ಕೃಷಿ ಸಹಕಾರಿ ಸಂಸ್ಥೆಯ ನಿಸ್ವಾರ್ಥ ಸೇವೆ ಶ್ಲಾಘನೀಯ

KannadaprabhaNewsNetwork | Published : Sep 20, 2024 1:48 AM

ಸಾರಾಂಶ

ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಸಹಕಾರ ಸಂಘಗಳು ಮಾಡುತ್ತಿರುವ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ.

ಕಂಪ್ಲಿ: ತಾಲೂಕಿನ ಶ್ರೀರಾಮರಂಗಾಪುರ (ಕೊಟ್ಬಾಲ್) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಜನ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಶ್ರೀರಾಮುಲು ಮಾತನಾಡಿ, ಸಹಕಾರ ಸಂಘಗಳ ಮೂಲಕ ಸದಸ್ಯರು ತಾವು ಪಡೆದ ಸಾಲವನ್ನು ಸಮರ್ಪಕವಾಗಿ ಸಕಾಲದಲ್ಲಿ ಮರುಪಾವತಿ ಮಾಡಿದಲ್ಲಿ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ. ಎಲ್ಲ ಸಮಾಜದ ಬಡ, ಮಧ್ಯಮ ವರ್ಗದವರಿಗೆ ಸರಳ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಸಹಕಾರ ಸಂಘಗಳು ಮಾಡುತ್ತಿರುವ ನಿಸ್ವಾರ್ಥ ಸೇವೆ ನಿಜಕ್ಕೂ ಶ್ಲಾಘನೀಯ. ರೈತರನ್ನು ಆರ್ಥಿಕವಾಗೆ ಸಬಲರನ್ನಾಗಿಸುವುದು ಮತ್ತು ಅವರ ಏಳಿಗೆಗೆ ಶ್ರಮಿಸುವುದು ಸಹಕಾರ ಸಂಘಗಳ ಮೂಲ ಉದ್ದೇಶ ಸಂಘದ ಅಭಿವೃದ್ಧಿಗೆ ಸಿಬ್ಬಂದಿಗಳ ಪರಿಶ್ರಮ ಅತ್ಯಗತ್ಯ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಎಸ್.ರಮೇಶ 2022-23 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಮಾತನಾಡಿ, ಸಂಘವು 3602 ಸದಸ್ಯರನ್ನು ಹೊಂದಿದ್ದು, ಸುಮಾರು 91 ಲಕ್ಷ 50ಸಾವಿರದ 338ರೂ ಶೇರು ಬಂಡವಾಳ ಹೊಂದಿದೆ. ಸಂಘವು 2023-24 ರಲ್ಲಿ ₹3.75 ಲಕ್ಷ ನಿವ್ವಳ ಲಾಭ ಗಳಿಸಿದೆ. ರೈತರಿಗೆ ಕೆಸಿಸಿ ಸಾಲ, ಸ್ವಸಹಾಯ ಗುಂಪುಗಳಿಗೆ ಸಾಲ ಹೀಗೆ ವಿವಿಧ ಹಂತದ ಸಾಲಗಳನ್ನು ವಿತರಿಸಲಾಗಿದೆ. ಸಹಕಾರ ಅಭಿವೃದ್ಧಿಗೆ ರೈತರ ಹಾಗೂ ಸಂಘದ ಜನರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.ಸಭೆಯಲ್ಲಿ ಉಪಾಧ್ಯಕ್ಷ ಆರ್.ರಮೇಶ್ ನಾಯುಡು, ನಿರ್ದೆಶಕರಾದ ಟಿ.ಅಮೃತಾ, ಟಿ.ಪ್ರಭಾಕರ, ಬಿ.ತೇಜಸ್ಸು ನಾಯ್ಡು, ಪಿ.ಅಲ್ಲಿಸಾಬ್, ಬಿ.ದೊಡ್ಡಪ್ಪ, ವದ್ದಿಗೇರಿ ಶಿದ್ದಪ್ಪ, ಮಾರುತಿ ಪ್ರಸಾದ್, ಎಂ.ಶ್ರೀನಾಥ, ಬಿ.ಚಿನ್ನಹನು ಮಂತು, ಪಿ.ಚಂದ್ರಕಲಾ, ವಿ.ಗಾಳೆಮ್ಮ, ಸಿಬ್ಬಂದಿ ಜೆ.ಎಂ. ಶಿವಶಂಕರ್, ಎಂ.ಪುರುಷೋತ್ತಮ, ಟಿ.ವಿಶ್ವೇಶ್ವರಯ್ಯ, ಬಿ.ಗೋವಿಂದ ಹಾಗೂ ರೈತ ಮುಖಂಡರು ಸೇರಿದಂತೆ ಅನೇಕರಿದ್ದರು.

Share this article