ಬಳ್ಳಾರಿ: ಆಧುನಿಕ ಮತ್ತು ಸಶಕ್ತ ಭಾರತ ನಿರ್ಮಾಣ ಮಾಡುವಲ್ಲಿ ಸ್ವಾಮಿ ವಿವೇಕಾಂದರ ಜ್ಞಾನ, ತಿಳಿವಳಿಕೆ ಮತ್ತು ಪರಿಹಾರೋಪಾಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಬೆಂಗಳೂರಿನ ಖ್ಯಾತ ಅಂಕಣಕಾರ ವಿವೇಕಾನಂದ ಎಚ್.ಕೆ. ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ವಿಶ್ರೀಕೃ ವಿಶ್ವವಿದ್ಯಾಲಯದ ಸಹಯೋಗದಲ್ಲಿ “ಸ್ವಾಮಿ ವಿವೇಕಾನಂದ ಸಮಗ್ರ ಚಿಂತನೆಗಳು ಮತ್ತು ಯುವ ಭಾರತ” ಕುರಿತು ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಮಂಗಳವಾರ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚಾನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಭವಿಷ್ಯದ ಭಾರತ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಅಪಾರವಾಗಿದೆ. ಹೆಚ್ಚು ಯುವ ಸಮುದಾಯ ಹೊಂದಿರುವ ಭಾರತ ಇಂದು ಅಪಾಯದಲ್ಲಿದೆ. ಮಾನವಿಯ ಮೌಲ್ಯಗಳು, ವೈಚಾರಿಕ ಚಿಂತನೆಗಳು ಹಾಗೂ ಸಂಬಂಧಗಳು ಇಂದು ವ್ಯವಹಾರಿಕವಾಗಿವೆ. ಮಾನವೀಯತೆ ವಿರುದ್ಧದ ಮೌಲ್ಯಗಳು ಸಮಾಜದಲ್ಲಿ ಸ್ಥಾನ ಪಡೆಯುತ್ತಿವೆ. ನಿಮ್ಮನ್ನು ನೀವು ಅನುಕರಿಸಿ, ತಂದೆ, ತಾಯಿ ಮತ್ತು ಗುರುಗಳನ್ನು ಆದರ್ಶಪ್ರಾಯವಾಗಿ ಸ್ವೀಕರಿಸಿ ಪ್ರಬುದ್ದರಾಗಬೇಕು ಎಂದು ಕರೆ ನೀಡಿದರು.ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರೊ. ಅನುರಾಧಾ ಮಾತನಾಡಿ, ಸ್ವಾಮಿ ವಿವೇಕಾನಂದರು ಅಮೇರಿಕಾದ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮನುಷ್ಯನಲ್ಲಿರುವ ಅಗಾಧ ಶಕ್ತಿ ಕುರಿತು ಭಾಷಣ ಮಾಡಿದರು. ಭಾರತದ ಚಿಂತನೆಗಳನ್ನು, ವೈಚಾರಿಕತೆಯನ್ನು ಸೂಕ್ಷ್ಮ ಉದಾರಣೆಗಳನ್ನು ನೀಡುತ್ತ ಜಗತ್ತಿಗೆ ಪರಿಚಯಿಸಿದರು.
ಭಾರತೀಯ ಸಂಸ್ಕೃತಿ, ವೈಚಾರಿಕತೆ, ಆವಿಷ್ಕಾರ, ವೈದಿಕ ಕೊಡುಗೆಗಳನ್ನು ವಿಶ್ವವೇ ಮೆಚ್ಚಿಕೊಂಡಿದೆ. ಪ್ರಪಂಚದ ಹಲವು ಮುಂದುವರಿದ ರಾಷ್ಟ್ರಗಳ ಉನ್ನತ ಸ್ಥಾನಗಳ ಚುಕ್ಕಾಣಿ ಹಿಡಿದಿರುವುದು ಭಾರತೀಯರೆ ಎಂದರು.ವಿವಿಯ ಕುಲಪತಿ ಎಂ. ಮುನಿರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಿಂತಕರಾದ ಟಿ. ಪ್ರಸನ್ನ, ವಿವಿಯ ಕುಲಸಚಿವ ಎಸ್.ಎನ್. ರುದ್ರೇಶ್ ಸೇರಿದಂತೆ ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಎಚ್. ಶಿವಪ್ರಸಾದ್ ಹಾಗೂ ಡಾ. ಕುಮಾರ ಕಾರ್ಯಕ್ರಮ ನಿರ್ವಹಿಸಿದರು. ಎರಡು ದಿನಗಳ ವಿಚಾರ ಸಂಕಿರಣದಲ್ಲಿ ರಾಜ್ಯದ 8 ವಿಶ್ವವಿದ್ಯಾಲಯಗಳ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.