ಯಡಿಯೂರಪ್ಪ ಸಿಎಂ ಆಗಿದ್ದರಿಂದಲೇ ರಾಜ್ಯ ಅಭಿವೃದ್ಧಿಗೆ ವೇಗ: ರೇಣು

KannadaprabhaNewsNetwork |  
Published : Apr 27, 2026, 02:00 AM IST
ಹೊನ್ನಾಳಿ 25ಎಚ್ಎಲ್,ಐ1. ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯುವ ಬಿಎಸ್‌ವೈ ಅಭಿಮಾನೋತ್ಸವದ ಹಿನ್ನಲೆಯಲ್ಲಿ ಹೊನ್ನಾಳಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆಯೇ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದ್ದು, ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ನೋಡಿದ್ದೇ ಅವರ ಅಧಿಕಾರಾವಧಿಯಲ್ಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

- ಚಿತ್ರದುರ್ಗದಲ್ಲಿ ಮೇ 9ರಂದು ಬಿಎಸ್‌ವೈ ಅಭಿಮಾನೋತ್ಸವ । ಹೊನ್ನಾಳಿಯಲ್ಲಿ ಪೂರ್ವಭಾವಿ ಸಭೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆಯೇ ರಾಜ್ಯದಲ್ಲಿ ಅಭಿವೃದ್ಧಿಗೆ ವೇಗ ಸಿಕ್ಕಿದ್ದು, ಅಭಿವೃದ್ಧಿಗೆ ಕೋಟಿ ಕೋಟಿ ಅನುದಾನ ನೋಡಿದ್ದೇ ಅವರ ಅಧಿಕಾರಾವಧಿಯಲ್ಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನಕ್ಕೆ 50 ವರ್ಷ ತುಂಬಿದ ಹಿನ್ನೆಲೆ ಚಿತ್ರದುರ್ಗದಲ್ಲಿ ಮೇ 9ರಂದು ನಡೆಯುವ ಬಿ.ಎಸ್‌.ವೈ. ಅಭಿಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಹೊನ್ನಾಳಿ ಪಟ್ಟಣದಲ್ಲಿ ಮುಖಂಡರು, ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಆಡಳಿತ ಪಕ್ಷ ಅಥವಾ ವಿಪಕ್ಷ ಎನ್ನದೇ ಎಲ್ಲರಿಗೂ ಅಭಿವೃದ್ಧಿಗೆ ಹಣ ನೀಡಿ ರಾಜ್ಯದ ಅಭಿವೃದ್ಧಿಗೆ ಸಾಥ್ ನೀಡಿದ ಏಕೈಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಇಂತಹ ಮುಖ್ಯಮಂತ್ರಿ ಜತೆ ಸಹ ಮಂತ್ರಿಯಾಗಿ ಕೆಲಸ ಮಾಡಿದ್ದು ನನ್ನ ಸೌಭಾಗ್ಯ. ಅವರ ಸ್ವಕ್ಷೇತ್ರ ಶಿಕಾರಿಪುರಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರೋ, ನಮ್ಮ ಕ್ಷೇತ್ರ ಹೊನ್ನಾಳಿ ಕ್ಷೇತ್ರ ಅಭಿವೃದ್ಧಿಗೂ ಅಷ್ಟೇ ಅನುದಾನ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಶಿಕಾರಿಪುರದಲ್ಲಿ ತಮ್ಮ ರಾಜಕೀಯ ಚಟುವಟಿಕೆ ಆರಂಭಿಸಿದ ಬಿಎಸ್‌ವೈ ಅವರು ಪ್ರಾರಂಭದಲ್ಲಿ ಆರ್‌ಎಸ್‌ಎಸ್‌ನ ತಾಲೂಕು ಕಾರ್ಯವಾಹರಾಗಿ, ನಂತರ ಪುರಸಭೆ ಅಧ್ಯಕ್ಷ, ಶಾಸಕ, ವಿಪಕ್ಷ ನಾಯಕ, ಸಂಸದರಾಗಿ ದುಡಿದಿದ್ದಾರೆ. ಅದಕ್ಕೂ ಪೂರ್ವದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ರಾಜ್ಯಾಧ್ಯಕ್ಷರಾಗಿ, ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಸಾಲ ಮನ್ನಾ, ಬಗರ್‌ಹುಕುಂ ಹೋರಾಟ ಹಾಗೂ ಪಾದಯಾತ್ರೆಗಳು ಇವರ ನೇತೃತ್ವದಲ್ಲಿ ಸಾಮಾನ್ಯವಾಗಿತ್ತು. ವಿಧಾನಸೌಧದಲ್ಲಿ ರೈತರ ಪರವಾಗಿ ಮಾತನಾಡಲು ಎದ್ದು ನಿಂತರೆ ಸಾಕು ವಿಧಾನಸೌಧವೇ ನಡುಗುತಿತ್ತು ಎಂದು ಇಂದಿಗೂ ವಿಪಕ್ಷದವರೇ ಮಾತನಾಡುತ್ತಾರೆ ಎಂದು ಹೇಳಿದರು.

10 ಲಕ್ಷ ಅಭಿಮಾನಿಗಳು ಬರುವ ನಿರೀಕ್ಷೆ:

ಮೇ 9ರಂದು ಚಿತ್ರದುರ್ಗದಲ್ಲಿ ನಡೆಯುವ ಬಿಎಸ್‌ವೈ ಅಭಿಮಾನೋತ್ಸವಕ್ಕೆ ಇಡೀ ರಾಜ್ಯದಿಂದ 10 ಲಕ್ಷಕ್ಕೂ ಹೆಚ್ಚು ಜನ ಆಗಮಿಸಲಿದ್ದಾರೆ. ಹೊನ್ನಾಳಿ, ನ್ಯಾಮತಿ ತಾಲೂಕಿನಿಂದಲೇ 10 ಸಾವಿರ ಕಾರ್ಯಕರ್ತರು ಚಿತ್ರದುರ್ಗದಲ್ಲಿ ನಡೆಯುವ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಲೋಗೋ ಬಿಡುಗಡೆ:

ಇದೇ ಸಂದರ್ಭದಲ್ಲಿ ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮದ ಲೋಗೋವನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ಬಿಜೆಪಿ ಮುಖಂಡರು ಬಿಡುಗಡೆ ಮಾಡಿದರು. ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ನಿಕಟಪೂರ್ವ ಅಧ್ಯಕ್ಷರಾದ ಸುರೇಶ್,ಜೆ.ಕೆ. ಕುಬೇರಪ್ಪ, ಎಂ.ಎಸ್. ಪಾಲಾಕ್ಷಪ್ಪ ಮಾತನಾಡಿದರು. ದೊಡ್ಡೇರಿ ರಾಜಣ್ಣ, ಮಂಜುನಾಥ್ ನೆಲಹೊನ್ನೆ, ಕುಳಗಟ್ಟೆ ರಂಗನಾಥ್, ಮಾರುತಿ ನಾಯ್ಕ್, ಎಸ್.ಎಸ್. ಬೀರಪ್ಪ, ಬಾಬು ಹೋಬಳದಾರ್, ನ್ಯಾಮತಿ ರವಿಕುಮಾರ್, ನಾಗರಾಜ್ ಮಾದೇನಹಳ್ಳಿ, ಶಿವು ಹುಡೇದ್ ಇತರರು ಇದ್ದರು.

- - -

(ಕೋಟ್‌) ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡರ ಸಿದ್ಧಾಂತವೇ ಬೇರೆ, ನಮ್ಮ ಪಕ್ಷದ ಸಿದ್ಧಾಂತವೇ ಬೇರೆ. ವೇದಿಕೆಯಲ್ಲಿದ್ದಾಗ ಮಾತನಾಡುತ್ತೇವೆ. ಆದರೆ ಚುನಾವಣೆ ಅಥವಾ ಪಕ್ಷದ ವಿಚಾರ ಎಂದು ಬಂದಾಗ ನಮ್ಮಿಬ್ಬರ ದಾರಿಯೇ ಬೇರೆ ಬೇರೆ. ನಮ್ಮ ಬಿಜೆಪಿ ಕಾರ್ಯಕರ್ತರೇ ನಮಗೆ ಆಸ್ತಿ.

- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ, ಬಿಜೆಪಿ ಮುಖಂಡ.

- - -

-25ಎಚ್ಎಲ್,ಐ1:

ಬಿಎಸ್‌ವೈ ಅಭಿಮಾನೋತ್ಸವ ಪೂರ್ವಭಾವಿ ಸಭೆಯಲ್ಲಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲಾತಿಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ದೊಡ್ಡ ಅನ್ಯಾಯ-ರಾಜುಗೌಡ
ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಾಮರಸ್ಯ ಉತ್ತೇಜಿಸುತ್ತವೆ-ಶಾಸಕ ಬಣಕಾರ