ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ

KannadaprabhaNewsNetwork |  
Published : Aug 26, 2025, 02:00 AM IST
ರಾಮದುರ್ಗದ ಹೆಸ್ಕಾಂ ವಿಭಾಗ ಕಚೇರಿ ಮತ್ತು ಉಪವಿಭಾಗದ ಕಚೇರಿಯ ನೂತನ ಕಟ್ಟಡವನ್ನು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಉದ್ಘಾಟಿಸಿದರು. | Kannada Prabha

ಸಾರಾಂಶ

ರೈತರ ಸಮಸ್ಯೆ ನಿವಾರಣೆಗೆಂದು ರಾಮದುರ್ಗದಲ್ಲಿಯೇ ವಿದ್ಯುತ್ ಪರಿಕರಗಳನ್ನು ದುರಸ್ತಿ ಮಾಡುವ ವಿಭಾಗ ಮಟ್ಟದ ಕಚೇರಿ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ರಾಮದುರ್ಗ

ಉಚಿತ ಭಾಗ್ಯಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ವಿರೋಧ ಪಕ್ಷದವರು ಬೊಬ್ಬೆ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಜೊತೆಗೆ ರಾಜ್ಯದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ರಾಮದುರ್ಗದ ವಿಭಾಗ ಕಚೇರಿ ಮತ್ತು ಉಪವಿಭಾಗದ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಳವಡಿಸಿರುವ ಯೋಜನೆಗಳು ಅಭಿವೃದ್ಧಿ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.

ರೈತರು ತಮ್ಮ ಟಿಸಿಗಳು ಸುಟ್ಟರೆ ದೂರದ ಬೈಲಹೊಂಗಲಕ್ಕೆ ಹೋಗಿ ಬರಬೇಕಾಗಿತ್ತು. ರೈತರ ಸಮಸ್ಯೆ ನಿವಾರಣೆಗೆಂದು ರಾಮದುರ್ಗದಲ್ಲಿಯೇ ವಿದ್ಯುತ್ ಪರಿಕರಗಳನ್ನು ದುರಸ್ತಿ ಮಾಡುವ ವಿಭಾಗ ಮಟ್ಟದ ಕಚೇರಿ ಆರಂಭಿಸಲಾಗಿದೆ. ಇದರೊಂದಿಗೆ ವಿಭಾಗ ಮಟ್ಟದ ಡಿಎಸ್‌ಪಿ ಕಚೇರಿ ಮತ್ತು ಆರ್‌ಟಿಒ ಕಚೇರಿಗಳು ರಾಮದುರ್ಗದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ರೈತರಿಗೆ ಮತ್ತು ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯ ಧಾವಂತದಲ್ಲಿ ಲೈನ್‌ಮನ್‌ಗಳು ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಪವರ್‌ಮನ್‌ಗಳು ಇಲಾಖೆ ನೀಡಿರುವ ಜೀವ ರಕ್ಷಕ ಕವಚಗಳನ್ನು ಕಡ್ಡಾಯವಾಗಿ ಧರಿಸಿಕೊಂಡು ಕೆಲಸದಲ್ಲಿ ತೊಡಗಿಕೊಳ್ಳಬೇಕು. ನಿರ್ಲಕ್ಷ್ಯ ಮಾಡಿಕೊಂಡು ಜೀವ ಕಳೆದುಕೊಳ್ಳಬಾರದು ಎಂದು ತಿಳಿಸಿದರು.

ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮ್ ಪೀರ್ ಎಸ್.ಖಾದ್ರಿ ಮಾತನಾಡಿ, ರಾಜ್ಯದಲ್ಲಿಯೇ ಅತಿಹೆಚ್ಚು ಅಭಿವೃದ್ಧಿ ಹೊಂದಿರುವ ಕ್ಷೇತ್ರ ರಾಮದುರ್ಗ ಕ್ಷೇತ್ರವಾಗಿದೆ. ಇಲ್ಲಿನ ಶಾಸಕರು ಜನಪರ ಯೋಜನೆಗಳ ಅನುಷ್ಠಾನದ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕರು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್. ಮಾತನಾಡಿ, ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುವ ಸರ್ಕಾರಿ ಕಟ್ಟಡಗಳು ತೀವ್ರವಾಗಿ ಪೂರ್ಣಗೊಂಡು ಜನರ ಸೇವೆಗೆ ಅಣಿಯಾಗಬೇಕು. ರಾಮದುರ್ಗ ಕ್ಷೇತ್ರದಲ್ಲಿ ಅಧಿಕಾರಿಗಳೊಂದಿಗೆ ಸಹಕಾರದಿಂದ ಇರುವ ಶಾಸಕರು ಇರುವಾಗ ಅಧಿಕಾರಿಗಳು ಜನರಿಗೆ ಉತ್ತಮ ಗುಣಮಟ್ಟದ, ನಿಗದಿತ ಸಮಯದಲ್ಲಿ ವಿದ್ಯುತ್ ನೀಡಲು ಇಲಾಖೆ ಸಿದ್ಧವಿದೆ ಎಂದು ಹೇಳಿದರು.

ಹೆಸ್ಕಾಂ ಮುಖ್ಯ ಎಂಜಿನಿಯರ್ ಪ್ರವೀಣಕುಮಾರ ಚಿಕಡೆ ಮಾತನಾಡಿ, ರಾಮದುರ್ಗದ ವಿಭಾಗದಲ್ಲಿ 94 ಸಾವಿರ ಗ್ರಾಹಕರು ಮತ್ತು 23 ಸಾವಿರ ರೈತರಿಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ನೀಡಲಾಗುತ್ತಿದೆ. 124 ಜನ ವಸತಿ ಪ್ರದೇಶಗಳಿಗೆ ನಿರಂತರ ವಿದ್ಯುತ್ ಯೋಜನೆಯಡಿ ವಿದ್ಯುತ್ ನೀಡಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 8 ಹೊಸದಾಗಿ 110 ಕೆ.ವಿ.ಸ್ಟೇಷನ್‌ಗಳು ಮಂಜೂರಾಗಿದ್ದು, ಅವು ತ್ವರಿತವಾಗಿ ಕಾರ್ಯ ಆರಂಭಿಸಲಾಗುವುದು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಬಿ.ರಂಗನಗೌಡರ, ಪುರಸಭೆ ಅಧ್ಯಕ್ಷೆ ಲಕ್ಷ್ಮೀ ಕಡಕೋಳ, ಹೆಸ್ಕಾಂ ನಿರ್ದೇಶಕ ಎಸ್. ಜಗದೀಶ ಮಾತನಾಡಿದರು. ಕಾರ್ಯನಿರ್ವಾಹಕ ಎಂಜಿನಿಯರ್ ರವೀಂದ್ರ ಸಣ್ಣಕ್ಕಿ ಸ್ವಾಗತಿಸಿದರು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಕಾಶ ಕರಡಿ ವಂದಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ