ಝೂನಲ್ಲಿರುವ ಪ್ರಾಣಿಗಳಿಗೂ ಬಂತು ಫ್ಯಾನ್, ಕೂಲರ್!

KannadaprabhaNewsNetwork |  
Published : Apr 27, 2026, 02:00 AM IST
Zoo

ಸಾರಾಂಶ

ಬಿಸಿಲ ತಾಪದಿಂದ ರಕ್ಷಿಸಲು ಮಂಗಳೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಜೈವಿನ ಉದ್ಯಾನದಲ್ಲಿ (ಝೂ) ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಫ್ಯಾನ್, ಕೂಲರ್, ಸ್ಪ್ರಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ.

ದಯಾನಂದ ಕಲ್ನಾರ್‌

  ಮಂಗಳೂರು :  ರಾಜ್ಯದಲ್ಲಿ ಬೇಸಿಗೆಯ ಬಿಸಿಲ ತಾಪ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಮಾನವರ ಜೊತೆಗೆ ಪ್ರಾಣಿ-ಪಕ್ಷಿಗಳು ಕೂಡ ಬಿಸಿಲ ತಾಪದಿಂದ ತತ್ತರಿಸುತ್ತಿವೆ. ಹೀಗಾಗಿ, ಬಿಸಿಲ ತಾಪದಿಂದ ರಕ್ಷಿಸಲು ಮಂಗಳೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಜೈವಿನ ಉದ್ಯಾನದಲ್ಲಿ (ಝೂ) ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಫ್ಯಾನ್, ಕೂಲರ್, ಸ್ಪ್ರಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ.

ಇಲ್ಲಿ ಬಿಸಿಲ ತಾಪಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಿಲುಕುವ ಪ್ರಾಣಿ-ಪಕ್ಷಿಗಳಿಗೆ ಆದ್ಯತೆ ನೀಡಲಾಗಿದೆ. ಪ್ರಾಣಿ-ಪಕ್ಷಿಗಳಿಗೆ ಸಮರ್ಪಕ ಕುಡಿಯುವ ನೀರು ಪೊರೈಕೆ, ಗೂಡಿನಲ್ಲಿ ಫ್ಯಾನ್ ಅಳವಡಿಕೆ, ಗೂಡಿನ ಮೇಲ್ಛಾವಣಿ ಮೂಲಕ ಗೂಡು ತಂಪಾಗಿರುವಂತೆ ಮಾಡಲು ಮೇಲ್ಛಾವಣಿಗೆ ಸ್ಲಿಂಕ್ಲರ್ ಮೂಲಕ ನೀರು ಹಾಯಿಸುವ ವ್ಯವಸ್ಥೆ ಮಾಡಲಾಗಿದೆ. ಝೂನ ಪ್ರಾಣಿಗಳ ಓಡಾಟದ ಪ್ರದೇಶಗಳಲ್ಲಿ ಅಲ್ಲಲ್ಲಿ ನೀರಿನ ತೊಟ್ಟಿ ನಿರ್ಮಿಸಿ, ಅದರಲ್ಲಿ ನೀರು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಪ್ರಾಣಿಗಳು ಮಿಂದು ಬೇಸಿಗೆಯ ಬಿಸಿಲಿನಿಂದ ತಮ್ಮನ್ನು ತಂಪಾಗಿಸಿಕೊಳ್ಳುತ್ತಿವೆ.

ಪಿಲಿಕುಳ ಝೂ, ಅರಣ್ಯ ಪ್ರದೇಶದಲ್ಲಿ ಬಿಸಿಲಿನ ತೀವ್ರತೆ ಇಲ್ಲ

ಪಿಲಿಕುಳ ಝೂ, ಅರಣ್ಯ ಪ್ರದೇಶದಲ್ಲಿಯೇ ಇರುವುದರಿಂದ ಇಲ್ಲಿ ಹೆಚ್ಚಿನ ಪ್ರಮಾಣದ ಬಿಸಿಲಿನ ತೀವ್ರತೆ ಇಲ್ಲ. ಆದರೂ ಪೂರಕ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೈಮೇಲೆ ಹೆಚ್ಚಿನ ಕೂದಲು ಇರುವ ಪ್ರಾಣಿಗಳ ಹೊರತು ಕೆಲವು ಪ್ರಾಣಿಗಳ ಮೈಗೆ, ಗೂಡಿಗೆ ಪೈಪ್ ಮೂಲಕ ನೀರು ಹಾಕುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೆ, ಬೇಸಿಗೆಯಲ್ಲಿ ಪ್ರಾಣಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲೂ ನಿಗಾ ವಹಿಸಲಾಗುತ್ತಿದೆ. ಬೇಸಿಗೆಯ ಬಿಸಿಯ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಸುಮಾರು 82 ಹೆಕ್ಟೇರ್ ವ್ಯಾಪ್ತಿಯಲ್ಲಿ ವಿಸ್ತಾರಗೊಂಡಿರುವ ಪಿಲಿಕುಳ ಉದ್ಯಾನ, ಭಾರತದ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ‘ಮೇಜರ್ ಝೂ’ ಎಂದು ಮಾನ್ಯತೆ ಪಡೆದುಕೊಂಡಿದೆ. ಪ್ರಾಣಿಗಳ ನೈಸರ್ಗಿಕ ವಾಸಸ್ಥಾನವನ್ನು ಹೋಲುವಂತೆ ಉದ್ಯಾನದ ಆವರಣಗಳನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ 900ಕ್ಕೂ ಹೆಚ್ಚು ಪ್ರಾಣಿಗಳು, ಹಾವುಗಳು ಮತ್ತು ಪಕ್ಷಿಗಳು ವಾಸವಿದ್ದು, ಬಹುಪಾಲು ಪ್ರಾಣಿ, ಪಕ್ಷಿಯ ಜಾತಿಗಳು ಯಶಸ್ವಿಯಾಗಿ ಸಂಕುಲವೃದ್ಧಿ ಮಾಡುತ್ತಿವೆ.ಪೊಲೀಸ್‌ ಶ್ವಾನದಳಕ್ಕೂ ಕೂಲರ್‌:ಮಂಗಳೂರಿನ ಪೊಲೀಸ್ ಇಲಾಖೆಯಲ್ಲಿನ ಶ್ವಾನದಳಕ್ಕೂ ಬೇಸಿಗೆಯ ಬಿಸಿಲ ತಾಪದ ದುಷ್ಪರಿಣಾಮ ತಡೆಗೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಶ್ವಾನಗಳ ಕೊಠಡಿಯಲ್ಲಿ ಫ್ಯಾನ್, ಕೂಲರ್ ವ್ಯವಸ್ಥೆ ಮಾಡಲಾಗಿದೆ. ಶ್ವಾನಗಳ ವಾಕಿಂಗ್ ಸಮಯ ಬದಲಿಸಿ, ಬಿಸಿಲ ಪ್ರಮಾಣ ಕಡಿಮೆ ಇರುವ ವೇಳೆ ವಾಕಿಂಗ್ ಮಾಡಿಸುವುದು, ಆಹಾರದಲ್ಲೂ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.ಕೋಟ್‌:

ಪಿಲಿಕುಳದಲ್ಲಿ ಪ್ರಾಣಿ-ಪಕ್ಷಿಗಳಿಗೆ ಬೇಸಿಗೆಯ ಬಿಸಿಲ ತಾಪದಿಂದ ರಕ್ಷಣೆಗೆ ನೀರು ಹಾಯಿಸುವ, ಗೂಡಿಗೆ ಫ್ಯಾನ್, ಕೂಲರ್ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಗೂಡಿನ ಮೇಲ್ಛಾವಣಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಲಾಗುತ್ತಿದೆ. ಬೇಸಿಗೆಯ ತಾಪದಿಂದ ಪ್ರಾಣಿ-ಪಕ್ಷಿಗಳಿಗೆ ಯಾವುದೇ ತೊಂದರೆ ಆಗದಂತೆ ಪೂರಕ ವಾತಾವರಣ ಕಲ್ಪಿಸಲಾಗಿದೆ.

- ನೇಹಾ, ಎಸಿಎಫ್, ನಿರ್ದೇಶಕರು ಪಿಲಿಕುಳ ಝೂ, ಮಂಗಳೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರು ನಗರದಲ್ಲಿ 15 ಲಕ್ಷ ಗಿಡ ನೆಡುವ ಅಭಿಯಾನ ಜೂ.27ರಿಂದ ಆರಂಭ
ಡಿಎಸ್ ಮ್ಯಾಕ್ಸ್ ಪ್ರಾಪರ್ಟೀಸ್‌ನ 20ನೇ ವರ್ಷದ ಸಂಭ್ರಮಾಚರಣೆ