ಪರಾರಿಯಾಗಿ ಗ್ರಾಮಕ್ಕೆ ಆಗಮಿಸಿದ್ದ ಪತ್ನಿ ತನ್ನ ಪ್ರಿಯಕರನನ್ನು ಆಕೆಯ ಪತಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು, ಈ ವೇಳೆ ಬಿಡಿಸಲು ಹೋದ ಇಬ್ಬರಿಗೆ ತೀವ್ರ ಗಾಯಗಳಾದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕೊಕಟನೂರು ಗ್ರಾಮದ ಯಾಸಿನ್ ಬಾಗೋಡಿ (21) ಮತ್ತು ಹೀನಾ ಕೌಸರ್ (19) ಕೊಲೆಯಾದ ಪ್ರೇಮಿಗಳು. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೌಫಿಕ ಖ್ಯಾಡಿ ಹತ್ಯೆ ಮಾಡಿದ ಆರೋಪಿ.
ಘಟನೆ ವಿವರ:
ಕೊಕಟನೂರು ಗ್ರಾಮದ ಆರೋಪಿ ತೌಪಿಕ್ ಖ್ಯಾಡಿ ಎಂಬಾತನ ಜೊತೆ ಹೀನಾ ಕೌಸರ್ ವಿವಾಹವಾಗಿತ್ತು. ಆದರೆ ಹೀನಾ ಕೌಸರ್ ಇತ್ತೀಚಿಗೆ ಅದೇ ಗ್ರಾಮದ ಯಾಸಿನ್ ಬಾಗೋಡಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಅಲ್ಲದೇ ಅನೇಕ ದಿನಗಳಿಂದ ಗ್ರಾಮದಿಂದ ಪರಾರಿಯಾಗಿದ್ದರು. ಇಬ್ಬರು ಗ್ರಾಮಕ್ಕೆ ಆಗಮಿಸಿದ ಬಗ್ಗೆ ಮಾಹಿತಿ ತಿಳಿದುಕೊಂಡ ತೌಫಿಕ್ ಖ್ಯಾಡಿ ರೊಚ್ಚಿಗೆದ್ದು ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಈ ಮಾರಾಮಾರಿಯಲ್ಲಿ ಜಗಳ ಬಿಡಿಸಲು ಹೋದ ಅಮೀನ್ ಬಾಗೋಡಿ ಮತ್ತು ಮುಶಿಪ್ ಮುಲ್ಲಾ ಎಂಬುವರಿಗೆ ತೀವ್ರ ಗಾಯವಾಗಿದ್ದು, ಗಾಯಾಳುಗಳಿಗೆ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮಿರಜ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ಶೋಧ ನಡೆಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.