ಯಾಲಕ್ಕಿ ನಗರಿ ಹಾವೇರಿಯಲ್ಲಿ ಪಸರಿಸಿದ ಆಧ್ಯಾತ್ಮಿಕತೆ ಕಂಪು

KannadaprabhaNewsNetwork |  
Published : Dec 20, 2025, 02:15 AM IST
19ಎಚ್‌ವಿಆರ್‌1- | Kannada Prabha

ಸಾರಾಂಶ

ವರ್ಷಾಂತ್ಯ ಬಂತೆಂದರೆ ಪಾಶ್ಚಿಮಾತ್ಯರ ಅನುಕರಣೆ ಎಲ್ಲೆ ಮೀರುವ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ, ಹಾವೇರಿಯಲ್ಲಿ ಕಳೆದ ಕೆಲವು ದಿನಗಳಿಂದ ಆಧ್ಯಾತ್ಮಿಕತೆಯ ಕಂಪು ಪಸರಿಸಿದೆ. ಪ್ರವಚನ, ಧರ್ಮಸಭೆ, ಧಾರ್ಮಿಕ ಕಾರ್ಯಕ್ರಗಳಿಂದ ಯಾಲಕ್ಕಿ ಕಂಪಿನ ನಗರ ಕಳೆ ಕಟ್ಟಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ವರ್ಷಾಂತ್ಯ ಬಂತೆಂದರೆ ಪಾಶ್ಚಿಮಾತ್ಯರ ಅನುಕರಣೆ ಎಲ್ಲೆ ಮೀರುವ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ, ಹಾವೇರಿಯಲ್ಲಿ ಕಳೆದ ಕೆಲವು ದಿನಗಳಿಂದ ಆಧ್ಯಾತ್ಮಿಕತೆಯ ಕಂಪು ಪಸರಿಸಿದೆ. ಪ್ರವಚನ, ಧರ್ಮಸಭೆ, ಧಾರ್ಮಿಕ ಕಾರ್ಯಕ್ರಗಳಿಂದ ಯಾಲಕ್ಕಿ ಕಂಪಿನ ನಗರ ಕಳೆ ಕಟ್ಟಿದೆ.

ಮರಿ ಕಲ್ಯಾಣ ಖ್ಯಾತಿಯ ಹಾವೇರಿ ನಗರದಲ್ಲಿ ಈಗ ಎಲ್ಲಿ ನೋಡಿದರೂ ಅಧ್ಯಾತ್ಮ ಗುರುಗಳು, ಪ್ರವಚನಕಾರರು, ಧರ್ಮ ಗುರುಗಳ ಬ್ಯಾನರ್‌, ಕಟೌಟ್‌ಗಳು ರಾರಾಜಿಸುತ್ತಿವೆ. ಅದರಲ್ಲೂ ಹುಕ್ಕೇರಿ ಮಠದ ಲಿಂ.ಶಿವಬಸವ ಮತ್ತು ಶಿವಲಿಂಗ ಶ್ರೀಗಳ ಪುಣ್ಯ ಸ್ಮರಣೋತ್ಸವದ ನಿಮಿತ್ತ ಹಮ್ಮಿಕೊಂಡಿರುವ ಜಾತ್ರೆ, ಮಠದ ಶಿವಲಿಂಗೇಶ್ವರ ವಿದ್ಯಾಪೀಠದ ಸುವರ್ಣ ಮಹೋತ್ಸವ, ಕೃಷಿ ಮೇಳ, ಜಾನುವಾರು ಜಾತ್ರೆ, ಗುರುವಂತನ, ವಚನ ವಂದನ, ವಿದ್ಯಾರ್ಥಿ ವಸತಿ ನಿಲಯದ ಶಂಕುಸ್ಥಾಪನೆ, ಮಠದ ಪೀಠಾಧ್ಯಕ್ಷರಾದ ಸದಾಶಿವ ಶ್ರೀಗಳ 15ನೇ ವರ್ಷದ ಪಟ್ಟಾಧಿಕಾರದ ನೆನಪಿಗಾಗಿ ಬೆಳ್ಳಿ ತುಲಾಭಾರದ ನಿಮಿತ್ತ ಕಳೆದ 10 ದಿನಗಳಿಂದ ನಡೆಯುತ್ತಿರುವ ಆಧ್ಯಾತ್ಮಿಕ ಪ್ರವಚನ ಸೇರಿದಂತೆ ಹುಕ್ಕೇರಿಮಠದ ಕಾರ್ಯಕ್ರಮಗಳು ಗಮನ ಸೆಳೆದಿವೆ.

ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಗಳು ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲು ತಾಲೂಕಿನಾದ್ಯಂತ ಪಾದಯಾತ್ರೆ ಕೈಗೊಂಡಿದ್ದು, ಸದ್ಯ ನಗರದಲ್ಲಿ ನಿತ್ಯವೂ ಶ್ರೀಗಳಿಂದ ಪಾದಯಾತ್ರೆ ನಡೆಯುತ್ತಿದೆ. ಜಾತ್ರಾ ಮಹೋತ್ಸವದ ನಿಮಿತ್ತ ನಿತ್ಯ ನಡೆದಿರುವ ಶೇಗುಣಸಿ ವಿರಕ್ತ ಮಠದ ಡಾ. ಮಹಾಂತ ಪ್ರಭು ಸ್ವಾಮೀಜಿಗಳ ಆಧ್ಯಾತ್ಮಿಕ ಪ್ರವಚನ ಜನರನ್ನು ಆಕರ್ಷಿಸುತ್ತಿದೆ. ಡಿ.9 ರಿಂದ ನಡೆದಿರುವ ಪ್ರವಚನ ಡಿ.30ಕ್ಕೆ ಸಂಪನ್ನಗೊಳ್ಳಲಿದೆ. ಡಿ.25ರಿಂದ 29ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿ.30ರಂದು ಜಾತ್ರಾ ಮಹೋತ್ಸವ ನಡೆಯಲಿದೆ. ಈ ನಿಮಿತ್ತ ಮಠದ ಭಕ್ತಾಧಿಗಳು, ಸಂಘಟನೆಗಳು, ಜನಪ್ರತಿನಿಧಿಗಳು ಮಠದ ಜಾತ್ರೆಗೆ ಸ್ವಾಗತ ಕೋರುವ ಬ್ಯಾನರ್‌ಗಳು ನಗರದೆಲ್ಲೆಡೆ ರಾಜಾಜಿಸುತ್ತಿವೆ.

ಜೈನ ಸಮ್ಮೇಳನ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜೈನ ಸಮಾಜದ ವತಿಯಿಂದ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವವನ್ನು ನಗರದ ರಜನಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಮುನಿಶ್ರೀ ವಿದಿತ ಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಡಿ.12 ರಿಂದ 21ರವರೆಗೆ ಒಟ್ಟು 9 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆರಾಧನೆಯ 9 ದಿನಗಳ ಕಾಲ ಅಕ್ಕಿ, ಲವಂಗ, ಕೊಬ್ಬರಿ ಸೇರಿದಂತೆ ಅಷ್ಟ ದೃವ್ಯಗಳನ್ನು ಹೊಂದಿರುವ ಒಟ್ಟು 2048 ಅರ್ಘ್ಯಗಳ ಸಮರ್ಪಣೆ ವಿಶೇಷವಾಗಿದೆ. ಇಂದ್ರ, ಇಂದ್ರಾಣಿಯರ ಮೆರವಣಿಗೆ, ಬೃಹತ್ ಸಿದ್ಧಚಕ್ರ ವಿಧಾನ ಪೂಜೆ, ಪಿಂಛಿ ಪರಿವರ್ತನಾ ಕಾರ್ಯಕ್ರಮ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು, ಜೈನ ಸಾಹಿತಿಗಳ ಸಮ್ಮೇಳನ, ಜೈನ ಯುವ ಸಮ್ಮೇಳನ ನಡೆಯುತ್ತಿವೆ. ಪ್ರತಿ ನಿತ್ಯ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಜನ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಸುನ್ನಿ ಇಮ್ತಿಜಾ ಧರ್ಮಸಭೆ: ಮುಸ್ಲಿಂ ಸಮುದಾಯದಿಂದ ಡಿ.20ರಿಂದ ಎರಡು ದಿನಗಳ ಕಾಲ ನಗರದಲ್ಲಿ ಸುನ್ನಿ ತರಬೇತಿ ಇಮ್ತಿಜಾ ಧರ್ಮಸಭೆ ಮತ್ತು ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸುಮಾರು 25 ವರ್ಷಗಳ ತರುವಾಯ ಈ ಭಾಗದಲ್ಲಿ ರಾಷ್ಟ್ರಮಟ್ಟದ ಈ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ. ಈ ನಿಮಿತ್ತ ನಗರದ ಹೊರವಲಯದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ಮುಸ್ಲಿಂ ಧರ್ಮ ಗುರುಗಳು ಭಾಗವಹಿಸಲಿದ್ದು, ರಾಜ್ಯದ ವಿವಿಧೆಡೆಯಿಂದ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯನ್ನು ಸಂಘಟಕರು ಹೊಂದಿದ್ದಾರೆ.

ಯುವ ಜನತೆಯನ್ನು ಕಾಡುತ್ತಿರುವ ದುಶ್ಚಟಗಳನ್ನು ಹೋಗಲಾಡಿಸುವುದು, ಅವರನ್ನು ಸನ್ಮಾರ್ಗದ ಕಡೆಗೆ ಕರೆದೊಯ್ಯುವುದಕ್ಕಾಗಿ ದುಶ್ಚಟಗಳ ಭಿಕ್ಷೆಗಾಗಿ ಜೋಳಿಗೆ ಹಿಡಿದು ತಾಲೂಕಿನಾದ್ಯಂತ ಪಾದಯಾತ್ರೆ ನಡೆಸಲಾಗಿದೆ. ವಿದ್ಯಾಪೀಠದ ಸುವರ್ಣ ಸಂಭ್ರಮ, ಲಿಂಗೈಕ್ಯ ಶ್ರೀಗಳ ಜಾತ್ರಾ ಮಹೋತ್ಸವವನ್ನು ಈ ಸಲ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಅದಕ್ಕಾಗಿ ಶ್ರೀಮಠದಿಂದ ಎಲ್ಲ ತಯಾರಿ ನಡೆಸಲಾಗಿದೆ. ಜನಪ್ರತಿನಿಧಿಗಳು, ಹಲವು ಮಠಾಧೀಶರು, ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಜೈನ ಧರ್ಮದ ಆಚರಣೆಗಳಲ್ಲಿ ಸಿದ್ಧಚಕ್ರ ಆರಾಧನೆ ಶ್ರೇಷ್ಠವಾಗಿದೆ. ಲೋಕಕಲ್ಯಾಣಾರ್ಥವಾಗಿ, ಸಕಲ ಜೀವರಾಶಿಗಳ ಸುಖ-ಶಾಂತಿಗೆ ಈ ಆರಾಧನೆ ಕೈಗೊಳ್ಳಲಾಗಿದೆ. ನಗರದಲ್ಲಿ ಬೃಹತ್ ಸಿದ್ಧಚಕ್ರ ಆರಾಧನೆ ಮಾಡುವುದು ಇಲ್ಲಿಯ ಶ್ರಾವಕ ಮತ್ತು ಶ್ರಾವಕಿಯರ ಬಹುದಿನಗಳ ಸಂಕಲ್ಪವಾಗಿತ್ತು. ಯೋಗಾಯೋಗದಿಂದ ಅದು ಈಗ ನೆರವೇರುತ್ತಿದೆ ಮುನಿಶ್ರೀ ವಿದಿತ ಸಾಗರ ಮಹಾರಾಜರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಬುದ್ಧ ಭಾರತ ನಿರ್ಮಾಣ ಕನಸು ಕಂಡವರು ಅಂಬೇಡ್ಕರ್‌: ಪ್ರೊ. ವಿಶ್ವನಾಥ
ಅಕ್ಷಯ ಪಾತ್ರೆಗೆ ಆಧುನಿಕ ತಂತ್ರಜ್ಞಾನದ ಯಂತ್ರ