ವಿದ್ಯಾರ್ಥಿ ಸಂಘದ ಉದ್ಘಾಟನೆ । ಪ್ರತಿಭಾ ಪುರಸ್ಕಾರ
ಶಿಕ್ಷಕರಾಗಬೇಕೆಂಬ ಮಹದಾಸೆ ಇಟ್ಟುಕೊಂಡು ಬಿ.ಇಡಿ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದೀರಿ. ಒಪ್ಪಿಕೊಂಡು- ಅಪ್ಪಿಕೊಂಡು ತರಬೇತಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದರೆ, ನೀವೇ ಉತ್ತಮ ಶಿಕ್ಷಕರಾಗಿ ರೂಪುಗೊಳ್ಳುತ್ತೀರಿ. ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಹಿರಿಮೆ-ಗರಿಮೆ ಉಳಿಸಿಕೊಂಡು ಆದರ್ಶಪ್ರಾಯ ಆಗಿರುವುದೇ ಶಿಕ್ಷಕ ವೃತ್ತಿ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಪ್ಪ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಇಂದಿರಾಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.ಶಿಕ್ಷಕ ಒಬ್ಬ ಶಿಲ್ಪಿಯಿದ್ದಂತೆ. ಶಿಲ್ಪಿ ಹೇಗೆ ಒಂದು ಕಲ್ಲನ್ನು ತಿದ್ದಿ, ತೀಡಿ ಅದಕ್ಕೊಂದು ರೂಪಕೊಟ್ಟು ಮೂರ್ತಿಯನ್ನಾಗಿ ಪರಿವರ್ತನೆ ಮಾಡಿ, ಪೂಜೆಗೊಳ್ಳುವಂತೆ ಮಾಡುತ್ತಾನೆಯೋ, ಅದೇ ರೀತಿಯಲ್ಲಿ ಒಬ್ಬ ಶಿಕ್ಷಕ, ವಿದ್ಯಾರ್ಥಿಗಳನ್ನು ತಿದ್ದಿ ತೀಡಿ, ತನ್ನ ಆದರ್ಶ ನಡೆಯ ಮೂಲಕ ಪ್ರೇರಣಾದಾಯಕ ಶಕ್ತಿಯಾಗಿ, ಭವಿಷ್ಯದಲ್ಲಿ ಮಾದರಿ ವ್ಯಕ್ತಿಯಾಗುವಂತೆ ರೂಪುಗೊಳಿಸುತ್ತಾನೆ. ಹಾಗೆಯೇ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುಪರಂಪರೆ ಹಾಗೂ ಶಿಕ್ಷಕ ವೃತ್ತಿಗೆ ವಿಶಿಷ್ಟ ಸ್ಥಾನ ಕಲ್ಪಿಸಲಾಗಿದೆ. ಶಿಕ್ಷಕನೊಬ್ಬ ತಪ್ಪು ದಾರಿಯಲ್ಲಿ ನಡೆದರೆ, ಸಾವಿರ ವಿದ್ಯಾರ್ಥಿಗಳು ಅವನ ದಾರಿಯನ್ನೇ ಅನುಸರಿಸಿಕೊಂಡು ಜೀವನದಲ್ಲಿ ಎಡುವುತ್ತಾರೆ. ಹಾಗಾಗಿ, ಶಿಕ್ಷಕರಾಗಲು ತರಬೇತಿ ಪಡೆಯುತ್ತಿರುವ ನೀವು ಉತ್ತಮ ಶಿಕ್ಷಕರಾಗಿ ರೂಪುಗೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಬದುಕುಕಟ್ಟಿಕೊಳ್ಳಿ ಎಂದರು.
2022-23 ಮತ್ತು 2023-2024 ನೇ ಸಾಲಿನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರ್ಯಾಂಕ್ ಪಡೆದ ಪ್ರಶಿಕ್ಷಣಾರ್ಥಿಗಳಾದ ಎಂ.ಭಾನುಪ್ರಿಯ, ಎಸ್. ಸ್ನೇಹ, ಎಚ್.ವಿ.ದಿವ್ಯ, ಎಸ್.ನವೀನ್, ಜಿ.ಸಿಂಧೂ ಇವರನ್ನು ಸನ್ಮಾನಿಸಲಾಯಿತು.
ಬಿ.ಇಡಿ ಒಂದು ತರಬೇತಿಯಲ್ಲ, ಇದೊಂದು ಕಾರ್ಯಗಾರ. ನಮ್ಮ ಶಾಲಾ-ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರಮಟ್ಟದಲ್ಲಿ ಬೆಳೆಯಬೇಕೆಂಬ ಉದ್ದೇಶದಿಂದಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಂಡು ಸಾಧನೆಯ ಹಾದಿಯಲ್ಲಿ ನಡೆಯಬೇಕು.