ಕಡೂರು ಶೈಕ್ಷಣಿಕ ವಲಯದ 63ನೇ ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಕೆ.ಎಸ್.ಆನಂದ್
ದೇಶದ ಅಭಿವೃದ್ಧಿ ಮತ್ತು ಸಮಾಜದ ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು ಕ್ಷೇತ್ರದ ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಕಡೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ 63ನೇ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಡಾ.ಸರ್ವಪಲ್ಲಿ ರಾಧಾಕೃಷ್ಣನ್ ದೇಶದ ಜನತೆ ಶಿಕ್ಷಣ ಪಡೆಯಬೇಕೆಂಬ ನಿಟ್ಟಲ್ಲಿ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ತಮ್ಮ ಜನ್ಮ ದಿನಾಚರಣೆಯನ್ನು ಶಿಕ್ಷಕರಿಗೆ ನೀಡಿದ ಕಾರಣ ಶಿಕ್ಷಕರ ದಿನವನ್ನು ದೇಶಾದ್ಯಂತ ಆಚರಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಬಹುತೇಕ ಶಿಕ್ಷಕರು ತಮ್ಮ ಹಲವು ಸಮಸ್ಯೆಗಳ ನಡುವೆಯೂ ಸೇವೆಯ ಮೂಲಕ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದರು.ನಮ್ಮ ನಾಯಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 7ನೇ ವೇತನ ಆಯೋಗ ಜಾರಿಗೊಳಿಸಿ ನೌಕರರ ಪರವಾಗಿದೆ. ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಎಂಬಂತೆ ಕೆಪಿಎಸ್ ಶಾಲೆಗಳ ಆರಂಭಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಶೋಷಿತ ವರ್ಗಗಳಿಗೂ ಶಿಕ್ಷಣ ಸಿಗಲು ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಸಲಾಗಿದೆ. ಉತ್ತಮ ಶಿಕ್ಷಕ ಸಮಾಜ ತಿದ್ದು ವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅವರ ಸೇವೆಯು ಪ್ರತಿ ವಿದ್ಯಾರ್ಥಿ ಜೀವನದಲ್ಲಿ ಅನೇಕ ತಿರುವು ಪಡೆದಿರುವ ಸಾಕ್ಷಿಗಳಿವೆ ಎಂದರು.ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಶಿಕ್ಷಕರಿಗೆ ವಿಶೇಷ ಪ್ರಾಧ್ಯಾನ್ಯತೆ ನೀಡುವಲ್ಲಿ ಡಾ.ಸರ್ವಪಲ್ಲಿ ರಾಧಾ ಕೃಷ್ಣನ್ ಕೊಡುಗೆ ಅಪಾರ. ಸಮಾಜದಲ್ಲಿ ಸುಶಿಕ್ಷಿತ ಮಕ್ಕಳನ್ನು ಸೃಷ್ಟಿಸಲು ಶಿಕ್ಷಕರು ಹೆಚ್ಚಿನ ಶ್ರಮ ವಹಿಸುತ್ತಾರೆ. ನಮ್ಮ ತಾಲೂಕಿನಲ್ಲೂ ಶಿಕ್ಷಕರ ಮಕ್ಕಳ ಮೇಲಿನ ಕಾಳಜಿ ಹೆಚ್ಚಿನದಾಗಿದೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಜವಾಬ್ದಾರಿಯುತ ಕಾರ್ಯಗಳೊಂದಿಗೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ ಶಾಲೆಗಳ ಅಭಿವೃದ್ಧಿಗೆ ಪರಿಶ್ರಮ ಹಾಕಬೇಕು ಎಂದರು.ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಹರೀಶ್ ಮಾತನಾಡಿ, ಶಿಕ್ಷಕರು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಕ್ರಮ ವಹಿಸಬೇಕಿರುವುದರಿಂದ ಶಾಸಕರು ರಾಜ್ಯ ಸರ್ಕಾರದ ಗಮನ ಸೆಳೆದು ಶಿಕ್ಷಕರ ಒತ್ತಡ ಕಡಿಮೆ ಮಾಡಬೇಕು. ಶಿಕ್ಷಕರು ಸೇರಿ ಸರಕಾರಿ ನೌಕರರ ಬೇಡಿಕೆಗಳ ಈಡೇರಿಸಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.
ತಾಪಂ ಇಒ ಸಿ.ಆರ್. ಪ್ರವೀಣ್, ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಜಿ.ಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜುನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ. ಹರೀಶ್. ಬೀರೂರು ಬಿಇಒ ರುದ್ರಪ್ಪ, ಕೆ. ನಾಗರಾಜಪ್ಪ, ಬಿ.ಟಿ. ಪ್ರೇಮ್ಕುಮಾರ್, ಎನ್.ಎಸ್.ದೇವರಾಜ್, ಮುರುಳೀಧರ್, ಧನಪಾಲನಾಯ್ಕ್, ಎಂ.ಬಿ.ಮಂಜುನಾಥ್, ಎಂ. ಲಿಂಗರಾಜು, ಬಿ.ಪ್ರಕಾಶ್, ಸೈಯದ್ ಸುಹೇಲ್, ಬಿ.ಆನಂದಪ್ಪ, ಆಂಜನೇಯ, ಲತಾಮಣಿ, ನಾಗರತ್ನ. ಕಂಸಾಗರ ಸೋಮಶೇಖರ್ ಮತ್ತಿತರಿದ್ದರು.---ಬಾಕ್ಸ್---
ಕಡೂರು ಪಟ್ಟಣದಲ್ಲಿ ಈಗಾಗಲೇ ಗುರುಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ನನ್ನ ಶಾಸಕರ ನಿಧಿಯಿಂದ ಭವನದ ಮುಂದುವರಿದ ಕಾಮಗಾರಿಗೆ 50 ಲಕ್ಷ ರು. ಅನುದಾನ ಒದಗಿಸಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಶಿಕ್ಷಕರ ಸಂಘಟನೆಗಳು ನಿರ್ಮಾಣದ ಕಾರ್ಯಕ್ಕೆ ಮುಂದಾಗಬೇಕು-- ಕೆ.ಎಸ್.ಆನಂದ್, ಶಾಸಕರು.
5ಕೆಕೆಡಿಯು1.ಕಡೂರು ತಾಲೂಕಿನ ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ನಡೆದ ಕಡೂರು ಶೈಕ್ಷಣಿಕ ವಲಯದ ತಾಲೂಕು ಮಟ್ಟದ 63 ನೇ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್ ಮತ್ತಿತರರಿದ್ದರು
5ಕೆಕೆಡಿಯು1ಎ.ಕಡೂರು ತಾಲೂಕಿನ ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ನಡೆದ ಕಡೂರು ಶೈಕ್ಷಣಿಕ ವಲಯದ ತಾಲ್ಲೂಕು ಮಟ್ಟದ 63ನೇ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶಾಸಕ ಕೆ.ಎಸ್. ಆನಂದ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಹರೀಶ್. ಬಿಇಒ ಸಿದ್ದರಾಜನಾಯ್ಕ ಮತ್ತಿತರರಿದ್ದರು.