ದಯಾನಂದ ಕಲ್ನಾರ್
ರಾಜ್ಯದಲ್ಲಿ ಬೇಸಿಗೆಯ ಬಿಸಿಲ ತಾಪ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ಮಾನವರ ಜೊತೆಗೆ ಪ್ರಾಣಿ-ಪಕ್ಷಿಗಳು ಕೂಡ ಬಿಸಿಲ ತಾಪದಿಂದ ತತ್ತರಿಸುತ್ತಿವೆ. ಹೀಗಾಗಿ, ಬಿಸಿಲ ತಾಪದಿಂದ ರಕ್ಷಿಸಲು ಮಂಗಳೂರಿನ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಜೈವಿನ ಉದ್ಯಾನದಲ್ಲಿ (ಝೂ) ಪ್ರಾಣಿ-ಪಕ್ಷಿಗಳ ರಕ್ಷಣೆಗೆ ಫ್ಯಾನ್, ಕೂಲರ್, ಸ್ಪ್ರಿಂಕ್ಲರ್ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿ ಬಿಸಿಲ ತಾಪಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಿಲುಕುವ ಪ್ರಾಣಿ-ಪಕ್ಷಿಗಳಿಗೆ ಆದ್ಯತೆ ನೀಡಲಾಗಿದೆ. ಪ್ರಾಣಿ-ಪಕ್ಷಿಗಳಿಗೆ ಸಮರ್ಪಕ ಕುಡಿಯುವ ನೀರು ಪೊರೈಕೆ, ಗೂಡಿನಲ್ಲಿ ಫ್ಯಾನ್ ಅಳವಡಿಕೆ, ಗೂಡಿನ ಮೇಲ್ಛಾವಣಿ ಮೂಲಕ ಗೂಡು ತಂಪಾಗಿರುವಂತೆ ಮಾಡಲು ಮೇಲ್ಛಾವಣಿಗೆ ಸ್ಲಿಂಕ್ಲರ್ ಮೂಲಕ ನೀರು ಹಾಯಿಸುವ ವ್ಯವಸ್ಥೆ ಮಾಡಲಾಗಿದೆ. ಝೂನ ಪ್ರಾಣಿಗಳ ಓಡಾಟದ ಪ್ರದೇಶಗಳಲ್ಲಿ ಅಲ್ಲಲ್ಲಿ ನೀರಿನ ತೊಟ್ಟಿ ನಿರ್ಮಿಸಿ, ಅದರಲ್ಲಿ ನೀರು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಪ್ರಾಣಿಗಳು ಮಿಂದು ಬೇಸಿಗೆಯ ಬಿಸಿಲಿನಿಂದ ತಮ್ಮನ್ನು ತಂಪಾಗಿಸಿಕೊಳ್ಳುತ್ತಿವೆ.ಪಿಲಿಕುಳ ಝೂ, ಅರಣ್ಯ ಪ್ರದೇಶದಲ್ಲಿಯೇ ಇರುವುದರಿಂದ ಇಲ್ಲಿ ಹೆಚ್ಚಿನ ಪ್ರಮಾಣದ ಬಿಸಿಲಿನ ತೀವ್ರತೆ ಇಲ್ಲ. ಆದರೂ ಪೂರಕ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೈಮೇಲೆ ಹೆಚ್ಚಿನ ಕೂದಲು ಇರುವ ಪ್ರಾಣಿಗಳ ಹೊರತು ಕೆಲವು ಪ್ರಾಣಿಗಳ ಮೈಗೆ, ಗೂಡಿಗೆ ಪೈಪ್ ಮೂಲಕ ನೀರು ಹಾಕುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೆ, ಬೇಸಿಗೆಯಲ್ಲಿ ಪ್ರಾಣಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲೂ ನಿಗಾ ವಹಿಸಲಾಗುತ್ತಿದೆ. ಬೇಸಿಗೆಯ ಬಿಸಿಯ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ.
ಪಿಲಿಕುಳದಲ್ಲಿ ಪ್ರಾಣಿ-ಪಕ್ಷಿಗಳಿಗೆ ಬೇಸಿಗೆಯ ಬಿಸಿಲ ತಾಪದಿಂದ ರಕ್ಷಣೆಗೆ ನೀರು ಹಾಯಿಸುವ, ಗೂಡಿಗೆ ಫ್ಯಾನ್, ಕೂಲರ್ ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ. ಗೂಡಿನ ಮೇಲ್ಛಾವಣಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಲಾಗುತ್ತಿದೆ. ಬೇಸಿಗೆಯ ತಾಪದಿಂದ ಪ್ರಾಣಿ-ಪಕ್ಷಿಗಳಿಗೆ ಯಾವುದೇ ತೊಂದರೆ ಆಗದಂತೆ ಪೂರಕ ವಾತಾವರಣ ಕಲ್ಪಿಸಲಾಗಿದೆ.