ಲಿಪಿ ನಾಡಿನ ಸಂಸ್ಕೃತಿ, ಪರಂಪರೆಯ ಜೀವಂತ ಸಾಕ್ಷ್ಯ: ಡಾ. ಸಿದ್ದಲಿಂಗಮ್ಮ

KannadaprabhaNewsNetwork |  
Published : Jun 21, 2025, 12:49 AM IST
ಚಿತ್ರ: ೧೯ಎಸ್.ಎನ್.ಡಿ.೦೧- ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿರುವ ಸ್ನಾತಕೋತ್ತರ ಕೇಂದ್ರದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಸಂಡೂರು ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ‘ಕನ್ನಡ ಲಿಪಿ ವಿಕಾಸ: ಮೌರ್ಯರಿಂದ ಮೈಸೂರಿನ ಒಡೆಯರ್‌ ವರೆಗೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಂಡೂರು: ಕನ್ನಡ ಲಿಪಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಲಿಪಿಯು ಕೇವಲ ಬರವಣಿಗೆಯ ಸಾಧನವಷ್ಟೇ ಅಲ್ಲ. ಅದು ನಾಡಿನ ಸಂಸ್ಕೃತಿ, ಪರಂಪರೆ, ಧಾರ್ಮಿಕತೆ ಹಾಗೂ ಆಡಳಿತವನ್ನು ಪೂರೈಸಿದ ಜೀವಂತ ಸಾಕ್ಷ್ಯವಾಗಿದೆ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸಿದ್ದಲಿಂಗಮ್ಮ ಬಿ.ಜಿ. ಹೇಳಿದರು.

ತಾಲೂಕಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಕೇಂದ್ರದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ನಂದಿಹಳ್ಳಿ ಅಲ್ಯುಮಿನಿ ಅಸೋಸಿಯೇಷನ್ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ‘ಕನ್ನಡ ಲಿಪಿ ವಿಕಾಸ: ಮೌರ್ಯರಿಂದ ಮೈಸೂರಿನ ಒಡೆಯರ್‌ವರೆಗೆ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕನ್ನಡವು ಬ್ರಾಹ್ಮಿ ಲಿಪಿಯಿಂದ ವಿಕಾಸಗೊಂಡರೂ, ಕಾಲಕ್ರಮೇಣ ತನ್ನದೇ ಆದ ಸ್ವತಂತ್ರ ಶೈಲಿ, ಅಕ್ಷರರೂಪ ಹಾಗೂ ವ್ಯಾಕರಣದ ಗುಣಲಕ್ಷಣ ಅಳವಡಿಸಿಕೊಂಡು, ಒಂದು ವಿಶಿಷ್ಟ ಲಿಪಿಯಾಗಿ ರೂಪಗೊಂಡಿದೆ. ಮೌರ್ಯರ ಕಾಲದಿಂದಲೇ ಕನ್ನಡ ಭಾಷೆಯ ಅಸ್ತಿತ್ವ ಕಂಡು ಬರುತ್ತದೆ. ಆದರೆ, ಲಿಪಿಯ ರೂಪದಲ್ಲಿನ ಪ್ರಥಮ ದಾಖಲೆಗಳು ಐದನೇ ಶತಮಾನದಿಂದಲೇ ಲಭ್ಯವಿವೆ. ಕದಂಬರು, ಗಂಗರು, ಚಾಲುಕ್ಯರು ಮೊದಲಾದ ರಾಜ್ಯವ್ಯವಸ್ಥೆಗಳು ಕನ್ನಡ ಲಿಪಿಯನ್ನು ಆಡಳಿತ ಭಾಷೆಯನ್ನಾಗಿ ಬಳಸಿದ್ದು, ಅದರಿಂದ ಲಿಪಿಯ ಬಳಕೆ ಮತ್ತಷ್ಟು ವ್ಯವಸ್ಥಿತವಾಗಿ ವೃದ್ಧಿಯಾಯಿತು ಎಂದರು.

ಕೇಂದ್ರದ ಖನಿಜ ಸಂಸ್ಕರಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಶಶಿಧರ ಮಾತನಾಡಿ, ಕುಮುದೇಂದು ಮುನಿಯ ಸಿರಿಭೂವಲಯ ಕೃತಿಯಲ್ಲಿ ಅಕ್ಷರಗಳನ್ನು ಅಂಕಿಗಳ ರೂಪದಲ್ಲಿ ಬರೆಯುವ ಕೋಡಿಂಗ್-ಡೀಕೋಡಿಂಗ್ ಪದ್ಧತಿ ಬಳಸಲಾಗಿದೆ. ಇದು ಕನ್ನಡ ಭಾಷೆಯ ಹೆಗ್ಗಳಿಕೆ. ಭಾಷೆಯ ಇತಿಹಾಸವೆಂದರೆ ಜನರ ಜಾನಪದವೂ, ಸಂಸ್ಕೃತಿಯ ಸಾರವೂ ಆಗಿದೆ ಎಂದರು.

ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಸಂಯೋಜಕ ಡಾ. ನಾಯಕರ ಹೊನ್ನೂರ್‌ಸ್ವಾಮಿ ತಮ್ಮ ಮಾತುಗಳಲ್ಲಿ ಲಿಪಿಯ ಚರಿತ್ರೆಯನ್ನು ಹೊಸ ದೃಷ್ಟಿಕೋನದಲ್ಲಿ ಪರಿಶೀಲಿಸುವ ಅಗತ್ಯತೆ ಉಲ್ಲೇಖಿಸಿದರು.

ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ರವಿ ಬಿ. ಅಧ್ಯಕ್ಷತೆ ವಹಿಸಿದ್ದರು. ಡಾ. ಸಿದ್ದಲಿಂಗಮ್ಮ ಬಿಜಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಇತಿಹಾಸ ವಿಭಾಗದ ಉಪನ್ಯಾಸಕರಾದ ಡಾ. ನರಸಿಂಹಮೂರ್ತಿ ಟಿ.ಎನ್., ಡಾ. ವಿರೂಪಾಕ್ಷಪ್ಪ ಎಂ., ರಮೇಶ ರಾಯಚೂರ್ ಹಾಗೂ ಕೇಂದ್ರದ ಕ್ರೀಡಾ ನಿರ್ದೇಶಕ ಶಿವರಾಮ ರಾಗಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

ದೇಶ ಉಳಿಸಲು 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕಿದೆ : ಡಿಕೆಶಿ
ಧಾರವಾಡ-ಬೆಂಗಳೂರು ವಂದೇ ಭಾರತ್‌ 100% ಮುಂಗಡ ಬುಕ್ಕಿಂಗ್‌