ಹೊಸಪೇಟೆ: ಸಹಕಾರ ಸಂಸ್ಥೆಗಳು ಗ್ರಾಮೀಣ ಆರ್ಥಿಕತೆ ಬಲಪಡಿಸಿ, ಲಕ್ಷಾಂತರ ಕುಟುಂಬಗಳಿಗೆ ಸ್ವಾವಲಂಬನೆ ಬದುಕು ನೀಡುವಲ್ಲಿ ಪೂರಕವಾಗಿವೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕಿ, ಶಾಸಕಿ ಎಂ.ಪಿ. ಲತಾ ಹೇಳಿದರು.
ನಗರದ ಸುರಭಿ ಕಲ್ಯಾಣ ಮಂಟಪದ ಎಂ.ಪಿ. ರವೀಂದ್ರ ವೇದಿಕೆಯಲ್ಲಿ ರಾಜ್ಯ ಸಹಕಾರ ಮಹಾಮಂಡಳ, ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್, ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹೊಸಪೇಟೆ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಅವಳಿ ಜಿಲ್ಲೆಯ ಎಲ್ಲ ವರ್ಗದ ಸಹಕಾರಿ ಸಂಘಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗೆ ಸಹಕಾರ ಸಂಸ್ಥೆಗಳು ಬಹುಮುಖ್ಯ ಪಾತ್ರ ವಹಿಸಲಿವೆ. ಈಗಾಗಲೇ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ. ಜೊತೆಗೆ ಸಹಕಾರ ಸಂಸ್ಥೆಗಳಲ್ಲಿ ಭಾಗವಹಿಸುವ ಮೂಲಕ ಇನ್ನಷ್ಟು ಸದೃಢಗೊಳ್ಳಬಹುದಾಗಿದೆ. ಈ ಬಾರಿಯ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಧ್ಯೇಯ ‘ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಘಗಳು’ ಎಂಬುದಾಗಿದೆ. ಸಹಕಾರ ಸಂಸ್ಥೆಗಳು ದೇಶವನ್ನು ಆರ್ಥಿಕವಾಗಿ ಸದೃಢವಾಗಿಸುವುದರ ಜೊತೆಗೆ ಕೃಷಿ, ಹಾಲು, ವಸತಿ, ಕೈಗಾರಿಕೆ, ಬ್ಯಾಂಕಿಂಗ್ ಮತ್ತು ಸೇವಾ ವಲಯದಲ್ಲಿ ಕ್ಷಿಪ್ರ ಸಾಧನೆಯನ್ನು ಮಾಡುತ್ತಿವೆ. ಸಂಸ್ಥೆಗಳು ಪಾರದರ್ಶಕತೆ ಮತ್ತು ನಿಷ್ಠೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯವಾದುದು. ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಿದ್ದರಿಂದ ಪ್ರಸ್ತುತದಲ್ಲಿ ಸಹಕಾರ ಸಂಸ್ಥೆಗಳು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.
ಹೊಸಪೇಟೆ ಬಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಮಾತನಾಡಿ, ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣ ಮಾಡುವ ಸದುದ್ದೇಶದಿಂದ ಸಾಲ ಸೌಲಭ್ಯಕ್ಕಾಗಿ ಜಿಲ್ಲಾ ಸಹಕಾರ ಬ್ಯಾಂಕ್ನಿಂದ ₹100 ಕೋಟಿ ಘೋಷಣೆ ಮಾಡಲಾಗಿದೆ. ಸಹಕಾರ ಸಂಸ್ಥೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಬೇಕಿದೆ. ಸಾರ್ವತ್ರಿಕ ಅಭಿವೃದ್ದಿಗೆ ಮಹಿಳೆಯರ ಅಭಿವೃದ್ಧಿ ಬಹಳ ಮುಖ್ಯ. ಹೆಚ್ಚೆಚ್ಚು ಮಹಿಳೆಯರು ಸಹಕಾರ ಸಂಘಗಳಲ್ಲಿ ಭಾಗವಹಿಸಬೇಕಿದೆ. ಈ ಸಂಸ್ಥೆಗಳು ನಿಸ್ವಾರ್ಥ ಸೇವೆಯನ್ನು ಮಾಡುವವರಿಗೆ ಒಂದು ಉತ್ತಮ ವೇದಿಕೆಯಾಗಿದೆ. ನಂಬಿಕೆ ಮತ್ತು ವಿಶ್ವಾಸದ ಮೇಲೆ ಎಲ್ಲ ಸಹಕಾರ ಸಂಸ್ಥೆಗಳ ಭವಿಷ್ಯ ನಿಂತಿದೆ. ಸಹಕಾರಿ ಸಂಸ್ಥೆಗಳಲ್ಲಿನ ನೌಕರರು ಸಾರ್ವಜನಿಕರ ಜೊತೆಗೆ ಅತ್ಯುತ್ತಮವಾಗಿ ನಡೆದುಕೊಡು ಹೋಗುವ ಹೊಣೆಗಾರಿಕೆ ಪ್ರತಿಯೊಬ್ಬ ಸಹಕಾರಿಗಳ ಮೇಲಿದೆ. ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.ಸಹಕಾರ ಸಪ್ತಾಹದ ನಿಮಿತ್ತ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ‘ಸಹಕಾರ ಪತ್ರಿಕೆ’ಯ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಹಕಾರ ಕ್ಷೇತ್ರದಲ್ಲಿ ಸಾಧನೆಗೈದ ವಿವಿಧ ಸಾಧಕರಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಬಿಡಿಸಿಸಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಟಿ.ಎಂ.ಚಂದ್ರಶೇಖರಯ್ಯ ಮತ್ತು ಚೊಕ್ಕ ಬಸವನಗೌಡ್ರು, ಬಿಡಿಸಿಸಿ ಬ್ಯಾಂಕ್ನ ನಿರ್ದೇಶಕರಾದ ಹುಲುಗಪ್ಪ, ವಿಶ್ವನಾಥ, ಮೂಕಯ್ಯಸ್ವಾಮಿ, ಆನಂದ್, ಬಸವರಾಜ, ಅಪೆಕ್ಸ್ ಬ್ಯಾಂಕ್ನ ಮುಖ್ಯ ಕಾರ್ಯ ನಿರ್ವಹಾಕ ಅಧಿಕಾರಿ ದೇವರಾಜ್, ರಾಬಕೊ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಸತ್ಯನಾರಾಯಣ ನೆಕ್ಕಂಟಿ, ಹೊಸಪೇಟೆ ಬಿಡಿಸಿಸಿ ಬ್ಯಾಂಕ್ನ ಉಪಾಧ್ಯಕ್ಷ ಐ.ದಾರುಕೇಶ್, ಸೂಗನಗೌಡ, ಸೇರಿದಂತೆ ಅಪೆಕ್ಸ್ ಬ್ಯಾಂಕ್ನ ಅಧಿಕಾರಿಗಳು ಮತ್ತು ರೈತರು ಭಾಗವಹಿಸಿದ್ದರು.