ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಪ್ರತಿಯೊಂದು ಕಸುಬಿನ ಮೂಲ ವಿಶ್ವಕರ್ಮ ಸಮುದಾಯ

KannadaprabhaNewsNetwork | Published : Jun 9, 2025 3:14 AM

ಪಂಚ ಕಸುಬುಗಳನ್ನು ಅನುಸರಿಸುವ ಮೂಲಕ ಎಲ್ಲ ವರ್ಗದ ಜನರಿಗೂ ಅಗತ್ಯವಾದ ವಸ್ತುಗಳನ್ನು ತಯಾರಿಸಿ ಕೊಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಅಥಣಿ

ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ. ವಿಶ್ವಕರ್ಮ ಸಮುದಾಯ ಪ್ರತಿಯೊಂದು ಕಸುಬಿನ ಮೂಲ. ಇಂದಿಗೂ ಪಂಚ ಕಸುಬುಗಳನ್ನು ಅನುಸರಿಸುವ ಮೂಲಕ ಎಲ್ಲ ವರ್ಗದ ಜನರಿಗೂ ಅಗತ್ಯವಾದ ವಸ್ತುಗಳನ್ನು ತಯಾರಿಸಿ ಕೊಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ನವಲಗುಂದ ಅಜಾತ ನಾಗಲಿಂಗಮಠದ ವೀರೇಂದ್ರ ಸ್ವಾಮೀಜಿ ನುಡಿದರು.ಪಟ್ಟಣದ ಕಾಳಿಕಾಂಬೆ ದೇವಸ್ಥಾನದ 50ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಳಿಕಾ ದೇವಿ ಮಹಿಮೆ ಅಪಾರವಾದದ್ದು. ದೇವಿಯ ಆಶೀರ್ವಾದ ಪಡೆದ ಕಾಳಿದಾಸ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ತೆನಾಲಿ ರಾಮಕೃಷ್ಣ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ಸಮಾಜದ ಸುಧಾರಣೆ ಶಕ್ತಿಯಾಗಿ ಬೆಳೆದು ಇತಿಹಾಸ ಪುಟದಲ್ಲಿ ದಾಖಲಾಗಿದ್ದಾರೆ. ನಿರ್ಮಲವಾದ ಭಕ್ತಿಗೆ ಕಾಳಿಕಾ ಮಾತೆ ಕೃಪೆ ತೋರಿಸುವ ಮೂಲಕ ಸಂಕಷ್ಟ ಪರಿಹರಿಸುತ್ತಾಳೆ. ಅಥಣಿ ಪಟ್ಟಣದ ಕಾಳಿಕಾಂಬೆ ದೇವಸ್ಥಾನ ಮಾದರಿಯಾಗಿದ್ದು, ಇಂದು ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ನಾವು ನೀವೆಲ್ಲರೂ ಪಾಲ್ಗೊಂಡಿರುವುದೇ ಒಂದು ಸುಯೋಗ ಎಂದರು.ಮರುನಾಳ ಮಠದ ಶ್ರೀ ಜಗನ್ನಾಥ ಸ್ವಾಮೀಜಿ ಮಾತನಾಡಿ, ಚಿನ್ನ, ಬೆಳ್ಳಿ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ಪಂಚ ಲೋಹಗಳ ಕಸುಬುಗಳನ್ನು ಮಾಡುವ ಮೂಲಕ ವಿಶ್ವಕರ್ಮ ಸಮುದಾಯ ಸಮಾಜಕ್ಕೆ ಅಪಾರ ಕೊಡುಗೆ ನೀಡಿದೆ. ದೇವರಿಗೆ ಅಸ್ತ್ರ ಹಾಗೂ ರಥಗಳನ್ನು ಮಾಡಿಕೊಟ್ಟ ವಿಶ್ವಕರ್ಮ ಅವರ ಕೌಶಲ, ತಾಳ್ಮೆ ಇಂದಿನ ಯುವ ಜನರಿಗೆ ಮಾದರಿಯಾಗಬೇಕು. ವಿಶ್ವಕರ್ಮ ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಶೈಕ್ಷಣಿಕವಾಗಿ ಮುಂದೆ ತರಬೇಕು. ಜನಾಂಗದ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಮುದಾಯದ ಮುಖಂಡರು ಶ್ರಮಿಸಬೇಕು ಎಂದರು.

ಅಥಣಿ ಪಟ್ಟಣದ ಕಾಳಿಕಾ ದೇವಸ್ಥಾನ ಒಂದು ಜಾಗೃತ ಸ್ಥಾನವಾಗಿದೆ. ದೇವಸ್ಥಾನ ಪ್ರತಿಷ್ಠಾಪನೆಗೊಂಡು ಇಂದು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಶತಮಾನೋತ್ಸವ ಕಾರ್ಯಕ್ರಮ ಇನ್ನಷ್ಟು ಅದ್ಧೂರಿಯಾಗಿ ನಡೆಯಲಿ ಎಂದು ಹಾರೈಸಿದರು.

ಈ ವೇಳೆ ಮನೋಹರಿ ಬಡಿಗೇರ ಭರತನಾಟ್ಯ ಪ್ರದರ್ಶಿಸಿದಳು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶ್ವಕರ್ಮ ಸಮುದಾಯದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಶಂಕರ ಮಿರಜಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ವಿದ್ಯಾಶಂಕರ ಸ್ವಾಮೀಜಿ, ಸಿದ್ದಯ್ಯ ಸ್ವಾಮೀಜಿ, ವಿಶ್ವನಾಥ ಸ್ವಾಮೀಜಿ, ಅಕ್ಷಯ ಶರ್ಮಾ, ಭೀಮರಾವ್ ಬಡಿಗೇರ, ಚೆನ್ನಪ್ಪ ಬಡಿಗೇರ, ಬರ್ಮು ಬಡಿಗೇರ, ಉಮೇಶ್ ಪತ್ತಾರ, ಪ್ರಭಾಕರ ಪೋತದಾರ, ರವೀಂದ್ರ ಬಡಿಗೇರ, ವೀಣಾ ಬಡಿಗೇರ, ಕುಮಾರ ಬಡಿಗೇರ, ಶಾರದಾ ಬಡಿಗೇರ, ಸುರೇಶ್ ಬಡಿಗೇರ್, ವೀರಭದ್ರ ಬಡಿಗೇರ, ಗಂಗಾಧರ ಕಂಬಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಭೀಮರಾವ್ ಬಡಿಗೇರ ಸ್ವಾಗತಿಸಿದರು, ಪ್ರಭಾಕರ ಪೋತದಾರ ವಂದಿಸಿದರು.