ಶ್ರೀಗ್ರಾಮದೇವತೆಯೇ ತವರು ಮನೆ ಸುಂಕಾಪುರ ಮನೆತನ…!

KannadaprabhaNewsNetwork |  
Published : Jun 04, 2025, 02:43 AM IST
ಎಂ.ಬಿ.ಸುಂಕಾಫುರ(ಪ್ರಾಯೋಜಿತ ನೀಡಿದವರು.) | Kannada Prabha

ಸಾರಾಂಶ

ಸುಂಕಾಪುರ ಮನೆಗೆ ಮೊದಲು ಭೇಟಿ ನೀಡುವ ಕಾರಣದಿಂದ ಗ್ರಾಮದೇವತೆಯ ತವರು ಮನೆ ಸುಂಕಾಪುರ ಮನೆತನ ಎನ್ನಲಾಗುತ್ತದೆ

ಮಹೇಶ ಛಬ್ಬಿ ಮುಳಗುಂದ

ಎರಡು ಶತಮಾನಗಳ ಇತಿಹಾಸ ಹೊಂದಿರುವ ಪಟ್ಟಣದ ಹಳೆಹುಡಾ ಓಣಿಯಲ್ಲಿ ನೆಲೆಸಿದ ದುರ್ಗವ್ವ ಹಾಗೂ ದ್ಯಾಮವ್ವ ಗ್ರಾಮ ದೇವತೆಯರ ತವರು ಮನೆ ಪಟ್ಟಣದ ಸುಂಕಾಪುರ ಮನೆತನ.

ಪಟ್ಟಣದ ಭೋಗೇರಿ ಓಣಿಯ ಸುಂಕಾಪುರ ಮನೆತನದಲ್ಲಿ ಅನಾದಿ ಕಾಲದಿಂದಲೂ ವಾಸವಾಗಿರುವ ಶ್ರೀದೇವಿಗೆ ಇಲ್ಲಿ ಪೂಜ್ಯನೀಯ ಸ್ಥಾನವಿದೆ. ಭಕ್ತರ ಕಷ್ಟ ಕಾರ್ಪಣ್ಯ ಕಳೆಯುತ್ತಾಳೆ ಎಂಬ ಅಚಲವಾದ ನಂಬಿಕೆ ಈ ಮನೆತನ ಹಾಗೂ ಜನರಲ್ಲಿ ನೆಲೆಯೂರಿದೆ.

ಶಕ್ತಿ ಸ್ವರೂಪಿಣಿ, ಜಗನ್ಮಾತೆ, ನಂಬಿ ನಡೆದುಕೊಂಡ ಸಕಲ ಸದ್ಭಕ್ತರ ಕಾಮನೆ ಈಡೇರಿಸುವ, ಕಾಲಕಾಲಕ್ಕೆ ವಿವಿಧ ಅವತಾರಗಳನ್ನು ತಾಳಿ ಜಗದ್ರಕ್ಷಕಿಯಾಗಿರುವ ಆದಿಶಕ್ತಿ ಶ್ರೀಗ್ರಾಮ ದೇವತೆಯ ಟೋಪ ಜಾತ್ರಾ ಮಹೋತ್ಸವ ಜೂ.3 ರಿಂದ ಪ್ರಾರಂಭವಾಗಿದ್ದು, ಜಾತ್ರೆಯ ಮೊದಲ ದಿನ ಭಕ್ತರ ಮನೆಗಳಿಗೆ (ಕಟ್ಟಿ ಮನೆಗಳಿಗೆ) ಭೇಟಿ ನೀಡುವ ಪೂರ್ವದಲ್ಲಿ ಗ್ರಾಮದೇವತೆಯರ ಮೂರ್ತಿಗಳು ಸುಂಕಾಪುರ ಮನೆಗೆ ಬಂದು ಇಲ್ಲಿ ಪೂಜಾ ಕೈಂಕರ್ಯಗಳು ನಡೆದು ಶ್ರೀದೇವಿಯರಿಗೆ ಉಡಿ ತುಂಬಿದ ನಂತರ ಮುಂದಿನ ಕಟ್ಟೆ ಮನೆಗಳಿಗೆ (ಗ್ರಾಮದ ಪ್ರಮುಖರ) ಭೇಟಿ ನೀಡಿ ನಂತರ ಚೌತಮನೆಯ ಕಟ್ಟೆಗೆ ಆಗಮಿಸಿ ವಾಸ್ತವ್ಯ ಹೂಡುವದು, ಜತೆಗೆ ಭಕ್ತರ ಮನೆ ಮನೆಗೆ ತೆರಳಿ ಉಡಿ ತುಂಬಿಸಿಕೊಳ್ಳುವ ಕಾರ್ಯ ಜರಗುವುದು ಸಂಪ್ರದಾಯ.

ಸುಂಕಾಪುರ ಮನೆಗೆ ಮೊದಲು ಭೇಟಿ ನೀಡುವ ಕಾರಣದಿಂದ ಗ್ರಾಮದೇವತೆಯ ತವರು ಮನೆ ಸುಂಕಾಪುರ ಮನೆತನ ಎನ್ನಲಾಗುತ್ತದೆ.

ನವರಾತ್ರಿ ವಿಶೇಷ:

ಸುಂಕಾಪುರ ಮನೆಯಲ್ಲಿ ನವರಾತ್ರಿಯ 9 ದಿನಗಳ ಕಾಲ ಮನೆತನದ ಸರ್ವ ಸದಸ್ಯರು ಮಡಿ ಉಡಿಯಿಂದ ವಿಶೇಷವಾಗಿ ಶ್ರೀದೇವಿ ಆರಾಧನೆ ಮಾಡಿ ಕೊನೆ ದಿನ ದಾಸೋಹದ ಸೇವೆ ಮಾಡುತ್ತಾರೆ.

ನವರಾತ್ರಿಯ 9 ದಿನ ಶ್ರೀದೇವಿಗೆ ಪೂಜೆ, ಪುರಾಣ ಪಠಣ ನಡೆಯಲಿದ್ದು, ಕುಟುಂಬದ ಸದಸ್ಯರು ಪೂಜಾ ಕಾರ್ಯ ಹಾಗೂ ದೇವಿ ಪುರಾಣ ಪಠಣವನ್ನು ಮರಿದೇವರಮಠ ಗುರುಗಳು ನೆರವೇರಿಸುತ್ತಾ ಬಂದಿದ್ದಾರೆ.ಈ ಮನೆತನದ ದೇವಿಗೆ ಸಾಕಷ್ಟು ಭಕ್ತ ಸಮೂಹವು ಇದೆ.

ಕಾರಹುಣ್ಣಿಮೆ ಸಮಯದಲ್ಲಿ ಗ್ರಾಮ ದೇವತೆಯಿಂದ ಈ ಮನೆತನದ ದೇವಿಗೆ ಬಾಸಿಂಗ್, ಉಲುಪಿ ಮೊದಲು ನೀಡಿ ನಂತರ ಊರಿನ 4 ಮನೆತನಕ್ಕೆ ನೀಡಿ ಕರಿ ಹರಿಯುವ ಪದ್ಧತಿ ಇದೆ. ರೈತರು ಹೊಲ ಬಿತ್ತನೆ ಸಮಯದಲ್ಲಿ ದೇವಿಗೆ ಬಿತ್ತನೆ ಬೀಜಗಳನ್ನು ನೈವೇದ್ಯ ಮಾಡಿದ ನಂತರ ಬಿತ್ತನೆ ಮಾಡುವುದು ಸಹ ವಿಶೇಷವಾಗಿದೆ.

ಬ್ರಿಟಿಷರ್‌ ಕಾಲದಿಂದಲೂ ನಮ್ಮ ಸುಂಕಾಪುರ ಮನೆತನದಲ್ಲಿ ಶ್ರೀದೇವಿ ಮೂರ್ತಿ ಇದೆ. ಇಲ್ಲಿ ನವರಾತ್ರಿ ಸಮಯದಲ್ಲಿ ವಿಶೇಷ ಪೂಜೆ, ಪುರಾಣ ಪಾರಾಯಣ ನಡೆಯುತ್ತದೆ. ಅದೇ ರೀತಿ 12 ವರ್ಷಗಳಿಗೊಮ್ಮೆ ನಡೆಯುವ ಶ್ರೀಗ್ರಾಮದೇವತಾ ಜಾತ್ರಾ ಸಮಯದಲ್ಲಿ ಶ್ರೀದೇವಿ ಮೂರ್ತಿಗಳು ಭಕ್ತರ ಮನೆಗಳಿಗೆ (5 ಕಟ್ಟಿಮನೆಗಳಿಗೆ) ಭೇಟಿ ನೀಡುವ ಸಮಯದಲ್ಲಿ ಮೊದಲು ನಮ್ಮ ಸುಂಕಾಪುರ ಮನೆತನಕ್ಕೆ ದೇವಿ ಮೂರ್ತಿಗಳು ಬಂದು ಇಲ್ಲಿ ವಿಶೇಷ ಪೂಜೆ, ಉಡಿ ತುಂಬಿದ ನಂತರ ಮುಂದಿನ ಕಟ್ಟಿ ಮನೆಗಳಿಗೆ ಶ್ರೀಗ್ರಾಮದೇವತೆಯರ ಮೂರ್ತಿಗಳು ತೆರಳುತ್ತವೆ ಎಂದು ನಿವೃತ್ತ ಕೃಷಿ ಅಧಿಕಾರಿ ಎಂ.ಬಿ.ಸುಂಕಾಪುರ ತಿಳಿಸಿದ್ದಾರೆ.

PREV

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು