ಜ್ಞಾನ ಹೊಂದಿದವನೇ ನಿಜವಾದ ಶ್ರೀಮಂತ

KannadaprabhaNewsNetwork | Published : May 29, 2024 12:54 AM

ಸಾರಾಂಶ

ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಮಂಗಳವಾರ ನೂತನ ಪದ್ಮಾವತಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯವನ್ನು ಐನಾಪುರ ಗುರುದೇವಾಶ್ರಮದ ಬಸವೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಜಗತ್ತಿನಲ್ಲಿ ಹಣವಿದ್ದರೇ ಪ್ರಯೋಜನವಿಲ್ಲ, ಯಾವ ವ್ಯಕ್ತಿ ಜ್ಞಾನ ಹೊಂದಿರುತ್ತಾನೆ ಅವನೇ ನಿಜವಾದ ಶ್ರೀಮಂತ ಎಂದು ಐನಾಪುರ ಗುರುದೇವಾಶ್ರಮದ ಬಸವೇಶ್ವರ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಐನಾಪುರ ಪಟ್ಟಣದಲ್ಲಿ ಮಂಗಳವಾರ ನೂತನ ಪದ್ಮಾವತಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ದೃಷಿಯಿಂದ ಮಹಾದಾನಿ ಮಹಾವೀರ ಪಡನಾಡ ಅವರು ರಾಜ್ಯದ ವಿವಿಧ ಮೂಲೆಗಳಲ್ಲಿ ಶಿಕ್ಷಣ ಸಂಸ್ಥೆಗಳಿಗೆ ದಾನವನ್ನು ನೀಡುವ ಮೂಲಕ ಬಡ ವಿದ್ಯಾರ್ಥಿಗಳ ಪಾಲಿಗೆ ದೇವರಾಗಿದ್ದಾರೆ ಎಂದರು.ದೇಶದಲ್ಲಿ ಹಲವಾರು ಜನರು ಸಾವಿರಾರು ಕೋಟಿ ಒಡೆಯರಿದ್ದಾರೆ. ಆದರೆ, ಅವರು ಶ್ರೀಮಂತರಲ್ಲ, ಯಾರು ಆರ್ಥಿಕವಾಗಿ ಕಷ್ಟದಲ್ಲಿದ್ದಾರೋ ಅಂಥವರ ಭಾವನೆಗಳಿಗೆ ಸ್ಪಂದಿಸಿ ಹಂಚಿ ತಿನ್ನುವ ಗುಣ ಯಾರಲ್ಲಿರುತ್ತದೆಯೋ ಅವರೇ ನಿಜವಾದ ಶ್ರೀಮಂತರು. ಅಂಥ ಗುಣಗಳನ್ನು ಮಹಾವೀರ ಪಡನಾಡ ಹೊಂದಿದ್ದಾರೆ ಎಂದು ತಿಳಿಸಿದರು.ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರಾದ ಮಹಾವೀರ ಪಡನಾಡ ಮಾತನಾಡಿ, ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಪದ್ಮಾವತಿ ಶಿಕ್ಷಣ ಸಂಸ್ಥೆಯರು ಪದವಿ ಪೂರ್ವ ಮಹಾವಿದ್ಯಾಲಯವನ್ನು ಪ್ರಾರಂಭಿಸಿದ್ಧಾರೆ. ಇದಕ್ಕೆ ಆರ್ಥಿಕ ತೊಂದರೆ ಬಂದರೆ ನಾನು ಸಹಾಯ ಮಾಡಲು ಸದಾ ಸಿದ್ಧ ಎಂದು ವಾಗ್ದಾನ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷ ಸಂಜಯ ಕುಚನೂರೆ ಮಾತನಾಡಿ, ಕೇವಲ ದೊಡ್ಡ ಕಟ್ಟಡ ನಿರ್ಮಾಣ ಮಾಡಿ ಹವಾ ನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಿದರೇ ಸಾಲದು ಇಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು. ಅಂಥ ಕಾರ್ಯ ನಮ್ಮ ಸಂಸ್ಥೆ ಮಾಡುತ್ತಿದೆಂದು ಮಹಾವೀರ ಪಡನಾಡ ಅವರು ಈಗಾಗಲೇ ನಮ್ಮ ಸಂಸ್ಥೆಗೆ ₹50 ಲಕ್ಷ ದೇಣಿಗೆ ನೀಡಿದ್ದು, ಮತ್ತೆ ಆರ್ಥಿಕ ತೊಂದರೆ ಬಂದರೇ ಸಹಾಯ ಮಾಡುವ ಭರವಸೆ ನೀಡಿದ್ದು ನೋಡಿದರೇ ಅವರಿಗಿರುವ ಶಿಕ್ಷಣ ಪ್ರೇಮ ಎದ್ದು ಕಾಣುತ್ತದೆ ಎಂದು ಬಣ್ಣಿಸಿದರು.ಸಂಸ್ಥೆಯ ಅಧ್ಯಕ್ಷ ದಶರಥ ತೆರದಾಳೆ ಅಧ್ಯಕ್ಷತೆ ವಹಿಸಿದ್ದರು. ಕಚೇರಿ ಉದ್ಘಾಟನೆಯನ್ನು ಸಂಸ್ಥೆಯ ಉಪಾಧ್ಯಕ್ಷ ಖ್ಯಾತ ನ್ಯಾಯವಾದಿ ಸಂಜಯ ಕುಚನೂರೆ ನೆರವೇರಿಸಿದರು.

ಪ್ರಾಚಾರ್ಯ ಕೆ.ಜೆ.ಮಾನಗಾಂವೆ, ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತಿ ಸದಸ್ಯರಾದ ಪ್ರವೀಣ ಗಾಣಿಗೇರ, ಸಂಜಯ ಕುಚನೂರೆ, ಮುಖಂಡರಾದ ಯಶವಂತ ಪಾಟೀಲ, ಪ್ರಕಾಶ ಚಿನಗಿ, ಸಂತೋಷ ಪಾಟೀಲ, ಆಡಳಿತ ಮಂಡಳಿಯ ಸದಸ್ಯರಾದ ರವೀಂದ್ರ ಬಣಜವಾಡ, ಗಜಕುಮಾರ ಪಾಟೀಲ, ಪ್ರಮೋದ ಲಿಂಬಿಕಾತಿ, ಬಾಪುಸಾಬ ಪಾಟೀಲ, ಪ್ರಲ್ಹಾದ ತೋರೊ, ರಾವಸಾಬ ಕುಚನೂರೆ, ವಸಂತ ಹುದ್ದಾರ, ಸಿದ್ದಾಂತ ಬಣಜವಾಡ, ಮಹಾವೀರ ಪಾಟೀಲ, ಜಿನ್ನಪ್ಪ ತೆರದಾಳೆ, ಜಯಕುಮಾರ ಪಾಟೀಲ, ಮಹಾವೀರ ಲಿಂಬಿಕಾಯಿ, ಮೋಹನ ಪಾಟೀಲ, ಭರತೇಶ ತೇರದಾಳೆ, ಶಾಂತಿನಾಥ ಪಾಟೀಲ, ಸಂತೋಷ ತೇರದಾಳೆ, ಮಂಜುನಾಥ ಕುಚನೂರೆ, ಶ್ರೀಕಾಂತ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿರುವರು.

ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಪದ್ಮಾವತಿ ಶಿಕ್ಷಣ ಸಂಸ್ಥೆಯರು ಪದವಿ ಪೂರ್ವ ಮಹಾವಿದ್ಯಾಲಯವನ್ನು ಪ್ರಾರಂಭಿಸಿದ್ಧಾರೆ. ಇದಕ್ಕೆ ಆರ್ಥಿಕ ತೊಂದರೆ ಬಂದರೆ ನಾನು ಸಹಾಯ ಮಾಡಲು ಸದಾ ಸಿದ್ಧ.

-ಮಹಾವೀರ ಪಡನಾಡ, ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭದ ರಜತ ಸಾಧಕರು ಪ್ರಶಸ್ತಿ ಪುರಸ್ಕೃರು.

Share this article