ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಅಶ್ವಾರೋಡ ಬಸವೇಶ್ವರ ಪುತ್ಥಳಿ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂಬ ತತ್ವದಡಿ ಅನುಭವ ಮಂಟಪ ಸ್ಥಾಪಿಸಿ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದವರು ಬಸವಣ್ಣ. ಆ ಕಾಲದಲ್ಲಿ ಜಾತಿ ವ್ಯವಸ್ಥೆಯ ಕರಾಳ ಬೇರುಗಳನ್ನು ಬುಡಸಮೇತ ಕಿತ್ತು ಹಾಕಲು ಶ್ರಮಿಸಿದವರು ಎಂದು ಬಣ್ಣಿಸಿದರು.
12ನೇ ಶತಮಾನದಿಂದ 21ನೇ ಶತಮಾನದ ವರೆಗೂ ಬಸವಾದಿ ಶರಣರು ಹೇಳಿಹೋದ ವಚನಗಳ ಸಾರದಿಂದಲೇ ಜನರು ಅರಿವಿನ ಕಡೆಗೆ ನಡೆಯುತ್ತಿದ್ದಾರೆ. ಶ್ರೀ ಸಾಮಾನ್ಯನೂ ಕೂಡ ಬಸವಣ್ಣ ಅವರ ಸಾಮಾಜಿಕ ಬದಲಾವಣೆಯ ಹಾದಿಯನ್ನು ಕಂಡು ಅವರ ಹಾದಿ ಉತ್ತಮವಾದುದು ಎಂದು ಒಪ್ಪಿಕೊಂಡಿದ್ದಾನೆ ಎಂದರು.ಅನೇಕ ವಚನಕಾರರು ಮಹಿಳಾ ಸ್ವಾವಲಂಬನೆ ಕುರಿತು ವಚನಗಳನ್ನು ರಚಿಸಿದ್ದಾರೆ. ಇಂತಹ ವಚನಗಳ ಸಾರವನ್ನು ಮಹಿಳೆಯರು ಓದಿ ತಿಳಿಯಬೇಕಿದೆ. ಆಯ್ದಕ್ಕಿ ಲಕ್ಕಮ್ಮನಂತಹ ಅನುಭವಮಂಟದ ಶರಣೆ ಅನೇಕ ಅರ್ಥಗರ್ಭಿತ ವಚನಗಳನ್ನು ರಚಿಸಿದ್ದಾರೆ. ಮಹಿಳೆ ಸ್ವಾವಲಂಬಿ ಆದಾಗ ಮಾತ್ರ ಈ ಸಮಾಜ ಮತ್ತಷ್ಟು ಮುಂದುವರೆಯಲು ಸಾಧ್ಯ ಎಂದರು.
ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಬಸವಣ್ಣನ ಆಶಯಗಳು ಸಮಾನತೆಯ ಸಮಾಜವನ್ನು ಜಾತಿ, ಮತಗಳಿಲ್ಲದ ಸಾಮಾಜಿಕ ವ್ಯವಸ್ಥೆ ನಿರ್ಮಾಣ ಆಗಬೇಕು ಎಂಬ ಮಹದಾಸೆ ಹೊಂದಿದ್ದರು. ಇಂತಹ ಮಹಾ ಪುರುಷನ ಜಯಂತಿಯಂದು ವಿವಿಧ ಸಂಘಟನೆಗಳು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.