ಜಿಗಳಿಕೊಪ್ಪದ ಶ್ರೀ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ
ಕನ್ನಡಪ್ರಭ ವಾರ್ತೆ ಅಕ್ಕಿಆಲೂರುಆಧುನಿಕ ದಿನಗಳಲ್ಲಿ ಅಜ್ಞಾನ ಮಡುವಿನಲ್ಲಿ ಬಿದ್ದು, ಸಂಕುಚಿತ ಮನೋಭಾವನೆ ರೂಢಿಸಿಕೊಂಡಿರುವ ಮನುಷ್ಯ ಜಾಗೃತನಾಗಿ ಧರ್ಮದ ಹಾದಿಯಲ್ಲಿ ನಡೆಯಬೇಕಾದರೇ ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ ಎಂದು ವಿರಕ್ತಮಠದ ಶಿವಬಸವ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ಫೆ.೧೨ರಿಂದ ಫೆ.೨೨ರವರೆಗೆ ಅದ್ಧೂರಿಯಾಗಿ ನಡೆಯಲಿರುವ ಜಿಗಳಿಕೊಪ್ಪದ ಶ್ರೀ ಆಂಜನೇಯ ದೇವಸ್ಥಾನದ ಲೋಕಾರ್ಪಣೆ ಹಿನ್ನೆಲೆ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಜಗತ್ತಿನ ಕಲ್ಯಾಣಕ್ಕಾಗಿ ಜನ್ಮ ತಳೆದ ಸನಾತನ ಹಿಂದೂ ಧರ್ಮ ಮನುಕುಲದ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದು, ಧರ್ಮದ ಆಚರಣೆಗಳು ಪ್ರತಿಯೊಬ್ಬ ವ್ಯಕ್ತಿಗೂ ಶಾಶ್ಚತ ನೆಮ್ಮದಿಯನ್ನು ಕಂಡುಕೊಳ್ಳುವಲ್ಲಿ ಸಹಕಾರಿಯಾಗಿವೆ. ಕಾಲಕ್ರಮೇಣ ಆಚರಣೆಗಳಲ್ಲಿ ವ್ಯತ್ಯಾಸವಾಗುತ್ತಿರುವುದು, ಯುವಸಮೂಹದ ಧರ್ಮದ ಬಗೆಗಿನ ನಿಷ್ಕಾಳಜಿ ಇದಕ್ಕೆ ಪ್ರಮುಖ ಕಾರಣವಾಗಿದೆ. ವಿಶ್ವಕ್ಕೆ ಗುರು ಪರಂಪರೆ ಪರಿಚಯಿಸಿಕೊಟ್ಟ ಶ್ರೇಷ್ಠ ಧರ್ಮ ಸಾರ್ವಭೌಮತ್ವ ಸಾಧಿಸಬೇಕಾದರೇ ನಮ್ಮೆಲ್ಲರ ಪರಿಶ್ರಮ ಅಗತ್ಯ ಎಂದರು.ದೇವಸ್ಥಾನದ ಸಮಿತಿಯ ಸದಾಶಿವ ಬೆಲ್ಲದ ಮಾತನಾಡಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಗಳಿಂದಾಗಿ ವಿಶ್ವದ ದೇವರ ಮನೆ ಎನಿಸಿಕೊಂಡಿರುವ ದೇಶದಲ್ಲಿಂದು ಧರ್ಮಾಚರಣೆಗಳು ಮರೆಯಾಗುತ್ತಿರುವುದು ವಿಷಾದನೀಯ. ಮನುಕುಲದ ಉದ್ಧಾರಕ್ಕೆ ಶ್ರೇಷ್ಠ ಚಿಂತನೆಗಳ ಅಗತ್ಯತೆ ಇದ್ದು, ಹಿಂದೂ ಧರ್ಮದಲ್ಲಿ ಇವೆಲ್ಲ ಅಡಗಿವೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಲೋಕಾರ್ಪಣಾ ಸಮಿತಿಯ ರಾಜಣ್ಣ ಗೌಳಿ, ಲಕ್ಷ್ಮಣ ಹೊನ್ನಣ್ಣನವರ, ಶರತ್ ಸಣ್ಣವೀರಪ್ಪನವರ, ಉದಯ ವಿರುಪಣ್ಣನವರ, ರಂಗನಾಥ ದಾಸರ, ಶಿವಕುಮಾರ ದೇಶಮುಖ, ಶಿವಯೋಗಿ ಪಾಟೀಲ, ಅರುಣ ಸವಣೂರ, ವಿಜಯಕುಮಾರ ಪರಶಿಖ್ಯಾತಿ, ಶ್ರೀನಿವಾಸ್ ಸವಣೂರ, ವೀರೇಶ ನೆಲವಿಗಿ, ಶಿವಲಿಂಗಪ್ಪ ನೆಲ್ಲಿಕೊಪ್ಪ, ವಾಸುದೇವ ಗಿರಿಯಣ್ಣವರ, ಮಂಜುನಾಥ ಜೋಗಪ್ಪನವರ, ಮಂಜುನಾಥ ಬಂಕಾಪುರ, ಪ್ರಸಾದ ಪಾವಲಿ, ಪ್ರವೀಣ ಉತಳೇಕರ, ಹೇಮಂತ ಪೂಜಾರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.