ಗದಗ: ೧೯ನೇ ಶತಮಾನದ ಪೂರ್ವಾರ್ಧದಲ್ಲಿ ಸಮಾಜ ಅಜ್ಞಾನ, ಬಡತನ, ದಾರಿದ್ರ್ಯದಿಂದ ತುಂಬಿತ್ತು. ಸಮಾಜದಲ್ಲಿ ಬೇರೂರಿರುವ ಅಂಧ ಶ್ರದ್ಧೆ, ಮೂಢನಂಬಿಕೆಗಳನ್ನು ನಿವಾರಿಸುವಲ್ಲಿ ಫುಲೆ ದಂಪತಿ ಮಾಡಿದಂತಹ ಸೇವೆ ಇಂದಿಗೂ ಅವಿಸ್ಮರಣೀವಾದುದು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಉಪನ್ಯಾಸಕಿ ಪ್ರಿಯಾಂಕಾ ನಡುವಿನಮನಿ ಮಾತನಾಡಿ, ಸಾವಿತ್ರಿಬಾಯಿ ಫುಲೆಯವರು ಅತ್ಯಂತ ಚಿಕ್ಕವಯಸ್ಸಿನಲ್ಲಿ ಶಿಕ್ಷಣ ಪ್ರೇಮಿಯಾಗಿದ್ದರು. ಇಂದು ಶಿಕ್ಷಣ ಮತ್ತು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಮಾನ ಹಕ್ಕು ಪಡೆಯಲು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರೇ ಕಾರಣ ಎಂದರು.
ಈ ವೇಳೆ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಿಸಲಾಯಿತು. ಬೋಜರಾಜ ಸೊಪ್ಪಿಮಠ ಅವರು ರಚಿಸಿದ ಬಾ....ನಲ್ಲೆ ಹನಿ ಗವನಗಳ ಸಂಕಲನ ಪುಸ್ತಕ ಲೋಕಾರ್ಪಣೆ ಜರುಗಿತು.ಶಾಂತಲಾ ಕಾಮತ ಅವರಿಂದ ನಡೆದ ಕೊಳಲು ವಾದನಕ್ಕೆ ಗುರುನಾಥ ಸುತಾರ ತಬಲಾ ಸಾಥ್ ನೀಡಿದರು. ಶಿವಾನುಭವ ಭಕ್ತಿಸೇವೆಯನ್ನು ವಹಿಸಿದ ಯೋಗಾಚಾರ್ಯ ಸಂಗಮೇಶ ಕೆ. ಮೇಲ್ಮುರಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರೂಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.