ದೊಡ್ಡಬಳ್ಳಾಪುರ: ಪಡೆಯುವ ಪದವಿಗಳಿಗಿಂತ ಬದುಕುವ ರೀತಿ ನೀತಿಗಳು ಮುಖ್ಯವಾಗಿದ್ದು, ಮನುಷ್ಯ ಸಂಬಂಧಗಳ ಮೌಲ್ಯವನ್ನು ಅರಿತುಕೊಳ್ಳುವುದು ಮುಖ್ಯ ಎಂದು ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಸಂಗಪ್ಪ ಉಪಾಸೆ ಹೇಳಿದರು.
ಇಲ್ಲಿನ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರ ಮತ್ತು ಶ್ರೀ ದೇವರಾಜ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಯುವ ಮನಸ್ಸುಗಳು ಪಾಠ ಪ್ರವಚನಗಳ ಕಡೆ ಗಮನ ಹರಿಸುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ರೂಢಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಹೆತ್ತವರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಕೆಡುತ್ತಿರುವ ಸಮಾಜದಲ್ಲಿ ತಾವೂ ಅದೇ ಹಾದಿಯಲ್ಲಿ ನಡೆದು ಪೋಷಕರ ಕನಸನ್ನು ಭಗ್ನಗೊಳಿಸಬಾರದು. ಆಗ ಮಾತ್ರ ಶಿಕ್ಷಣದ ನೈಜ ಉದ್ದೇಶ ಈಡೇರುತ್ತದೆ ಎಂದು ಹೇಳಿದರು.ದೇವರಾಜ ಅರಸು ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ವಿದ್ಯಾರ್ಥಿಗಳು ಒಂದೇ ವಿಚಾರಕ್ಕೆ ಸೀಮಿತಗೊಳ್ಳದೆ ಕಲಿಕೆಯ ಮಾರ್ಗಗಳನ್ನು ವಿಸ್ತರಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ಕೃಷ್ಟ ದೇಶಪ್ರೇಮಿಯಾಗಬೇಕು. ಮೊಬೈಲ್ ಆಕರ್ಷಣೆಯಿಂದ ಬದುಕುನ್ನು ಹಾಳು ಮಾಡಿಕೊಳ್ಳಬಾರದು, ಹೆತ್ತವರು ತಮ್ಮ ತಮ್ಮ ಉದ್ಯೋಗಗಳ ನಿಮಿತ್ತ ಮಕ್ಕಳ ಬಗೆಗೆ ಗಮನ ನೀಡುವುದು ಕಡಿಮೆಯಾಗುತ್ತಿದೆ. ಮಕ್ಕಳೊಂದಿಗೆ ನಿತ್ಯ ಮಾತನಾಡುವ ಪರಿಪಾಠವನ್ನು ಹೆತ್ತವರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಸ್ಥೆಯ ಗೌರ್ನಿಂಗ್ ಕೌನ್ಸಿಲ್ ಸದಸ್ಯರಾದ ಜೆ.ಆರ್.ರಾಕೇಶ್, ಎನ್.ಉತ್ತಮ್ ಕುಮಾರ್, ಡಿ.ವಿದ್ವತ್, ಕಾಲೇಜಿನ ಪ್ರಾಂಶುಪಾಲ ಡಾ.ಆರ್.ನಾಗರಾಜ್, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಎಂ.ಚಿಕ್ಕಣ್ಣ, ಉಪಪ್ರಾಂಶುಪಾಲ ಕೆ. ದಕ್ಷಿಣಾಮೂರ್ತಿ, ಆರ್ಎಲ್ಜೆಐಟಿ ಶೈಕ್ಷಣಿಕ ನಿರ್ದೇಶಕ ಡಾ.ಶ್ರೀನಿವಾಸರೆಡ್ಡಿ, ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ನರಸಿಂಹರೆಡ್ಡಿ, ವಿಭಾಗದ ಮುಖ್ಯಸ್ಥರಾದ ಗೌರಪ್ಪ, ಸಿ.ಪಿ.ಪ್ರಕಾಶ್, ಪಿ.ಚೈತ್ರ, ಲಕ್ಷ್ಮೀಶ, ತಾವರೇನಾಯ್ಕ ಮತ್ತಿತರರು ಹಾಜರಿದ್ದರು.1ಕೆಡಿಬಿಪಿ1-
ದೊಡ್ಡಬಳ್ಳಾಪುರದ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಹಾಗೂ ಸಂಜೆ ಕಾಲೇಜುಗಳ ಘಟಿಕೋತ್ಸವವನ್ನು ಕಾರ್ಮಿಕ ಇಲಾಖೆ ಜಂಟಿ ಕಾರ್ಯದರ್ಶಿ ಡಾ.ಸಂಗಪ್ಪ ಉಪಾಸೆ ಉದ್ಘಾಟಿಸಿದರು.