯಕ್ಕೆ ಉತ್ತಮ ಮುನ್ನುಡಿ:ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ.ಅನಿಲ್ ಮಾತನಾಡಿ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಅವರ ಭವಿಷ್ಯಕ್ಕೆ ಉತ್ತಮ ಮುನ್ನುಡಿ ಬರೆಯಲಾಗಿದೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ಮುಂದುವರೆಯಬೇಕು ಎಂದು ಹೇಳಿದರು.
ಮಳೆಗಾಲ ಮುಗಿದ ನಂತರ ಕೊಡಗು ಪತ್ರಕರ್ತರ ಸಂಘದಿಂದ ಜಿಲ್ಲಾ ಮಟ್ಟದ ಪತ್ರಕರ್ತರ ಕುಟುಂಬದೊಂದಿಗೆ ಉತ್ತಮ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ಈ ಸಂದರ್ಭ ತಿಳಿಸಿದರು.ಪೊಲೀಸ್ ನಿರೀಕ್ಷಕ ಮುದ್ದುಮಾದೇವ ಸನ್ಮಾನ ಸ್ವೀಕರಿಸಿ ಮಾತನಾಡಿ, ಸನ್ಮಾನಗಳಿಂದ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದ್ದು, ಉತ್ತಮ ಕಾರ್ಯ ನಡೆಸಲು ಇದು ಸಹಕಾರಿಯಾಗಿದೆ. ಇಲಾಖೆ ವತಿಯಿಂದ ಇನ್ನಷ್ಟು ಪರಿಣಾಮಕಾರಿಯಾಗಿ ಉತ್ತಮ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಈಶ್ವರಚಂದ್ರ ಸಾಗರ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಟಿ.ಅನಿಲ್, ಪಟ್ಟಣ ಪಂಚಾಯಿತಿ ಸದಸ್ಯ ಬಿ.ಸಂಜೀವ, ಪೊಲೀಸ್ ನಿರೀಕ್ಷಕ ಮುದ್ದುಮಾದೇವ ಅವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಸನ್ಮಾನ ಗೌರವ:
ಅಲ್ಲದೇ ಪತ್ರಕರ್ತರ ಮಕ್ಕಳನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಪತ್ರಕರ್ತರ ಸಂಘದ ಕುಟುಂಬದ ಮಹಿಳೆಯರಿಗೆ ಸಂಗೀತ ಕುರ್ಚಿ, ಪತ್ರಕರ್ತರಿಗೆ ಬಾಸ್ಕೆಟ್ಗೆ ಬಾಲ್ ಹಾಕುವ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.ಸ್ಪರ್ಧೆಯಲ್ಲಿ ಸುಜಾತ ಪ್ರಥಮ, ಶೈಲಾ ವಸಂತ್ ದ್ವಿತೀಯ ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಹರೀಶ್ ಕುಮಾರ್ ಪ್ರಥಮ ಮತ್ತು ಡಿ.ಎಲ್.ಆಯುಷ್ ದ್ವಿತೀಯ ಸ್ಥಾನ ಪಡೆದರು.
ಪತ್ರಕರ್ತರ ಸಂಘದ ಕಾರ್ಯದರ್ಶಿ ಡಿ.ಪಿ.ಲೋಕೇಶ್ ಸ್ವಾಗತಿಸಿ, ಎಸ್.ಎ.ಮುರಳೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕವನ್ ಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹರೀಶ್ ಕುಮಾರ್ ವಹಿಸಿದ್ದರು.ಕಾರ್ಯಕ್ರಮದ ನಂತರ ಪತ್ರಕರ್ತರು ಮತ್ತು ಕುಟುಂಬದ ಸದಸ್ಯರಿಂದ ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಟಿ.ಜೆ.ಪ್ರವೀಣ್ ಕುಮಾರ್ ಮತ್ತು ತಾಲೂಕು ಸಂಘದ ನಿರ್ದೇಶಕ ಟೋಮಿ ಥಾಮಸ್ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.