ಗದಗ: ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ವಿಜಯಪುರದ ಅಜ್ಜಿ ಮನೆಗೆ ತೆರಳಿದ್ದ ಗದಗ ನಗರದ ಅನಿಲ ದಹಿಂಡೆ ಅವರ ಎರಡು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಮಕ್ಕಳ ಅಕಾಲಿಕ ಸಾವಿನ ಸುದ್ದಿ ಕೇವಲ ಕುಟುಂಬಸ್ಥರನ್ನು ಮಾತ್ರವಲ್ಲ, ಇಡೀ ಓಣಿಯ ಜನರೇ ಕಣ್ಣೀರು ಸುರಿಸುತ್ತಿದ್ದು ಆಕ್ರಂದನ ಮುಗಿಲು ಮುಟ್ಟಿದೆ.
ಅನಿಲ ದಹಿಂಡೆ ಮತ್ತು ಭಾಗ್ಯಶ್ರೀ ಅವರಿಗೆ ಮೂರು ಜನ ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು, ಒರ್ವ ಗಂಡು ಮಗು, ದೊಡ್ಡ ಮಗಳು ಗದಗನಲ್ಲಿಯೇ ತಂದೆ ತಾಯಿಯೊಂದಿಗೆ ಇದ್ದಾಳೆ. ಕಳೆದ 20 ದಿನಗಳ ಹಿಂದೆ ಎರಡನೇ ಮಗಳು ಅನುಷ್ಕಾ ಮತ್ತು ಮಗ ವಿಜಯ ವಿಜಯಪುರದ ಅಜ್ಜಿ ಮನೆಗೆ ರಜೆಗಾಗಿ ತೆರಳಿದ್ದರು. ಅಜ್ಜಿ ಮನೆಗೆ ತೆರಳಿದ್ದ ಎರಡೂ ಮಕ್ಕಳು ಶಾಶ್ವತವಾಗಿ ಮರಳಿ ಬಾರದೂರಿಗೆ ಹೋಗಿದ್ದು ತಂದೆ ತಾಯಿ, ಅಜ್ಜ, ಅಜ್ಜಿ ಸೇರಿದಂತೆ ಸಂಬಂಧಿಕರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ.
ಹೆತ್ತ ಕುಡಿಗಳನ್ನು ಕಳೆದುಕೊಂಡಿರುವ ತಾಯಿ ಭಾಗ್ಯಶ್ರೀ ರೋಧನೆ, ಆಕ್ರಂದನ ಮುಗಿಲು ಮುಟ್ಟಿದ್ದು, ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿರುವ ಸಂಬಂಧಿಕರು, ಓಣಿಯ ಪ್ರಮುಖರು ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದರೂ ಕಳೆದುಕೊಂಡ ಮಕ್ಕಳನ್ನು ತಂದು ಕೊಡುವರೇ ಎನ್ನುವ ಪೋಷಕರ ರೋಧನೆ ಕರುಳು ಹಿಂಡುವಂತಿತ್ತು. ಕಣ್ಣೀರ ಕೋಡಿಯ ಮಧ್ಯೆ ಗದಗ ನಗರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.