ಗ್ರಾಮಗಳಲ್ಲಿನ್ನು ಆಡಳಿತಾಧಿಕಾರಿಗಳ ದರ್ಬಾರ್‌!

KannadaprabhaNewsNetwork |  
Published : Feb 11, 2026, 03:15 AM IST
ಲೋಕಾಪುರ ಮುಧೋಳ ತಾಪಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ. | Kannada Prabha

ಸಾರಾಂಶ

ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯ ಸನ್ನಿಹಿತವಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಬಹುತೇಕ ಗ್ರಾಪಂಗಳ ಸದಸ್ಯರ ಅಧಿಕಾರಾವಧಿ ಮುಗಿಯಲಿದ್ದು, ಗ್ರಾಪಂನಲ್ಲಿ ಪಿಡಿಒ ಆಡಳಿತ ಶುರುವಾಗಲಿದೆ.

ಶ್ರೀನಿವಾಸ ಬಬಲಾದಿ

ಕನ್ನಡಪ್ರಭ ವಾರ್ತೆ ಲೋಕಾಪುರ

ಗ್ರಾಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯ ಸನ್ನಿಹಿತವಾಗಿದೆ. ಫೆಬ್ರವರಿ ಮೊದಲ ವಾರದಲ್ಲಿ ಬಹುತೇಕ ಗ್ರಾಪಂಗಳ ಸದಸ್ಯರ ಅಧಿಕಾರಾವಧಿ ಮುಗಿಯಲಿದ್ದು, ಗ್ರಾಪಂನಲ್ಲಿ ಪಿಡಿಒ ಆಡಳಿತ ಶುರುವಾಗಲಿದೆ. ಇನ್ನೊಂದೆಡೆ ಚುನಾವಣೆ ಚಟುವಟಿಕೆ ಕೂಡ ಗರಿಗೆದರಿದೆ. ಲೋಕಾಪುರ ಹಾಗೂ ಬೆಳಗಲಿ ಪಟ್ಟಣ ಪಂಚಾಯತಿ ಹೊರತುಪಡಿಸಿ ಮುಧೋಳ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೨೨ ಗ್ರಾಪಂಗಳಿವೆ. ಬಹುತೇಕ ಗ್ರಾಮ ಚುನಾಯಿತ ಪ್ರತಿನಿಧಿಗಳ ಅಧಿಕಾರವಧಿ ಫೆಬ್ರವರಿ ತಿಂಗಳಲ್ಲಿ ಕೊನೆಗೊಳ್ಳಲಿದೆ.

ಗರಿಗೆದರಿದ ಚಟುವಟಿಕೆ:

ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಕ್ತಾಯಗೊಳ್ಳಲಿರುವ ಕಾರಣದಿಂದ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ತುರುಸಿನಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮೂರ‍್ನಾಲ್ಕು ತಿಂಗಳಿಂದ ಆ್ಯಕ್ಟಿವ್ ಆಗಿರುವ ಹಾಲಿ ಸದಸ್ಯರು, ಗ್ರಾಪಂಗೆ ಬಂದಿರುವ ೨೦೨೫-೨೬ನೇ ಸಾಲಿನ ಅನುದಾನದ ಬಳಕೆಗೆ ಮುಂದಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದರೆ ೨೦೨೫-೨೬ನೇ ಸಾಲಿನ ಅನುದಾನ ವಾಪಸ್ ಹೋಗಲಿದ್ದು, ಹೀಗಾಗಿ ಈ ಹಿಂದೆ ರೂಪಿಸಿದ ಕ್ರಿಯಾಯೋಜನೆ ಅನುಸಾರ ಅಧ್ಯಕ್ಷರ ಅನುಮೋದನೆ ಪಡೆದು ಕಾಮಗಾರಿಗೆ ತ್ವರಿತ ಚಾಲನೆ ನೀಡಿ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿದ್ದಾರೆ.

ಗ್ರಾಮ ಪಂಚಾಯತಿ ಹಾಲಿ ಸದಸ್ಯರ ಅವಧಿ ಮುಕ್ತಾಯಗೊಂಡಿದ್ದರಿಂದ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇನ್ನೂ ಚುನಾವಣೆ ಘೋಷಣೆ ಆಗಿಲ್ಲವಾದರೂ ಆಕಾಂಕ್ಷಿಗಳು ಈಗಲೇ ಕಣ ಸಿದ್ಧಗೊಳಿಸಲು ಮುಂದಾಗಿದ್ದಾರೆ. ಮತದಾರರ ಓಲೈಕೆಗೆ ವಿವಿಧ ರೀತಿಯ ಕಸರತ್ತು ಆರಂಭಿಸಿದ್ದಾರೆ.

ಯಾವ್ಯಾವ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ನೇಮಕ: ಭಂಟನೂರ, ಚಿಂಚಖಂಡಿ ಕೆ.ಡಿ., ದಾದನಟ್ಟಿ, ಹಲಗಲಿ, ಹೆಬ್ಬಾಳ, ಇಂಗಳಗಿ, ಕಸಬಾಜಂಬಗಿ, ಕುಳಲಿ, ಮಾಚಕನೂರ, ಮಳಲಿ, ಮಂಟೂರು, ಮೆಟಗುಡ್ಡ, ಮುಗಳಖೋಡ, ನಾಗರಾಳ, ಶಿರೋಳ, ಉತ್ತೂರ, ವಜ್ಜರಮಟ್ಟಿ, ಒಂಟಗೋಡಿ, ಸೋರಗಾಂವ, ಮೆಳ್ಳಿಗೇರಿ, ಬರಗಿ, ಗುಲಗಾಲಜಂಬಗಿ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಆಡಳಿತಾಧಿಕಾರಿಗಳ ಕರ್ತವ್ಯಗಳೇನು?: ಗ್ರಾಪಂಗಳಿಗೆ ನೇಮಕಗೊಂಡಿರುವ ಆಡಳಿತ ಅಧಿಕಾರಿಗಳು ಗ್ರಾಪಂ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಆಗುವವರೆಗೂ ಸರಕಾರದ ಸೂಚನೆಯಂತೆ ಕಾರ್ಯ ನಿರ್ವಹಿಸಲಿದ್ದಾರೆ.

ಪಂಚಾಯತಿ ವ್ಯಾಪ್ತಿಯಲ್ಲಿನ ದೈನಂದಿನ ಕೆಲಸಗಳು, ಸಿಬ್ಬಂದಿ ಮೇಲ್ವಿಚಾರಣೆ, ತೆರಿಗೆ ವಸೂಲಿ, ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ, ಸರ್ಕಾರದ ಅನುದಾನಗಳ ಸಮರ್ಪಕ ಬಳಕೆ, ಆಸ್ತಿ ದಾಖಲೆಗಳ ನಿರ್ವಹಣೆ, ಗ್ರಂಥಾಲಯಗಳ ಮೇಲ್ವಿಚಾರಣೆ ಸೇರಿದಂತೆ ಅನೇಕ ಜವಾಬ್ದಾರಿಗಳನ್ನು ಆಡಳಿತಾಧಿಕಾರಿಗಳು ನಿರ್ವಹಿಸಲಿದ್ದಾರೆ.

ಐದು ವರ್ಷಗಳವರೆಗೂ ತಾಪಂ, ಜಿಪಂ ಚುನಾವಣೆಗಳು ನಡೆದಿಲ್ಲ. ಹೀಗಾಗಿ ಜನಪ್ರತಿನಿಧಿಗಳಿಲ್ಲದೆ ಅಧಿಕಾರಿಗಳೇ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವೆಡೆ ಸಮರ್ಪಕ ಆಡಳಿತ ನೀಡಲು ಸಾಧ್ಯವಾಗಿಲ್ಲ. ಇನ್ನು ಗ್ರಾಪಂಗಳಲ್ಲೂ ಫೆಬ್ರವರಿ, ಮಾರ್ಚ್‌ನಲ್ಲಿ ಅನೇಕ ಗ್ರಾಪಂಗಳ ಚುನಾಯಿತರ ಆಳ್ವಿಕೆ ಮುಗಿಯಲಿದೆ. ಇಲ್ಲೂ ಕೂಡ ಅಧಿಕಾರಿಗಳ ಆಡಳಿತ ಆರಂಭವಾಗಲಿದೆ. ಈ ಮೂಲಕ ಪಂಚಾಯತ್ ರಾಜ್ ಇಲಾಖೆಯ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ಆಡಳಿತ ಕಾಣಬಹುದಾಗಿದೆ.

೨೦೨೦-೨೫ನೇ ಸಾಲಿಗೆ ರಚಿತವಾಗಿದ್ದ ಗ್ರಾಪಂಗಳ ಅವಧಿ ಮುಕ್ತಾಯವಾಗುತ್ತಿದೆ. ಈ ಹಿನ್ನೆಲೆ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಸರಕಾರದ ಸುತ್ತೋಲೆಯಲ್ಲಿ ನೀಡುವ ಸೂಚನೆಯಂತೆ ಆಡಳಿತಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಿ. ಸಂಗಪ್ಪ ಸೂತ್ತೋಲೆ ಹೊರಡಿಸಿದ್ದಾರೆ. -ಜಿಪಂ, ತಾಪಂ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದು ಹಲವು ವರ್ಷ ಕಳೆದಿವೆ. ನಮ್ಮ ಅವಧಿ ಮುಕ್ತಾಯದ ನಂತರವೂ ಚುನಾವಣೆ ಮುಂದೂಡಿದರೆ ಗ್ರಾಮದ ಅಭಿವೃದ್ಧಿಗೆ ಪೆಟ್ಟು ಬೀಳಲಿದೆ. ಶೀಘ್ರವೇ ನಿಗದಿತ ಅವಧಿಯಲ್ಲಿ ಚುನಾವಣೆ ನಡೆದರೆ ಒಳ್ಳೆಯದು.

- ಬೀರಪ್ಪ ಮಾಯಣ್ಣವರ ಮಾಜಿ ಗ್ರಾಪಂ ಅಧ್ಯಕ್ಷರು

ಮಾಜಿ ಅಧ್ಯಕ್ಷರ ಕಲಾವಧಿಯಲ್ಲಿನ ಜವಾಬ್ದಾರಿಗಳನ್ನು ಯಥಾವತ್ತಾಗಿ ಗ್ರಾಮ ಪಂಚಾಯತಿಯಲ್ಲಿ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ.

- ಶಿವಾನಂದ ನರಸನ್ನವರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಸಬಾಜಂಬಗಿ

ಬಹುತೇಕ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ೫ ವರ್ಷದ ಅಧಿಕಾರವಧಿ ಫೆಬ್ರವರಿ ಮೊದಲ ವಾರದಲ್ಲಿ ಮುಕ್ತಾಯಗೊಂಡಿದ್ದು, ಇನ್ನೂ ಕೆಲವೆಡೆ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿವೆ. ಗ್ರಾಪಂ ಆಡಳಿತಾಧಿಕಾರಿ ನೇಮಕಕ್ಕೆ ಸಂಂಬಂಧಿಸಿದಂತೆ ಜ.೨೮ರಂದು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಆದೇಶದ ಪ್ರಕಾರ ಎಲ್ಲ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.

- ಮಲ್ಲಿಕಾರ್ಜುನ ಅಂಬಿಗೇರ (ಪ್ರಭಾರ) ಎಇಇ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಉಪ ವಿಭಾಗ ಮುಧೋಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಶಾ ಸೌಹಾರ್ದ ಸೊಸೈಟಿಯಿಂದ ಸ್ವಚ್ಛತಾ ಅಭಿಯಾನ
ಧರ್ಮ ಉಳಿಯ ಹಿಂದೂಗಳು ಸಂಘಟಿತರಾಗಿ