ಕನ್ನಡಪ್ರಭ ವಾರ್ತೆ ಶಿರಾಳಕೊಪ
ಧರ್ಮ ಕಾರ್ಯದಲ್ಲಿ ಜಾತಿ ಭೇದ ಮರೆತು ಸನಾತನ ಹಿಂದೂ ಧರ್ಮದ ಸ್ಥಾಪನೆಗೆ ಒಂದಾಗುವ ಕಾಲ ಬಂದಿದೆ, ಜಾತ್ಯತೀತ ದೇಶದಲ್ಲಿ ಧರ್ಮದ ಹೆಸರಲ್ಲಿ ಭಯೋತ್ಪಾದನೆ ನಡೆಸಿ ಜೀವ ತೆಗೆಯುತ್ತಿರುವದು ಆತಂಕದ ಸಂಗತಿ, ಇಂತಹ ಘಟನೆಯನ್ನು ಪಕ್ಷಾತೀತವಾಗಿ ಜಾತ್ಯತೀತವಾಗಿ ಎಲ್ಲರೂ ಖಂಡಿಸಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಶಿರಾಳಕೊಪ್ಪ ಕೋರಿ ಟೋಪಿ ವಿರಕ್ತಮಠದಲ್ಲಿ ಗುರುವಾರ ರಾತ್ರಿ ನಡೆದ ಲಿಂ.ಶಿವಕುಮಾರ ಮಹಾಸ್ವಾಮಿಗಳ ಪುಣ್ಯಸ್ಮರಣೆ ಹಿನ್ನೆಲೆ ಪುಷ್ಪಾರ್ಚನೆ ಮಾಡಿ ನಂತರ ಮಠದ ಆವರಣದಲ್ಲಿ ನೂತನ ಉತ್ತರಾದಿಕಾರಿ ನೇಮಕ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಸಸಿಗೆ ನೀರೆರೆದು ಚಾಲನೆ ನೀಡಿ ಮಾತನಾಡಿದರು.
ಯಾವುದೇ ಮನೆಯಿರಲಿ ಮಠವಿರಲಿ ಮನೆಯ ಜವಾಬ್ದಾರಿಯ ಬೀಗದ ಕೈಯನ್ನು ಇನ್ನೊಬ್ಬರಿಗೆ ಕೊಡುವಾಗ ಹಿಂಜರಿಯುತ್ತಾರೆ. ಆದರೆ ಇಲ್ಲಿಯ ಮಠದ ಸ್ವಾಮಿಗಳು ಈ ಮಠವನ್ನು ಉಳಿಸಿ ಬೆಳಸಿ ಉತ್ತಮ ಹೆಸರನ್ನು ಪಡೆದಿದ್ದಾರೆ. ಅವರು ನೂತನ ಸ್ವಾಮಿಗಳಿಗೆ ತಮ್ಮ ಜವಾಬ್ದಾರಿಯಲ್ಲಿರುವ ಧರ್ಮದ ಬೀಗದ ಕೈಯನ್ನು ಮರಿಸ್ವಾಮಿಗಳಿಗೆ ಕೊಡಲು ಉತ್ಸುಕರಾಗಿದ್ದಾರೆ. ಸಕಲ ವಿದ್ಯೆಯನ್ನು ಕಲಿತು ಮಠಕ್ಕೆ ಉತ್ತರಾಧಿಕಾರಿಯಾಗಿ ಬಿಟ್ಟುಕೊಟ್ಟಂತಹ ಹಾವೇರಿಯ ಸದಾಶಿವ ಮಹಾಸ್ವಾಮಿಗಳಿಗೆ ಮೊದಲಿಗೆ ನಮಸ್ಕರಿಸಿ, ಈಗ ಶಿರಾಳಕೊಪ್ಪಕ್ಕೆ ಆಗಮಿಸಿರುವ ಪೂಜ್ಯ ನೂತನ ಉತ್ತರಾಧಿಕಾರಿ ವೀರಬಸವ ದೇವರಿಗೆ ಉತ್ತಮ ಕಾರ್ಯ ಮಾಡಲು ನಾವು ನಿಮ್ಮ ಬೆನ್ನಿಗೆ ನಿಂತಿರುತ್ತೇವೆ ಎಂದರು.ಪ್ರೀತಿಯಿಂದ ಸಾಕಿ ಸಲುಹಿ ವಯಸ್ಸಿಗೆ ಬಂದ ಮಗನನ್ನು ಅವರ ತಂದೆ ತಾಯಿಗಳು ಶಿರಾಳಕೊಪ್ಪ ಕೋರಿ ಟೋಪಿ ವಿರಕ್ತಮಠಕ್ಕೆ ಉತ್ತರಾಧಿಕಾರಿ ಆಗಲು ಸಮಾಜಕ್ಕೆ ಬಿಟ್ಟು ಕೊಡುತ್ತಿರುವ ಅವರ ಉದಾರತೆಯನ್ನು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, ಇಂದು ತಂದೆ ತಾಯಂದಿರು ಮಕ್ಕಳು ಬುದ್ದಿವಂತರಾಗಲಿ ಎಂದು ಬೇರೆ ರಾಜ್ಯ ಪಟ್ಟಣದಲ್ಲಿ ಶಿಕ್ಷಣ ಕೊಡಿಸುತ್ತೇವೆ. ಆದರೆ ಅವರು ಏನೇ ಶಿಕ್ಷಣ ಪಡೆದರೂ ಅವರಿಗೆ ಸಂಸ್ಕಾರದ ಅವಶ್ಯಕತೆ ಇದೆ. ಆದ್ದರಿಂದ ನಾವು ಮಕ್ಕಳನ್ನು ನಮ್ಮ ಹತ್ತಿರ ಇಟ್ಟುಕೊಂಡು ಶಿಕ್ಷಣ ಕೊಡಿಸಿ ಗುರು ಹಿರಿಯರಿಗೆ ಗೌರವ ಕೊಡುವಂತಹ ಸಂಸ್ಕಾರ ಕೊಡುವ ಅವಶ್ಯಕತೆ ಇದೆ ಎಂದರು. ಪ್ರಾರಂಭದಲ್ಲಿ ನೂತನ ಉತ್ತರಾಧಿಕಾರಿ ವೀರಬಸವ ದೇವರು ಭಕ್ತರನ್ನು ಉದ್ದೇಶಿಸಿ ಪ್ರವಚನ ನೀಡಿದರು.ವೇದಿಕೆ ಮೇಲೆ ಸಾನ್ನಿಧ್ಯವಹಿಸಿದ್ದ ಶಿರಾಳಕೊಪ್ಪ ವಿರಕ್ತಮಠದ ಹಿರಿಯ ಸ್ವಾಮಿಗಳಾದ ಸಿದ್ದೇಶ್ವರ ದೇವರು, ಹಿರೇಮಾಗಡಿ ಮುರಘರಾಜೇಂದ್ರ ಸ್ವಾಮಿಗಳು, ಹಿರೇಮಾಗಡಿ ಕಿರಿಯ ಸ್ವಾಮಿಗಳು, ವೀರಶೈವ ಸಮಾಜದ ಅಧ್ಯಕ್ಷ ಪ್ರಭುಸ್ವಾಮಿ ಆನೆಮಠ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಪುರಸಭೆ ಮಾಜಿ ಸದಸ್ಯ ಹಾಗೂ ವಿರಕ್ತಮಠ ಕಮಿಟಿ ಪ್ರಮುಖ ಐ.ಎಂ.ಶಿವಾನಂದಸ್ವಾಮಿ ಸ್ವಾಗತಿಸಿದರು. ಚೆನ್ನವೀರಶೆಟ್ಟಿ ಎಲ್ಲ ಸ್ವಾಮಿಗಳ ಸಂಸದರ ಸಹಿಇರುವ ಉತ್ತರಾದಿಕಾರಿ ನೇಮಕದ ಪತ್ರವನ್ನು ಸಭೆಗೆ ಓದಿ ಮಾಹಿತಿ ನೀಡಿದರು.